
ಮಹಾರಾಷ್ಟ್ರದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರು ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವಂತಿಲ್ಲ, ಈ ನಿಯಮವೇ ಈಗ ಬಾಲಕಿಯೊಬ್ಬಳ ಸಾವಿಗೆ ಕಾರಣವಾಗಿದೆ. ಪಂಚಾಯತ್ ಚುನಾವಣೆಯಲ್ಲಿ ನಿಂತು ಗೆದ್ದು ಬರಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿದ್ದ ತಂದೆಯೊಬ್ಬ ತನಗಿದ್ದ ಮೂವರು ಮಕ್ಕಳಲ್ಲಿ ಒಬ್ಬಳು ಮಗಳ ಕತೆ ಮುಗಿಸಿದ್ದಾನೆ. ಮಹಾರಾಷ್ಟ್ರದ ನಾಂದೇಡ್ನ ಕೆರೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆರೂರ್ ಗ್ರಾಮದ ಪಾಂಡುರಂಗ್ ಕೊಂಡಮಂಗಲೆ ಎಂಬಾತನೇ ಚುನಾವಣೆಗೆ ನಿಲ್ಲುವುದಕ್ಕಾಗಿ ತನ್ನ ಮಗಳನ್ನೇ ಕೊಲೆ ಮಾಡಿದ ಪಾಪಿ ತಂದೆ.
ಈತನನ್ನು ತೆಲಂಗಾಣದ ಪೊಲೀಸರು ಬಂಧಿಸಿದ್ದಾರೆ. ಕೆರೂರ್ ಗ್ರಾಮದ ನಿವಾಸಿಯಾದ ಆರೋಪಿ ಪಾಂಡುರಂಗ ತನ್ನ ಆರು ವರ್ಷದ ಮಗಳು ಪ್ರಾಚಿಯನ್ನು ನಿಜಾಮಾಬಾದ್ನ ನಿಜಾಮ್ಸಾಗರ್ ಕಾಲುವೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. ಈತನಿಗೆ ಮಗಳು ಪ್ರಾಚಿಯ ಜೊತೆ ಇನ್ನಿಬ್ಬರು ಅವಳಿ ಹೆಣ್ಣು ಮಕ್ಕಳು ಹಾಗೂ ಓರ್ವ ಮಗನಿದ್ದನು ಹೀಗಾಗಿ ಈತ ಮಗಳನ್ನು ಕೊಲೆ ಮಾಡುವುದಕ್ಕೆ ನಿರ್ಧರಿಸಿದ್ದಾನೆ. ಜನವರಿ 29ರಂದು ಮಗಳು ಪ್ರಾಚಿಯನ್ನು ಕಾಲುವೆಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ಸೋಮವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆಯಲ್ಲಿ ತಮ್ಮ ಎರಡು ಕೃತಕ ಕಾಲು ತೆಗೆದು ತೋರಿಸಿ ಕಮ್ಯುನಿಷ್ಟರ ಕ್ರೌರ್ಯ ಬಿಚ್ಚಿಟ್ಟ ಕೇರಳದ ಬಿಜೆಪಿ ಸಂಸದ
ಪಾಂಡುರಂಗನಿಗೆ ಕೊಲೆ ಮಾಡುವುದಕ್ಕೆ ಪ್ಲಾನ್ ಹೇಳಿಕೊಟ್ಟ ಆರೋಪದ ಮೇಲೆ ಕೆರೂರಿನ ಪ್ರಸ್ತುತ ಸರಪಂಚ್ ಆಗಿರುವ ಗಣೇಶ್ ಶಿಂಧೆಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ನಿಜಾಮಾಬಾದ್ನ ನಿಜಾಮಸಾಗರ್ ಕಾಲುವೆಯಲ್ಲಿ ಅಪರಿಚಿತ ಹುಡುಗಿಯ ಶವ ಪತ್ತೆಯಾದ ನಂತರ ನಿಜಾಮಾಬಾದ್ನ ಬೋಧನ್ ನಗರದ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕಾನ್ಸ್ಟೆಬಲ್ ಒಬ್ಬರು ಶವದ ಛಾಯಾಚಿತ್ರವನ್ನು ವಾಟ್ಸಾಪ್ ಸ್ಟೇಟಸ್ ಹಾಕಿ ಪ್ರಕರಣದ ಬಗ್ಗೆ ಸುಳಿವು ನೀಡುವಂತೆ ಜನರನ್ನು ಕೇಳಿದರು ಜೊತೆಗೆ ಈ ಫೋಟೋವನ್ನು ಇತರ ಪೊಲೀಸ್ ಠಾಣೆಗಳಿಗೂ ಹಂಚಿದ್ದರು.
ಇದನ್ನೂ ಓದಿ: ಹೆಂಡ್ತಿ ಡಿವೋರ್ಸ್ ಕೇಳಿದ್ದಕ್ಕೆ ಮಗಳ ಕೊಂದ ಅಪ್ಪ: ತಡೆಯಲು ಬಂದ ದೊಡ್ಡಪ್ಪನ ಮೇಲೂ ಹಲ್ಲೆ
ಕೆಲವೇ ಗಂಟೆಗಳಲ್ಲಿ ಮಹಾರಾಷ್ಟ್ರದ ಮುಖೇಡ್ ತಾಲೂಕಿನ ಪೊಲೀಸ್ ಅಧಿಕಾರಿಗಳು ಬೋಧನ್ನಲ್ಲಿರುವ ಪೊಲೀಸರನ್ನು ಸಂಪರ್ಕಿಸಿ ಆ ಹುಡುಗಿಯನ್ನು ಗುರುತಿಸಿದ್ದು, ಶವವು ಕ್ಷೌರಿಕ ಪಾಂಡುರಂಗ ಅವರ ಮಗಳು ಪ್ರಾಚಿ ಎಂದು ಮಾಹಿತಿ ನೀಡಿದ್ದರು. ಪ್ರಾಚಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ನಂತರ ಬೋಧನ್ ಪೊಲೀಸರು ಪಾಂಡುರಂಗನನ್ನು ಕರೆಸಿ ವಿಚಾರಣೆ ನಡೆಸಿದಾಗ ಆತ ಕೆಲ ಪ್ರಶ್ನೆಗಳಿಗೆ ಅಸಮಂಜಸವಾಗಿ ಉತ್ತರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಗೊಂಡು ಆತನನ್ನು ಬಂಧಿಸಿ ಬೆಂಡೆಂತ್ತಿದ್ದಾಗ ತಾನೇ ಕೃತ್ಯವೆಸಗಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ.
ಸುಮಾರು ಆರು ತಿಂಗಳಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಗಣೇಶ್ ಶಿಂಧೆ ತನ್ನಗೆ ಒತ್ತಾಯಿಸಿದ್ದ, ಆದರೆ ತನಗೆ ಮೂವರು ಮಕ್ಕಳಿರುವುದರಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂಬುದು ಅರಿವಾದಾಗ ಇಬ್ಬರು ಸೇರಿ ಮಗಳ ಹತ್ಯೆಗೆ ಸಂಚು ರೂಪಿಸಿದ್ದಾರೆ.
ನಿಜಾಮಾಬಾದ್ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ ಮಾತನಾಡಿ, ಮೊದಲಿಗೆ ಆರೋಪಿಗಳು ಮಕ್ಕಳನ್ನು ಬಯಸುವ ದಂಪತಿಗಳಿಗೆ ದತ್ತು ನೀಡಲು ಪ್ರಯತ್ನಿಸಿತ್ತು. ಆ ಪ್ರಯತ್ನ ವಿಫಲವಾದಾಗ, ಅವರು ಪ್ರಾಚಿಯನ್ನು ಕೊಲ್ಲಲು ಸಂಚು ರೂಪಿಸಿದ್ದರು. ಜನವರಿ 29 ರಂದು, ಪಾಂಡುರಂಗ ಪ್ರಾಚಿಯೊಂದಿಗೆ ನಿಜಾಮಸಾಗರ್ ಕಾಲುವೆಗೆ ಬಂದು ತನ್ನ ಗ್ರಾಮಕ್ಕೆ ಹಿಂತಿರುಗುವ ಮೊದಲು ಅವಳನ್ನು ನೀರಿಗೆ ತಳ್ಳಿದರು ಎಂದು ಸಾಯಿ ಚೈತನ್ಯ ಹೇಳಿದ್ದಾರೆ. ಒಟ್ಟಿನಲ್ಲಿ ತಂದೆಯೋರ್ವ ತನ್ನ ರಾಜಕೀಯ ಮಹತ್ವಕಾಂಕ್ಷೆ ಈಡೇರಿಸಿಕೊಳ್ಳುವುದಕ್ಕಾಗಿ ತನ್ನ ಮಗಳನ್ನೇ ಬಲಿ ಕೊಟ್ಟಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ