ಅಮಿತ್‌ ಶಾ ಕಾಶ್ಮೀರಕ್ಕೆ ಬರ್ತಿದ್ದಾರಲ್ಲ, ಅವರಿಗೆ ಇದು ಸಣ್ಣ ಉಡುಗೊರೆ: ಡಿಜಿ ಕೊಲೆಗೆ ಪಿಎಎಫ್‌ಎಫ್‌ ಪ್ರತಿಕ್ರಿಯೆ!

By Santosh NaikFirst Published Oct 4, 2022, 10:51 AM IST
Highlights

ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್‌ ಅಧಿಕಾರಿ ಹೇಮಂತ್‌ ಲೋಹಿಯಾ ಅವರನ್ನು ಬರ್ಬರವಾಗಿ ಅವರ ನಿವಾಸದಲ್ಲಿಯೇ ಕೊಲೆ ಮಾಡಲಾಗಿದೆ. ಮನೆಗೆಲಸದವರ ರೂಪದಲ್ಲಿದ್ದ ಭಯೋತ್ಪಾದಕ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಈ ಕೊಲೆಯ ಹೊಣೆ ಹೊತ್ತುಕೊಂಡಿರುವ ಭಯೋತ್ಪಾದಕ ಸಂಘಟನೆ ಪಿಎಎಫ್‌ಎಫ್‌ ಇದು ಅಮಿತ್‌ ಶಾ ಕಾಶ್ಮೀರಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ತಮ್ಮ ಸಣ್ಣ ಉಡುಗೊರೆ ಎಂದು ಹೇಳಿದೆ.

ಶ್ರೀನಗರ (ಅ. 4): ಜಮ್ಮು ಮತ್ತು ಕಾಶ್ಮೀರಕ್ಕೆ ಗೃಹ ಸಚಿವ ಅಮಿತ್‌ ಶಾ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ಉಗ್ರರ ಉಪಟಳ ಜೋರಾಗಿದೆ. ಸೋಮವಾರ ತಡರಾತ್ರಿ ಜೈಲುಗಳ ಮಹಾನಿರ್ದೇಶಕ (ಡಿಜಿ ಪ್ರಿಸನ್‌) ಹೇಮಂತ್‌ ಲೋಹಿಯಾ ಅವರನ್ನು ಅವರ ಸ್ವಗೃಹದಲ್ಲಿಯೇ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಹತ್ಯೆಯ ನಂತರ ಮೃತದೇಹವನ್ನು ಸುಡುವ ಪ್ರಯತ್ನವನ್ನೂ ಮಾಡಿದ್ದಾರೆ. ಸದ್ಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹೇಮಂತ್‌ ಲೋಹಿಯಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಯಾಸಿರ್‌ ಈ ಕೃತ್ಯ ಮಾಡಿದ್ದಾನೆ. ಈ ಭಯೋತ್ಪಾದಕ ಹೇಮಂತ್‌ ಲೋಹಿಯಾ ಅವರ ನಿವಾಸದಲ್ಲಿ ಮನೆಗೆಲಸದವನಾಗಿ ಯಾಸಿರ್‌ ಸೇರಿಕೊಂಡಿದ್ದ. ಭಯೋತ್ಪಾದಕ ಸಂಘಟನೆ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಫ್) ಮಂಗಳವಾರ ಬೆಳಗ್ಗೆ ಲೋಹಿಯಾ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ, ಹತ್ಯೆಯ ಸುಮಾರು 10 ಗಂಟೆಗಳ ನಂತರ. ಪಿಎಎಫ್‌ಎಫ್‌ ಸೋಷಿಯಲ್‌ ಮೀಡಿಯಾ ಮೂಲಕ ಈ ಮಾಹಿತಿಯನ್ನು ನೀಡಿದೆ. ಈ ಸಂಘಟನೆಯು ಜೈಶ್‌-ಎ-ಮೊಹಮದ್ ಸಂಘಟನೆಯೊಂದಿಗೆ ನಂಟನ್ನು ಹೊಂದಿದೆ. ಜಮ್ಮು ಕಾಶ್ಮೀರಕ್ಕೆ ಬರುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಇದು ತಮ್ಮ ಸಣ್ಣ ಉಡುಗೊರೆ ಎಂದು ಸಂಘಟನೆ ಹೇಳಿದ್ದು, ನಾವು ಎಲ್ಲಿ ಬೇಕಾದರೂ, ಯಾವ ಸಮಯದಲ್ಲಾದರೂ ವ್ಯಕ್ತಿಯನ್ನು ಕೊಲ್ಲುತ್ತೇವೆ ಎಂದು ಸಂಘಟನೆ ಹೇಳಿದೆ.

ಯಾಸಿರ್‌ ನಾಪತ್ತೆ, ಶೋಧ ಕಾರ್ಯ: ಹೇಮಂತ್‌ ಲೋಹಿಯಾ (Hemant Lohia) ಅವರನ್ನು ಹತ್ಯೆ ಮಾಡಿದ ಬಳಿಕ, ಯಾಸಿರ್‌ ನಾಪತ್ತೆಯಾಗಿದ್ದಾರೆ. ಯಾಸಿರ್‌ನನ್ನು (Yasir)  ಹುಡುಕಲು ಪೊಲೀಸರು ಗಲ್ಲಿಗಲ್ಲಿಯನ್ನು ತಡಕಾಡುತ್ತಿದ್ದಾರೆ. ಜಮ್ಮು ವಲಯ ಎಡಿಜಿಪಿ ಮುಖೇಶ್‌ ಸಿಂಗ್‌, ಲೋಹಿಯಾ (Murder) ಅವರ ಕತ್ತು ಸೀಳಿ ಹತ್ಯೆ ಮಾಡಲಾಗಿದ್ದು, ಅವರ ಮೈಮೇಲೆ ಸುಟ್ಟ ಗಾಯದ ಗುರುತುಗಳೂ ಪತ್ತೆಯಾಗಿವೆ. ಘಟನೆಗೂ ಮುನ್ನ ಲೋಹಿಯಾ ತಮ್ಮ ಕಾಲಿಗೆ ಎಣ್ಣೆ ಹಚ್ಚಿಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರ ಕಾಲುಗಳಲ್ಲಿ ಊತವಿದ್ದ ಕಾರಣದಿಂದ ಎಣ್ಣೆ ಹಚ್ಚಿಕೊಂಡಿದ್ದರು ಎನ್ನಲಾಗಿದೆ. ಯಾಸಿರ್‌ ಕೆಚಪ್‌ ಬಾಟಲಿಯಿಂದ ಕತ್ತು ಸೀಳಿದ್ದಾನೆ. ಇನ್ನೇನು ಅವರು ಏಳಲು ಸಾಧ್ಯವಿಲ್ಲ ಎಂದಾಗ ಸುಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಕಿರುಚಾಟ ಕೇಳಿ ಕುಟುಂಬದವರು ಎದ್ದು ಬಂದಿದ್ದಾರೆ. ಮೊದಲು ತಲೆದಿಂಬಿನಿಂದ ಒತ್ತಿ ಕೊಲೆ ಮಾಡಲು ಯತ್ನಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೋಣೆಯಲ್ಲಿ ಬೆಂಕಿ ನೋಡಿದ್ದ ಭದ್ರತಾ ಸಿಬ್ಬಂದಿ:  'ಮೊದಲು ಭದ್ರತಾ ಪಡೆಗಳು ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ನೋಡಿದ್ದರು. ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಕೊಲೆ ಎಂದು ತೋರುತ್ತದೆ. ಇವರು 1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಈ ವರ್ಷದ ಆಗಸ್ಟ್‌ನಲ್ಲಿ ಅವರನ್ನು ಜೈಲು ಡಿಜಿ ಆಗಿ ನಿಯೋಜಿಸಲಾಗಿತ್ತು ಎಂದು ಎಡಿಜಿಪಿ ಮುಖೇಶ್‌ ಸಿಂಗ್‌ ಹೇಳಿದ್ದಾರೆ.

'ಈಶ್ವರ ಅಲ್ಲಾ ತೇರೇ ನಾಮ್‌..' ಎಂದ ಕಾಶ್ಮೀರ ಮಕ್ಕಳು, ಇದು ಹಿಂದುತ್ವದ ಅಜೆಂಡಾ ಎಂದ ಮೆಹಬೂಬಾ ಮುಫ್ತಿ!

ಬ್ಯಾಂಕ್ ಮ್ಯಾನೇಜರ್ ಮೇಲೆ ಗುಂಡಿನ ದಾಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) 3 ದಿನಗಳ ಭೇಟಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದಾರೆ. ಆದ್ದರಿಂದಲೇ ಪೊಲೀಸ್ ಅಧಿಕಾರಿಗಳು ಘಟನೆಯ ತನಿಖೆಗೆ ಮುಂದಾಗಿದ್ದಾರೆ. ಸೋಮವಾರ ಮಧ್ಯಾಹ್ನ ಕೆಲವು ಭಯೋತ್ಪಾದಕರು ಬಾರಾಮುಲ್ಲಾದಲ್ಲಿ ಬ್ಯಾಂಕ್ ಮ್ಯಾನೇಜರ್ ಮೇಲೆ ದಾಳಿ ಮಾಡಿದರು. ಭಯೋತ್ಪಾದಕರು ಬ್ಯಾಂಕ್ ಮ್ಯಾನೇಜರ್ ಮೇಲೆ ಗುಂಡು ಹಾರಿಸಿದರು, ಆದರೆ ಬ್ಯಾಂಕ್ ಮ್ಯಾನೇಜರ್ ದಾಳಿಯಿಂದ ಬಚಾವ್‌ ಆಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ: ಮನೆ ಕೆಲಸದವ ಪರಾರಿ

ಮೂರು ದಿನಗಳ ಭೇಟಿಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮುವಿಗೆ (Union Minister) ಆಗಮಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾಅವರನ್ನು ಸ್ವಾಗತಿಸಿದರು. ಯಾತ್ರೆಯ ಮೊದಲ ದಿನ ಅಂದರೆ ಅಕ್ಟೋಬರ್ 4 ರಂದು ಬೆಳಿಗ್ಗೆ ಅವರು ವೈಷ್ಣೋದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದು, ಪೂಜೆ ನೆರವೇರಿಸಿದ ಬಳಿಕ ಜಮ್ಮುವಿನಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಾದ ಬಳಿಕ ರಾಜೌರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರೊಂದಿಗೆ ಅಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

click me!