
ಚೆನ್ನೈ (ಜೂ.27) ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ತಮ್ಮ ಮಾಸ್ ಡೈಲಾಗ್, ಮಹತ್ವದ ನಿರ್ಧಾರಗಳ ಮೂಲಕ ಜನಪ್ರಿಯರಾಗಿದ್ದಾರೆ. ವಿಜಯ್ ತೆಗೆದುಕೊಳ್ಳುತ್ತಿರುವ ಹಲವು ನಿರ್ಧಾರಗಳಿಗೆ ತಮಿಳುನಾಡಿನಾಚೆಗೂ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಇದೀಗ ಜೊಸೆಫ್ ವಿಜಯ್ ದೆಹಲಿ ವಿಶೇಷ ಪ್ರತಿನಿಧಿ ನೇಮಕ ವಿಚಾರ ಭಾರಿ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕದ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ಮಾಲೀಕ ಕೆ ವೆಂಕಟ ನಾರಾಯಣ ಅವರನ್ನು ತಮಿಳುನಾಡಿನ ವಿಶೇಷ ದೆಹಲಿ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ.ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಕೆವಿಎನ್ ಪ್ರೊಡಕ್ಷನ್ ದೇಶದ ಅತೀ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಯಶ್ ಅಭಿನಯದ ಟಾಕ್ಸಿಕ್ ಕೂಡ ಇದೇ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ವಿಜಯ್ ಜೊಸೆಫ್ ಅಭಿನಯದ ಜನನಾಯಕನ್ ಸಿನಿಮಾ ಕೂಡ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ತಮ್ಮ ಜನನಾಯಗನ್ ಸಿನಿಮಾ ನಿರ್ಮಾಣ ಮಾಡಿದ ಕೆ ವೆಂಕಟ ನಾರಾಯಣಗೆ ತಮಿಳುನಾಡಿನ ವಿಶೇಷ ದೆಹಲಿ ಪ್ರತಿನಿಧಿ ಜವಾಬ್ದಾರಿ ನೀಡಿದ್ದಾರೆ. ಒಂದು ವರ್ಷದ ಅವಧಿಗೆ ಈ ನೇಮಕ ಮಾಡಲಾಗಿದೆ.
ಜೊಸೆಫ್ ವಿಜಯ್ ನಿರ್ಧಾರಕ್ಕೆ ಹಲವು ಕಾರಣಗಳಿಂದ ವಿವಾದ ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಮಹತ್ವದ ಜಾವಾಬ್ದಾರಿಯುತ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳನ್ನು ನೇಮಕ ಮಾಡಬೇಕು. ಸಿನಿಮಾ ನಿರ್ಮಾಪಕರನ್ನು ದೆಹಲಿ ಪ್ರತಿನಿಧಿಯಾಗಿ ಆಯ್ಕೆ ಮಾಡಿರುವುದು ಅತೀ ದೊಡ್ಡ ತಪ್ಪು ಎಂದು ಡಿಎಂಕೆ ರಾಜ್ಯಸಭಾ ಸಂಸದ ಪಿ ವಿಲ್ಸನ್ ಆರೋಪಿಸಿದ್ದಾರೆ. ತಮಿಳುನಾಡು ಹಾಗೂ ದೆಹಲಿ ಸರ್ಕಾರದ ನಡುವಿ ಸಂಬಂಧ, ಮಾತುಕತೆ, ಯೋಜನೆಗಳ ವೇಳೆ ತಮಿಳುನಾಡಿನ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸಮರ್ಥ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ಕೆ ವೆಂಕಟನ ನಾರಾಯಣ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಕಚೇರಿಗಳು ಬೆಂಗಳೂರಿನಲ್ಲೇ ಇದೆ. ಹೀಗಿರುವಾಗ ತಮಿಳುನಾಡಿನ ಹಿತಾಸಕ್ತಿ, ಸಾಂಸ್ಕೃತಿಕ,ಶೈಕ್ಷಣಿಕ, ರಾಜಕೀಯ ಹಿನ್ನಲೆಗಳ ಮಾಹಿತಿ ತಿಳಿದಿರಬೇಕು ಎಂದಿಲ್ಲ. ಹೀಗಾಗಿ ಕೆವಿಎನ್ ತಮಿಳುನಾಡಿನ ವಿಶೇಷ ದೆಹಲಿ ಪ್ರತಿನಿಧಿಯಾಗಲು ಸೂಕ್ತವಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಪರಿಣಾಮ ಜಟಾಪಟಿ ಆರಂಭಗೊಂಡಿದೆ.
ತಮಿಳುನಾಡು ಜನರ ಆಸಕ್ತಿ ವಿರುದ್ಧವಾಗಿ ಜೊಸೆಫ್ ವಿಜಯ್ ಕೆವಿಎನ್ ನೇಮಕ ಮಾಡಿದ್ದಾರೆ. ಕೆ ವೆಂಕಟನಾರಾಯಣ ಅವರು ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತರಾಗಿದ್ದಾರೆ. ಮೇಕೆದಾಟು ಸೇರಿದಂತೆ ಕರ್ನಾಟಕದ ಹಲವು ಯೋಜನೆಗಳಿಗೆ ದೆಹಲಿಯಲ್ಲಿ ತಮಿಳುನಾಡಿನ ವಿಶೇಷ ಪ್ರತಿನಿಧಿ ಯಾವ ರೀತಿ ನ್ಯಾಯಕೊಡಿಸಲು ಸಾಧ್ಯ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಪ್ರಶ್ನಿಸಿದ್ದಾರೆ.
ಇತ್ತ ಎಐಎಡಿಎಂಕೆ ಕೂಡ ಕೆ ವೆಂಕಟ ನಾರಾಯಣ ನೇಮಕಕ್ಕೆ ತೀವ್ರ ವಿರೋಧ ವ್ಯಕಪಡಿಸಿದೆ. ಅತ್ಯಂತ ಪ್ರಮಖ ಹಾಗೂ ಜವಾಬ್ದಾರಿಯುತ ಸರ್ಕಾರದ ಸ್ಥಾನಕ್ಕೆ ನೇಮಕ ಮಾಡುವಾಗ ಮುಖ್ಯಮಂತ್ರಿ ಜೊಸೆಫ್ ವಿಜಯ್ ಸಿನಿಮಾ ನಿರ್ಮಾಣವನ್ನು ಮಾನದಂಡವಾಗಿ ಪರಿಗಣಿಸುತ್ತಿದ್ದಾರೆ. ಇದು ತಮಿಳುನಾಡಿನ ಜನರ ಆಸಕ್ತಿಗೆ, ಹಿತಾಸಕ್ತಿಗೆ ವಿರುದ್ದವಾಗಿದೆ ಎಂದು ಎಐಎಡಿಎಂಕೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ