
ಭಾರತದಲ್ಲಿ ಅಂಗಾಂಗ ದಾನ ಉತ್ತೇಜಿಸಲು ಮತ್ತು ಅಂಗಾಂಗ ಕಸಿ ವ್ಯವಸ್ಥೆ ಬಲಪಡಿಸಲು ಕೇಂದ್ರ ಸರ್ಕಾರ ಆಗಸ್ಟ್ 3 ರಂದು 16ನೇ 'ಭಾರತೀಯ ಅಂಗಾಂಗ ದಾನ ದಿನ'ವನ್ನು ಆಚರಿಸಿತು. ಈ ವೇಳೆ ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು ಹಲವಾರು ಹೊಸ ಯೋಜನೆಗಳ ಘೋಷಣೆ ಮಾಡಿದರು. ಅದರಲ್ಲಿ ಮುಖ್ಯವಾಗಿ ಅಂಗಾಂಗ ದಾನ ಮತ್ತು ಕಸಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದರು. ಆರೋಗ್ಯ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಈ ಯೋಜನೆಯು ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು.
ಈ ಬಗ್ಗೆ ಆರೋಗ್ಯ ಸಚಿವೆ ಅನುಪ್ರಿಯಾ ಪಟೇಲ್ ಮಾತನಾಡಿ, 2023 ರಲ್ಲಿ ರಾಷ್ಟ್ರೀಯ ಡಿಜಿಟಲ್ ಅಂಗಾಂಗ ದಾನ ಪೋರ್ಟಲ್ ಪ್ರಾರಂಭಿಸಿದ ಬಳಿಕ ಇಲ್ಲಿವರೆಗೆ 500,000 ಕ್ಕೂ ಹೆಚ್ಚು ಜನರು ಆಧಾರ್-ದೃಢೀಕೃತ ಅಂಗಾಂಗ ದಾನದ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಈ ಯಶಸ್ಸಿನ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಮನವಿ, ದೇಶದ ಜನರ ಆರೋಗ್ಯ ಕುರಿತು ಅವರ ಕಾಳಜಿ, ಸರ್ಕಾರದ ಜಾಗೃತಿ ಅಭಿಯಾನವು ಜನರಲ್ಲಿ ಒಂದು ಪಾಸಿಟಿವ್ ಪರಿಣಾಮ ಬೀರಿದೆ ಎಂದು ಸಚಿವೆ ಹೇಳಿದರು. ಈಗ ಭಾರತ ಅಂಗಾಂಗ ಕಸಿ ಕ್ಷೇತ್ರದಲ್ಲಿ ಭಾರಿ ಯಶಸ್ಸು ಕಂಡಿದೆ. ಅಂಕಿಅಂಶಗಳಲ್ಲಿ ಹೇಳೋದಾದ್ರೆ ಭಾರತ 2013 ರಲ್ಲಿ, 4990 ಅಂಗಾಂಗ ಕಸಿ ಮಾಡಲಾಯಿತು. 2025 ರಲ್ಲಿ ಈ ಸಂಖ್ಯೆ 20,138 ಕ್ಕೆ ಏರಿತು, ಇದುವರೆಗೆ ದಾಖಲಾದ ಅತ್ಯಧಿಕ. ಇದರೊಂದಿಗೆ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಂತರ ಒಟ್ಟು ಅಂಗಾಂಗ ಕಸಿ ವಿಷಯದಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ ಎಂದರು.
ಮೃತ ದಾನಿಗಳಿಮದ ಅಂಗಾಂಗ ಕಸಿ ಮಾಡಿಸಿಕೊಳ್ಳುವ ಪ್ರಮಾಣವು ಕೂಡ ಹೆಚ್ಚಿದೆ. 2013 ರಲ್ಲಿ ಕೇವಲ 837 ಇತ್ತು. ಆದರೆ 2025ರ ವೇಳೆಗೆ 3,526 ಕ್ಕೆ ಏರಿದೆ. ಅದ್ಯಾಗೂ ಅಂಗಾಂಗಗಳ ಬೇಡಿಕೆ, ಲಭ್ಯತೆ ಬಗ್ಗೆ ತುಂಬಾ ಅಂತರವಿದೆ. ಇದು ಸವಾಲಿನದ್ದಾದರೂ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದರು.. ಈ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು 'ಜಗ್ ಜಗ್ ಜಿಯೋ ಅಭಿಯಾನ್'ವನ್ನೂ ಪ್ರಾರಂಭಿಸಿದೆ ಅಂದರೆ ಇದು ಕೇವಲ ದೆಹಲಿ ಬೆಂಗಳೂರಿನಂತಹ ಮಹಾನಗರಗಳಿಗೆ ಸೀಮಿತವಾಗದೆ ಇದು ಪ್ರತಿ ಹಳ್ಳಿಗೆ ಅಂಗಾಂಗ ದಾನದ ಸಂದೇಶವನ್ನ ವಿಸ್ತರಿಸುವ ಮತ್ತು ಜನರು ಭಾಗವಹಿಸಲು ಪ್ರೇರೇಪಿಸುವ ಗುರಿಯನ್ನು ಹೊಂದಿರುವ ಒಂದು ವರ್ಷಪೂರ್ತಿ ರಾಷ್ಟ್ರೀಯ ಜಾಗೃತಿ ಅಭಿಯಾನವಾಗಿದೆ.
ಕೇಂದ್ರ ಸರ್ಕಾರವು 'ಇ-ಟ್ರಾನ್ಸ್ಪ್ಲಾಂಟೇಶನ್' ಎಂಬ ಹೊಸ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಸಹ ಪ್ರಾರಂಭಿಸಿದೆ. ಈ ಪ್ಲಾಟ್ಫಾರ್ಮ್ ಆಸ್ಪತ್ರೆಗಳು, ವೈದ್ಯರು, ರೋಗಿಗಳು, ಅಂಗಾಂಗ ದಾನಿಗಳು ಮತ್ತು ಎಲ್ಲಾ ಇತರ ಸಂಬಂಧಿತ ಸಂಸ್ಥೆಗಳನ್ನು ಒಂದೇ ಡಿಜಿಟಲ್ ನೆಟ್ವರ್ಕ್ ಮೂಲಕ ಸಂಪರ್ಕಿಸುತ್ತದೆ. ಇದು ನೋಂದಣಿ, ಅಪಾಯಿಂಟ್ಮೆಂಟ್, ಅಂಗಾಂಗ ಹಂಚಿಕೆ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಸುವ್ಯವಸ್ಥಿತಗೊಳಿಸುತ್ತದೆ. ಇದಲ್ಲದೆ, NOTTO ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದು ಸಾರ್ವಜನಿಕರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಅಂಗಾಂಗ ದಾನ ಮತ್ತು ಕಸಿಗೆ ಸಂಬಂಧಿಸಿದ ಮಾಹಿತಿ ಮತ್ತು ಸೇವೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ.
ಈ ಸಂದರ್ಭದಲ್ಲಿ Brainstem death certification and exchange ಕಸಿ ಮಾರ್ಗಸೂಚಿಗಳಿಗಾಗಿ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಯಿತು. ದೇಶಾದ್ಯಂತ ಏಕರೂಪ, ಪಾರದರ್ಶಕ ಮತ್ತು ಸುರಕ್ಷಿತ ಅಂಗಾಂಗ ಕಸಿ ಪ್ರಕ್ರಿಯೆಗೊಳಿಸುವ ಗುರಿಯನ್ನ ಗೈಡ್ಲೈನ್ಸ್ ಹೊಂದಿದೆ. ದೇಶದ ಯಾವುದೇ ಪ್ರಮುಖ ಧರ್ಮಗಳು ಅಂಗಾಂಗ ದಾನವನ್ನು ವಿರೋಧಿಸದಿದ್ದರೂ, ಅನೇಕ ಜನರು ಇನ್ನೂ ಅಂಗಾಂಗ ದಾನದ ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ ಎಂದು ಅನುಪ್ರಿಯಾ ಪಟೇಲ್ ಹೇಳಿದ್ದಾರೆ. ಎಲ್ಲಾ ಧರ್ಮಗಳು ಮಾನವೀಯತೆಯ ಸೇವೆ ಮತ್ತು ಜೀವಗಳನ್ನು ಉಳಿಸುವುದು ಅತ್ಯುನ್ನತವೆಂದು ಪರಿಗಣಿಸುತ್ತವೆ.
ರಾಷ್ಟ್ರೀಯ ಅಂಗಾಂಗ ಕಸಿ ಕಾರ್ಯಕ್ರಮದಡಿಯಲ್ಲಿ ಮೂಲಸೌಕರ್ಯ, ಅಂಗಾಂಗ ಸಂರಕ್ಷಣೆ, ಸಾರಿಗೆ ಮತ್ತು ಇತರ ಸೌಲಭ್ಯಗಳಿಗಾಗಿ ಸರ್ಕಾರವು ರಾಜ್ಯಗಳಿಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ಅವರು ವಿವರಿಸಿದರು. ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಸಹಾಯ ಮಾಡುವ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಮೂತ್ರಪಿಂಡ ಕಸಿಯನ್ನೂ ಸೇರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ