
ನವದೆಹಲಿ : ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಡಿತಗೊಂಡಿದ್ದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧ 4 ವರ್ಷ ಬಳಿಕ ಸುಧಾರಣೆ ಕಾಣುತ್ತಿದೆ. ಕಾಬೂಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಪುನಾಸ್ಥಾಪಿಸಲು ಭಾರತ ನಿರ್ಧರಿಸಿದೆ. ಇದೇ ವೇಳೆ, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ತಾನೂ ಕೂಡ ಭಾರತಕ್ಕೆ ರಾಯಭಾರಿಗಳನ್ನು ಕಳುಹಿಸಿಕೊಡುವುದಾಗಿ ಅಫ್ಘಾನಿಸ್ತಾನ ಘೋಷಿಸಿದೆ.
6 ದಿನಗಳ ಭಾರತ ಭೇಟಿಯಲ್ಲಿರುವ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಖಿ ಮತ್ತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ನಡುವಿನ ಸುದೀರ್ಘ ಮಾತುಕತೆ ಬೆನ್ನಲ್ಲೇ ಶುಕ್ರವಾರ ಈ ನಿರ್ಧಾರ ಹೊರಬಿದ್ದಿದೆ.
‘ಅಫ್ಘಾನಿಸ್ತಾನದ ಸಾರ್ವಭೌಮತೆ, ಭೌಗೋಳಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ಭಾರತ ಬದ್ಧವಾಗಿದೆ. ಅಫ್ಘಾನಿಸ್ತಾನದಲ್ಲಿರುವ ‘ಟೆಕ್ನಿಕಲ್ ಮಿಷನ್’ ಅನ್ನು ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಅಫ್ಘಾನಿಸ್ತಾನದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಭಾರತ ತೀವ್ರ ಆಸಕ್ತಿ ಹೊಂದಿದೆ. ಅಲ್ಲಿ ಹಾಲಿ ಚಾಲ್ತಿಯಲ್ಲಿರುವ ಭಾರತ ಬೆಂಬಲಿತ ಯೋಜನೆಗಳ ಜತೆ ಹೊಸದಾಗಿ ಆರು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತೇವೆ’ ಎಂದು ಜೈಶಂಕರ್ ತಿಳಿಸಿದ್ದಾರೆ.
ಆಘ್ಘನ್ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಖಿ ಮಾತನಾಡಿ, ‘ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ತನ್ನ ದೇಶಕೂಡ ಭಾರತಕ್ಕೆ ರಾಯಭಾರಿಗಳನ್ನು ಕಳುಹಿಸಿಕೊಡಲಿದೆ. ಭಾರತ ಮತ್ತು ಆಫ್ಘನ್ ನಡುವೆ ಪರಸ್ಪರ ಗೌರವದ, ಜನಕೇಂದ್ರಿತ ಮತ್ತು ವ್ಯಾಪಾರಿ ಸಂಬಂಧವನ್ನು ಬಯಸುತ್ತೇವೆ’ ಎಂದಿದ್ದಾರೆ.
ಪಾಕ್ಗೆ ನಮ್ಮ ನೆಲ ಬಳಸಲು ಬಿಡಲ್ಲ: ತಾಲಿಬಾನ್ ಎಚ್ಚರಿಕೆಈಗಾಗಲೇ ಲಷ್ಕರ್, ಜೈಷ್ ಉಗ್ರರ ಮಟ್ಟಹಾಕಿದ್ದೇವೆಭಾರತ ನೆಲದಿಂದಲೇ ಉಗ್ರ ಪಾಕ್ಗೆ ಕಟು ಸಂದೇಶನವದೆಹಲಿ: ‘ನಮ್ಮ ನೆಲವನ್ನು ಯಾವುದೇ ಗುಂಪಿಗೂ ಇನ್ನೊಂದು ದೇಶದ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ. ಈಗಾಗಲೇ ಲಷ್ಕರ್ ಎ ತೊಯ್ಬಾ ಹಾಗೂ ಜೈಷ್ ಎ ಮೊಹಮ್ಮದ್ ಸಂಘಟನೆಗಳನ್ನು ಆಫ್ಘನ್ನಲ್ಲಿ ಮಟ್ಟ ಹಾಕಲಾಗಿದೆ’ ಎಂದು ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಖಿ ಹೇಳಿದ್ದಾರೆ.
ಪಾಕಿಸ್ತಾನದ ಉಗ್ರ ಗುಂಪು ಅಫ್ಘಾನಿಸ್ತಾನದ ನೆಲವನ್ನು ಭಾರತದ ವಿರುದ್ಧ ಬಳಸಲು ಪ್ರಯತ್ನಿಸಬಹುದು ಎಂಬ ಕಳವಳದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.‘ಭಾರತವು ಯಾವತ್ತಿಗೂ ಅಫ್ಘಾನಿಸ್ತಾನದ ಜನರ ಜತೆ ನಿಂತಿದೆ. ನನ್ನ ಭೇಟಿಯು ಎರಡೂ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಸುಧಾರಿಸಲಿದೆ’ ಎಂದು ತಿಳಿಸಿದ್ದಾರೆ.
ನವದೆಹಲಿಲ್ಲಿ ಆಫ್ಘನ್ ವಿದೇಶಾಂಗ ಸಚಿವ ಮುತ್ತಖಿ, ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮಾತುಕತೆ
ಅಫ್ಘಾನಿಸ್ತಾನದ ಜೊತೆಗೆ 4 ವರ್ಷಗಳ ಬಳಿಕ ರಾಜತಾಂತ್ರಿಕ ಸಂಬಂಧ ಪುನಾರಂಭಕ್ಕೆ ಭಾರತದ ನಿರ್ಧಾರ
ಭಾರತದ ವಿರುದ್ಧ ಉಗ್ರರನ್ನು ಎತ್ತಿಕಟ್ಟುವ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ