
ಭೋಪಾಲ್: ನಿನ್ನೆಯಷ್ಟೇ ರಾಜಸ್ಥಾನದಲ್ಲಿ ಒಟ್ಟು ಐವರು ಮಕ್ಕಳು ಸಾವನ್ನಪ್ಪಿದ ಬೆನ್ನಲೇ ಈಗ ಮಧ್ಯಪ್ರದೇಶದಲ್ಲಿ ಇದೇ ರೀತಿಯ ದುರಂತವೊಂದು ವರದಿಯಾಗಿದೆ. 3 ವಾರಗಳಲ್ಲಿ ಒಟ್ಟು ಆರು ಮಕ್ಕಳು ಸಾವನ್ನಪ್ಪಿದ್ದು, ಕಪ್ ಸಿರಪ್ ಸೇವಿಸಿದ ನಂತರವೇ ಈ ದುರಂತ ಸಂಭವಿಸಿದೆ. ಮೃತ ಮಕ್ಕಳು 1 ರಿಂದ 7 ವರ್ಷ ಪ್ರಾಯದವರಾಗಿದ್ದಾರೆ. ಮಧ್ಯಪ್ರದೇಶದ ಚಿಂದ್ವಾರದಲ್ಲಿ ಕಪ್ ಸಿರಪ್ ಸೇವಿಸಿದ ನಂತರ ಮಕ್ಕಳಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಂಡು ಮಕ್ಕಳು ಸಾವನ್ನಪ್ಪಿದ್ದು, ಇದಾದ ನಂತರ ಅಧಿಕಾರಿಗಳು ಕಪ್ ಸಿರಪ್ನ ಪ್ರಿಸ್ಕ್ರಿಪ್ಷನ್, ಮಾರಾಟ ಮತ್ತು ಬಳಕೆಯನ್ನು ತಡೆ ಹಿಡಿದಿದ್ದಾರೆ.
ಸೆಪ್ಟೆಂಬರ್ 4 ರಿಂದ ಸೆಪ್ಟೆಂಬರ್ 26ರ ಮಧ್ಯೆ ಮಕ್ಕಳು ಮೂತ್ರ ಪಿಂಡದ ಸಮಸ್ಯೆ ಹಾಗೂ ಅನುರಿಯಾ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.(ಅನುರಿಯಾ ಎಂಬುದು ಒಂದು ಗಂಭೀರ ವೈದ್ಯಕೀಯ ಸ್ಥಿತಿಯಾಗಿದ್ದು, ಮೂತ್ರದ ಉತ್ಪಾದನೆಯಲ್ಲಿನ ಕೊರತೆಯ ಸಮಸ್ಯೆಯಾಗಿದೆ.)
ಮಕ್ಕಳ ಸಾವಿನ ನಂತರ ಆರು ಅಪ್ರಾಪ್ತ ಮಕ್ಕಳಿಗೆ ನೀಡಲಾದ ಔಷಧಿಗಳ ವಿಶ್ಲೇಷಣೆಯಲ್ಲಿ ಎರಡು ಕೆಮ್ಮಿನ ಸಿರಪ್ಗಳು ಸಾಮಾನ್ಯವಾಗಿ ಇರುವುದು ಕಂಡು ಬಂದಿದೆ. ಸಿರಪ್ಗಳ ಮಾದರಿಗಳನ್ನು ವಿವರವಾದ ಪರೀಕ್ಷೆಗೆ ಕಳುಹಿಸಲಾಗಿರುವುದರಿಂದ, ಜಿಲ್ಲಾಡಳಿತವು ವೈದ್ಯರಿಗೆ ಅವುಗಳನ್ನು ರೋಗಿಗಳಿಗೆ ಶಿಫಾರಸು ಮಾಡದಂತೆ ಸೂಚಿಸಿದೆ ಮತ್ತು ಅವುಗಳ ಮಾರಾಟ ಮತ್ತು ಬಳಕೆಯನ್ನು ಕೂಡ ನಿರ್ಬಂಧಿಸಿದೆ.
ಸಿರಪ್ ಮಾದರಿಗಳ ಪರೀಕ್ಷಾ ವರದಿಗಳು ಹೊರ ಬರುವವರೆಗೆ, ಆ ಸಿರಪ್ಗಳ ಬಳಕೆ, ಮಾರಾಟ ಮತ್ತು ಪ್ರಿಸ್ಕ್ರಿಪ್ಷನ್ ಅನ್ನು ನಿರ್ಬಂಧಿಸಲು ಸಲಹೆ ನೀಡಲಾಗಿದೆ. ಹಾಗೆಯೇ ಜಿಲ್ಲೆಯ ವೈದ್ಯರು ಕೆಮ್ಮು ಮತ್ತು ಶೀತ ಸೇರಿದಂತೆ ವಿವಿಧ ರೀತಿಯ ಔಷಧಿಗಳನ್ನು ಶಿಫಾರಸು ಮಾಡುವ ಬದಲು ಜ್ವರಕ್ಕೆ ಪ್ಯಾರೆಸಿಟಮಾಲ್ ಅನ್ನು ಮಾತ್ರ ಶಿಫಾರಸು ಮಾಡುವಂತೆ ನಿರ್ದಿಷ್ಟ ಔಷಧಿಗಳನ್ನು ಮಾತ್ರ ಶಿಫಾರಸು ಮಾಡುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಚಿಂದ್ವಾರಾ ಜಿಲ್ಲಾ ಕಲೆಕ್ಟರ್ ಶೀಲೇಂದ್ರ ಸಿಂಗ್ ಹೇಳಿದ್ದಾರೆ.
ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಾಗಿ ಕೊಯ್ಲಾಂಚಲ್ ಎಂದೂ ಕರೆಯುವ ಪರಾಸಿಯಾ ಪ್ರದೇಶದ ವಿವಿಧ ಭಾಗಗಳಿಂದ ಬಂದ ಒಂದರಿಂದ ಏಳು ವರ್ಷದೊಳಗಿನ ಆರು ಮಕ್ಕಳು ಆರಂಭದಲ್ಲಿ ಶೀತ ಮತ್ತು ಸಣ್ಣ ಜ್ವರದಿಂದ ಬಳಲುತ್ತಿದ್ದರು. ಅವರಿಗೆ ಸ್ಥಳೀಯ ವೈದ್ಯರು ಕೆಮ್ಮು ಹಾಗೂ ಸಿರಪ್ ಔಷಧವನ್ನು ಕೊಟ್ಟು ಹೋಗಿದ್ದರು. ಔಷಧಿಗಳನ್ನು ತೆಗೆದುಕೊಂಡ ನಂತರ, ಮಕ್ಕಳು ಆರಂಭದಲ್ಲಿ ಚೇತರಿಸಿಕೊಂಡಂತೆ ಕಂಡುಬಂದರೂ ನಂತರದ ದಿನಗಳಲ್ಲಿ ಮತ್ತೆ ಅನಾರೋಗ್ಯ ಶುರುವಾಗಿದ್ದು, ಮೂತ್ರ ವಿಸರ್ಜನೆಯಲ್ಲಿ ತೀವ್ರ ಇಳಿಕೆ ಕಂಡು ಬಂದಿತು.
ಆದರೆ ಈ ರೀತಿ ಸಮಸ್ಯೆಯಾದ ಮಕ್ಕಳು ನಂತರದಲ್ಲಿ ಸಾವನ್ನಪ್ಪಿದ್ದಾರೆ. ಈ ಮಕ್ಕಳು ಮಹಾರಾಷ್ಟ್ರದ ನಾಗ್ಪುರ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. ಮಕ್ಕಳಿಗೆ ಸ್ವಲ್ಪ ಜ್ವರ ಮತ್ತು ಶೀತ ಮಾತ್ರ ಇತ್ತು, ಆದರೆ ಕೆಮ್ಮಿನ ಸಿರಪ್ ನೀಡಿದ ನಂತರ, ಅವರ ಸ್ಥಿತಿ ಹದಗೆಟ್ಟಿತು, ಇದರ ಪರಿಣಾಮವಾಗಿ ಮೂತ್ರ ವಿಸರ್ಜನೆ ನಿಂತು ದೇಹದಲ್ಲಿ ಊತ, ನಿಯಮಿತವಾಗಿ ವಾಂತಿ ಮುಂತಾದ ತೊಂದರೆಗಳು ಉಂಟಾಗಿ ಅಂತಿಮವಾಗಿ ಸಾವು ಸಂಭವಿಸಿತು ಎಂದು ಈ ದುರಂತದಲ್ಲಿ ಮಕ್ಕಳನ್ನು ಕಳೆದುಕೊಂಡ ತಾಯಿ ಹೇಳಿದ್ದಾರೆ.
ನಾಗ್ಪುರದ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ ಅಪ್ರಾಪ್ತ ವಯಸ್ಕರ ರಕ್ತ ಮತ್ತು ಸೆರೆಬ್ರೊಸ್ಪೈನಲ್ ದ್ರವದ (CSF) ಮಾದರಿಗಳನ್ನು ವೈರಾಲಜಿ ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ಆದರೆ ಪರೀಕ್ಷೆಗಳಲ್ಲಿ ಅನುರಿಯಾ (ಮೂತ್ರಪಿಂಡದ ಅಸಮರ್ಪಕ ಕಾರ್ಯದಿಂದ ಉಂಟಾಗುವ ಮೂತ್ರ ವಿಸರ್ಜನೆಯಲ್ಲಿ ಆತಂಕಕಾರಿ ಇಳಿಕೆ) ಮಾತ್ರವೇ ಸಾವನ್ನಪ್ಪಿದ ಆರು ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆಯಾಗಿತ್ತು ಎಂದು ಛಿಂದ್ವಾರ ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ನರೇಶ್ ಗೋನಾರೆ ತಿಳಿಸಿದ್ದಾರೆ.
ಹೀಗಾಗಿ ಕೆಮ್ಮಿನ ಸಿರಪ್ಗಳಲ್ಲಿ ವಿಷ ಮತ್ತು ಮಾಲಿನ್ಯದ ಅನುಮಾನ ಹುಟ್ಟಿಕೊಂಡಿದ್ದರಿಂದ ಅಧಿಕಾರಿಗಳು ವಿವರವಾದ ವಿಶ್ಲೇಷಣೆಗಾಗಿ ಕಪ್ ಸಿರಪ್ ಮಾದರಿಗಳನ್ನು ಭೋಪಾಲ್ಗೆ ಕಳುಹಿಸಲು ಪ್ರೇರೇಪಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆಯ ಹಿನ್ನೆಲೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ದ ತಂಡಗಳು ಕಲುಷಿತ ಕೆಮ್ಮು ಸಿರಪ್ಗಳಿಂದ ಈ ಸಾವು ಸಂಬಂಧಿಸಿರಬಹುದೇ ಎಂಬ ಬಗ್ಗೆ ತನಿಖೆಗಾಗಿ ಈಗ ಚಿಂದ್ವಾರದಲ್ಲಿ ಬೀಡು ಬಿಟ್ಟಿವೆ. ಆದರೆ ಆ ಎರಡು ಔಷಧಿಗಳು ಯಾವುದು ಎಂಬುದನ್ನು ಆರೋಗ್ಯ ಇಲಾಖೆ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಕಣ್ಣು ಮಿಟಿಕಿಸುವುದರೊಳಗೆ ಕಣ್ ಮುಂದಿದ್ದ ನೆಕ್ಲೇಸ್ ಮಾಯ: ಜ್ಯುವೆಲ್ಲರಿ ಶಾಪಲ್ಲಿ ದಂಪತಿ ಕೈಚಳಕ
ಇದನ್ನೂ ಓದಿ: ಮನೆಮುಂದೆ ನಾಯಿ ಕರೆತಂದು ಮಲಮೂತ್ರ ಮಾಡಿಸ್ತಿದ್ದ ಪೊಲೀಸ್: ಆಕ್ಷೇಪಿಸಿದ ಮಹಿಳೆಗೆ ಹೆಂಡ್ತಿ ಕರೆಸಿ ಹಲ್ಲೆ
ಇದನ್ನೂ ಓದಿ: 2 ವರ್ಷದ ಆರ್ಯತಾರಾ ಶಕ್ಯಾ ನೇಪಾಳದ ಹೊಸ ಕನ್ಯಾದೇವತೆಯಾಗಿ ಆಯ್ಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ