
ತ್ರಿಶ್ಯೂರ್: ಕೇರಳದ ಪ್ರಸಿದ್ಧ ಒಂಟಿ ಸಲಗ ಕಬಾಲಿ ರಸ್ತೆಗೆ ಮರ ಬೀಳಿಸಿ ರೋಡ್ ಬ್ಲಾಕ್ ಮಾಡಿದ್ದರಿಂದ ಸುಮಾರು 18 ಗಂಟೆಗ ಕಾಲ ಕೇರಳದ ಹೆದ್ದಾರಿಯೊಂದು ಬಂದ್ ಆಗಿ ರಸ್ತೆಯುದ್ಧಕ್ಕೂ ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಆದಂತಹ ಘಟನೆ ನಡೆದಿದೆ. ಕಬಾಲಿ ರಸ್ತೆಯೊಂದರ ಮೇಲೆ ಮರವೊಂದರನ್ನು ಬೀಳಿಸಿ ಅಲ್ಲೇ ಅತ್ತಿತ್ತ ಓಡಾಡುತ್ತಲೇ ಇದ್ದಿದ್ದರಿಂದ ವಾಹನಗಳು ಮುಂದೆ ಚಲಿಸಲಾಗದೇ ಸುಮಾರು 18 ಗಂಟೆಗಳ ಕಾಲ ಬ್ಲಾಕ್ ಆಗಿವೆ. ಅರಣ್ಯ ಅಧಿಕಾರಿಗಳ ನಿರಂತರ ಪ್ರಯತ್ನದ ನಂತರ ಆನೆ ತಡರಾತ್ರಿ ನಿಧಾನವಾಗಿ ಅ ರಸ್ತೆಯಿಂದ ಬೇರೆಡೆ ಸಂಚರಿಸಿದ ನಂತರವಷ್ಟೇ ಆ ರಸ್ತೆ ಸಂಚಾರಕ್ಕೆ ತೆರವುಗೊಂಡಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಅತ್ತಿರಪ್ಪಿಲ್ಲಿ-ಮಲಕ್ಕಪ್ಪರಾ ವ್ಯಾಪ್ತಿಯಲ್ಲಿ ಬರುವ ಅಂತಾರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಕಬಾಲಿಯಿಂದಾಗಿ ಸುಮಾರು 18 ಗಂಟೆಗಳ ರಸ್ತೆಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು.
ಪದೇ ಪದೇ ಈ ಭಾಗದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಸ್ಥಳೀಯ ಜನರು ಹಾಗೂ ಅಲ್ಲಿನ ಸರ್ಕಾರಿ ಅಧಿಕಾರಿಗಳು ಈ ಕಾಡಾನೆಯನ್ನು ಹಿಡಿದು ಬೇರೆಡೆಗೆ ಸಾಗಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಏಕೆಂದರೆ ಈ ಭಾಗದಲ್ಲಿ ಹಲವು ಭಾರಿ ಈ ಕಾಡಾನೆ ಕಬಾಲಿ ದಾಳಿ ಮಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
18 ಗಂಟೆ ಹೆದ್ದಾರಿ ಬಂದ್: ಕಬಾಲಿ ಕಿತಾಪತಿಗೆ ಕಂಗಾಲಾದ ವಾಹನ ಸವಾರರು
ಈ ಅತ್ತಿರಪ್ಪಿಲ್ಲಿ-ಮಲಕಪ್ಪರಾ ರಸ್ತೆಯಲ್ಲಿ ಕಳೆದ ಭಾನುವಾರ ಆನೆ ಕಾಣಿಸಿಕೊಂಡಿದ್ದು, ಅಲ್ಲಿ ರಸ್ತೆ ಬದಿ ಇದ್ದ ತಾಳೆ ಮರವೊಂದನ್ನು ಸಂಜೆ 3.30ರ ಸುಮಾರಿಗೆ ಅದು ಬೀಳಿಸಿದೆ. ನಂತರ ರಸ್ತೆ ಮಧ್ಯೆ ನಿಂತು ಸೊಂಡಿಲಿನಲ್ಲಿ ಮರವನ್ನು ತುಳಿದು ಸೀಳು ಅದನ್ನು ನಿಧಾನವಾಗಿ ತಿನ್ನುವುದಕ್ಕೆ ಶುರು ಮಾಡಿದೆ. ಅರಣ್ಯ ಅಧಿಕಾರಿಗಳು ಆನೆಯನ್ನು ಕಾಡಿಗೆ ಓಡಿಸಲು ಪ್ರಯತ್ನಿಸಿದಾಗ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ವೇಳೆ ಹಲವಾರು ಅಂತರರಾಜ್ಯ ಪ್ರಯಾಣಿಕರು ಸೇರಿದಂತೆ ಪ್ರವಾಸಿಗರು ರಸ್ತೆಯಲ್ಲಿ ಕಾಯಬೇಕಾಯಿತು ಎಂದು ವರದಿಯಾಗಿದೆ.
ಅರಣ್ಯ ಇಲಾಖೆಯ ಪ್ರಯತ್ನದ ನಡುವೆಯೂ ಹಲವು ಗಂಟೆಗಳ ಕಾಲ ಅಲ್ಲೇ ಆಹಾರ ಸೇವಿಸಿ ತಿಂದು ತೇಗಿದ ನಂತರ ಕಬಾಲಿ ತಡರಾತ್ರಿ ಆ ರಸ್ತೆ ಬಿಟ್ಟು ಬೇರೆಡೆಗೆ ಸಾಗಿದೆ. ಇದರಿಂದ ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ನಿಂದಾಗಿ ಹಲವಾರು ಪ್ರವಾಸಿಗರು ಆಹಾರ ಮತ್ತು ನೀರಿಲ್ಲದೆ ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಂಡರು ಎಂದು ವರದಿಯಾಗಿದೆ. ಆದರೆ ಹೀಗೆ ಹೋದ ಕಬಾಲಿ ಮತ್ತೆ ಸ್ವಲ್ಪ ಹೊತ್ತಿನಲ್ಲಿ ವಾಪಸ್ ಬಂದಿದ್ದು, ಇದರಿಂದಾಗಿ ಸೋಮವಾರ ಮುಂಜಾನೆ 7 ಗಂಟೆಯವರೆಗೂ ಮತ್ತೆ 100 ವಾಹನಗಳು ಅಲ್ಲಿ ಸಿಲುಕಿಕೊಂಡಿದ್ದವು.
ಕಬಾಲಿ ಈ ಪ್ರದೇಶದಲ್ಲಿ ತನ್ನ ದಾಂಧಲೆಯಿಂದ ಸುದ್ದಿಯಲ್ಲಿದ್ದು, ಕಳೆದ ವರ್ಷ ಅದು ಆಂಬ್ಯುಲೆನ್ಸ್ ಅನ್ನು ತಡೆದಿತ್ತು, ಒಬ್ಬ ಬೈಕರ್ ಅನ್ನು ಗಾಯಗೊಳಿಸಿತ್ತು. 2022 ರಲ್ಲಿ ಅದು ಜೀಪ್ ಮೇಲೆಯೂ ದಾಳಿ ಮಾಡಿತು. 33 ವರ್ಷದ ಈ ಒಂಟಿ ಸಲಗಕ್ಕೆ ನಟ ರಜನಿಕಾಂತ್ ಅವರ 2016 ರ ಚಲನಚಿತ್ರ 'ಕಬಾಲಿ' ಯ ಹೆಸರಿಡಲಾಗಿದೆ. ಈ ಆನೆಯು ತನ್ನ ಮದವೇರುವ ಅವಧಿಯಲ್ಲಿದ್ದು, ಇದು ಕೆಲವು ವಾರಗಳಿಂದ ಹಲವಾರು ತಿಂಗಳುಗಳವರೆಗೆ ನಡೆಯುವ ವಾರ್ಷಿಕ ಚಕ್ರವಾಗಿದ್ದು, ಗಂಡು ಆನೆಗಳು ಈ ಸಮಯದಲ್ಲಿ ಅನಿಯಂತ್ರಿತ ನಡವಳಿಕೆಯನ್ನು ತೋರಿಸುತ್ತವೆ.
ಸ್ಥಳೀಯ ಸರ್ಕಾರಿ ಅಧಿಕಾರಿಗಳು ಹೇಳುವಂತೆ ಈ ಆನೆಯು ಪ್ರಯಾಣಿಕರಿಗೆ ನಿರಂತರ ಬೆದರಿಕೆಯಾಗಿ ಪರಿಣಮಿಸಿದೆ, ಆಗಾಗ್ಗೆ ಇದು ಜನನಿಬಿಡ ಅಣ್ಣಾಮಲೈ ರಸ್ತೆಯಲ್ಲಿ ಗಂಟೆಗಟ್ಟಲೆ ಸಂಚಾರ ಸ್ಥಗಿತಗೊಳಿಸುತ್ತದೆ. ಆನೆಯು ರಸ್ತೆಯಲ್ಲಿ ಅಲೆದಾಡದಂತೆ ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು, ಅಥವಾ ಅದನ್ನು ಬೇರೆ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಅತಿರಪಳ್ಳಿ ಪಂಚಾಯತ್ ಅಧ್ಯಕ್ಷ ಕೆ.ಕೆ. ರಿತೇಶ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಕಬಾಲಿಯಿಂದ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಕಳವಳದ ನಡುವೆಯೇ ಈ ಬೇಡಿಕೆ ಬಂದಿದೆ. ಈ ಮಧ್ಯೆ ಈ ಪ್ರದೇಶದಲ್ಲಿ ಆನೆಗಳನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ನಾವು ಕಣ್ಗಾವಲು ಹೆಚ್ಚಿಸಿದ್ದೇವೆ ಮತ್ತು ಪ್ರಯಾಣಿಕರು ಕಾಡು ಆನೆಗಳನ್ನು ಕೆರಳಿಸುತ್ತಿರುವುದು ಕಂಡುಬಂದ ಇತ್ತೀಚಿನ ಪ್ರಕರಣಗಳ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ವಝಾಚಲ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ಸುರೇಶ್ ಬಾಬು ಹೇಳಿದರು. ಜೀವಗಳನ್ನು ರಕ್ಷಿಸುವುದು ಪ್ರಮುಖ ಆದ್ಯತೆಯಾಗಿದೆ.ಆದರೆ ಆನೆಯ ಸ್ಥಳಾಂತರದ ಬಗ್ಗೆ ಯಾವುದೇ ನಿರ್ಧಾರವು ಸುರಕ್ಷತಾ ಕಾಳಜಿ ಮತ್ತು ಪರಿಸರ ಪರಿಗಣನೆಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರೋಗಿಯ ಸಂಬಂಧಿಗೆ ಲೈಂಗಿಕ ಕಿರುಕುಳ : ಭಾರತೀಯ ಪುರುಷ ನರ್ಸ್ಗೆ ಸಿಂಗಾಪುರದಲ್ಲಿ ಜೈಲು ಶಿಕ್ಷೆ
ಇದನ್ನೂ ಓದಿ: 13 ವರ್ಷದ ಬಾಲಕಿಗೆ ಕನ್ಯತ್ವ ಪರೀಕ್ಷೆ ವರದಿ ನೀಡುವಂತೆ ಕೇಳಿದ ಮದ್ರಾಸಾ ಶಾಲೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ