ನವದೆಹಲಿ: ದೇಶಾದ್ಯಂತ 75ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸ್ವಾತಂತ್ರ ಬಂದು 75 ವರ್ಷ ತುಂಬಿದ ಹಿನ್ನೆಲೆ ಅಜಾದಿ ಕಾ ಅಮೃತ ಮಹೋತ್ಸವ ಹೆಸರಿನಲ್ಲಿ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಇಡೀ ದೇಶವೇ ಸಂಭ್ರಮದಿಂದ ಆಚರಿಸುತ್ತಿದೆ. ಅಮೃತ ಮಹೋತ್ಸವದ ಭಾಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕಳೆದ ತಿಂಗಳೇ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಾಡಿದೆ. ಈ ನಡುವೆ ವಿಶ್ವದ ಅತ್ಯಂತ ಎತ್ತರದ ಕಮಾನು ಸೇತುವೆ ಎನಿಸಿದ ಕಾಶ್ಮೀರದ ಜೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ, ಈ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ರಾಷ್ಟ್ರಧ್ವಜ ಹಾರಿಸಿ ಸಂಭ್ರಮ ಪಟ್ಟಿದ್ದಾರೆ.
ವಿಶ್ವದ ಅತೀ ಎತ್ತರದಲ್ಲಿರುವ ಚೆನಾಬ್ ನದಿಗೆ ನಿರ್ಮಿಸಿದ 359 ಅಡಿ ಎತ್ತರದ ಕಮಾನು ಸೇತುವೆಯೂ ಪ್ಯಾರಿಸ್ನ ಐಫೆಲ್ ಟವರ್ಗಿಂತಲೂ 30 ಮೀಟರ್ ಎತ್ತರದಲ್ಲಿದೆ. ಚೆನಾಬ್ ನದಿಯ ಸೇತುವೆಯ ಎರಡು ಭಾಗಗಳನ್ನು ಸಂಪರ್ಕಿಸುವ 'ಗೋಲ್ಡನ್ ಜಾಯಿಂಟ್'ಕಾರ್ಯ ಅಂತಿಮವಾಗಿ ಶನಿವಾರ (ಆಗಸ್ಟ್13) ಪೂರ್ಣಗೊಂಡಿತು. ಅಧಿಕಾರಿಗಳ ಪ್ರಕಾರ, 'ಗೋಲ್ಡನ್ ಜಾಯಿಂಟ್' (ಇದು ಈ ಯೋಜನೆಯಲ್ಲಿ ಕೆಲಸ ಮಾಡುವ ಎಂಜಿನಿಯರ್ಗಳು ನೀಡಿದ ಹೆಸರು) ಮಹತ್ವಾಕಾಂಕ್ಷೆಯ ಚೆನಾಬ್ ಸೇತುವೆಯ ಯೋಜನೆಯನ್ನು ಪೂರ್ಣಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ. ಗೋಲ್ಡನ್ ಜಾಯಿಂಟ್ ಕಾಮಗಾರಿ ಪೂರ್ಣಗೊಂಡ ನಂತರ ಈಗ ಸೇತುವೆಯ ಮೇಲೆ ನಡೆದ ಸಂಭ್ರಮಾಚರಣೆಗಳನ್ನು ಒಳಗೊಂಡ ವಿಡಿಯೋವನ್ನು ರೈಲ್ವೆ ಸಚಿವಾಲಯ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ, ಸೇತುವೆ ಮೇಲೆ ಕಾರ್ಮಿಕರು ಪಟಾಕಿಗಳನ್ನು ಸಿಡಿಸುವುದನ್ನು ಮತ್ತು ಸೇತುವೆಯ ಮೇಲೆ ರಾಷ್ಟ್ರಧ್ವಜವನ್ನು ಬೀಸುತ್ತಿರುವುದನ್ನು ಕಾಣಬಹುದು. ರೈಲ್ವೇ ಸಚಿವಾಲಯ ಟ್ವೀಟ್ ಮಾಡಿರುವ ವಿಡಿಯೋವನ್ನು ಮೂರು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 12,000 ಕ್ಕೂ ಹೆಚ್ಚು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ವೀಡಿಯೊ ಕುರಿತು ಪ್ರತಿಕ್ರಿಯಿಸಿದ ಟ್ವಿಟರ್ ಬಳಕೆದಾರರು, ಇದನ್ನು ಸಾಧ್ಯವಾಗಿಸಿದ ರೈಲ್ವೆ ಮತ್ತು ಇತರ ಏಜೆನ್ಸಿಗಳನ್ನು ದೇವರು ಆಶೀರ್ವದಿಸಲಿ ಎಲ್ಲರಿಗೂ ಅಭಿನಂದನೆಗಳು ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಇದು ನಿಜವಾದ ಮೇಕ್ಇನ್ಇಂಡಿಯಾ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೊಂದು ಹೆಮ್ಮೆಯ ಕ್ಷಣ, ಇದು ಒಂದು ಪ್ರವಾಸಿ ತಾಣವೂ ಆಗಬಹುದು. ದಯವಿಟ್ಟು ಇದರ ಹತ್ತಿರ ಒಂದು ನಿಲ್ದಾಣ ಮತ್ತು ಇತರ ಸೌಕರ್ಯಗಳನ್ನು ಮಾಡಿ. ಇದು ಖಂಡಿತವಾಗಿಯೂ ಸ್ಥಳೀಯ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 359 ಮೀಟರ್ ಎತ್ತರದೊಂದಿಗೆ, ಚೆನಾಬ್ ಸೇತುವೆಯು ಪ್ಯಾರಿಸ್ನ ಐಫೆಲ್ ಟವರ್ಗಿಂತ 30 ಮೀಟರ್ ಎತ್ತರದಲ್ಲಿದೆ, ಇದು ವಿಶ್ವದ ಅತಿ ಎತ್ತರದ ಕಮಾನು ಸೇತುವೆಯಾಗಿದೆ. ಇದನ್ನು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕ್ಕಲ್ ಮತ್ತು ಕೌರಿ ನಡುವೆ ಚೆನಾಬ್ ನದಿಯ ಆಳವಾದ ಕಮರಿಯಲ್ಲಿ ನಿರ್ಮಿಸಲಾಗಿದೆ.
ಸೇತುವೆಯನ್ನು ನಿರ್ಮಿಸಲು ಬಳಸಲಾದ ಸಂಕೀರ್ಣ ತಂತ್ರಜ್ಞಾನ ಮತ್ತು ಶ್ರಮದಾಯಕ ನಿರ್ಮಾಣ ಕಾರ್ಯವನ್ನು ಶ್ಲಾಘಿಸುತ್ತಾ, ಟ್ವಿಟರ್ ಬಳಕೆದಾರರು ಬರೆದಿದ್ದಾರೆ, ಇದೊಂದು ಒಂದು ಎಂಜಿನಿಯರಿಂಗ್ ಅದ್ಭುತ. ಭವಿಷ್ಯದ ಇಂಜಿನಿಯರ್ಗಳಿಗೆ ಅಸಾಧ್ಯವಾದ ಪರಿಹಾರಗಳ ಬಗ್ಗೆ ಯೋಚಿಸಲು ಒಂದು ಉದಾಹರಣೆ ಮತ್ತು ಕೇಸ್ ಸ್ಟಡಿ ಆಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ