* ಇಸ್ಲಾಮಿಕ್ ಪ್ರಾರ್ಥನೆ ಮಾಡಿದ ಹಿಂದೂ ವೈದ್ಯೆ!
* ಪ್ರಾರ್ಥನೆ ಕೇಳಿ ಸಮಾಧಾನದಿಂದ ಮುಸ್ಲಿಂ ಸೋಂಕಿತೆ ಚಿರನಿದ್ರೆಗೆ
* ಕೇರಳದ ಕಲ್ಲಿಕೋಟೆಯಲ್ಲಿ ಹೃದಯಸ್ಪರ್ಶಿ ಪ್ರಸಂಗ
ಕಲ್ಲಿಕೋಟೆ(ಮೇ.22): ಕೋವಿಡ್ ಸೋಂಕಿತರಾಗಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವವರ ಪಾಡು ಹೇಳತೀರದು. ಈ ಕಡೆ ಬಂಧುಗಳನ್ನು ನೋಡುವ ಹಾಗಿಲ್ಲ. ಆ ಕಡೆ ಹೊರಗೆ ಹೋಗುವ ಹಾಗೂ ಇಲ್ಲ. ಇಂಥ ಸಂದರ್ಭದಲ್ಲಿ ಮರಣಶಯ್ಯೆಯ ಮೇಲೆ ಮಲಗಿದ್ದ ಮುಸ್ಲಿಂ ಸೋಂಕಿತೆಯೊಬ್ಬರು ಸಮಾಧಾನದಿಂದ ಚಿರನಿದ್ರೆಗೆ ಜಾರುವಂತೆ ಮಾಡುವಲ್ಲಿ ಹಿಂದೂ ವೈದ್ಯೆಯೊಬ್ಬರು ಶ್ರಮಪಟ್ಟಿದ್ದಾರೆ. ಇದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ನಿವೃತ್ತ ಬ್ರಾಹ್ಮಣ ಅಧ್ಯಾಪಕಿಯ ಅಸ್ಥಿ ವಿಸರ್ಜಿಸಿ ಸಾಮರಸ್ಯ ಸಾರಿದ ಮುಸ್ಲಿಂ ಎಂಪಿ
ಕಲ್ಲಿಕೋಟೆಯ ಆಸ್ಪತ್ರೆಯೊಂದರಲ್ಲಿ ಸೋಂಕಿತೆಯೊಬ್ಬರು ದಾಖಲಾಗಿದ್ದರು. ಅವರ ಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಿಸದೇ ಮೇ 17ರಂದು ವೆಂಟಿಲೇಟರ್ ಕೂಡ ತೆಗೆಯಲಾಯಿತು. ವಿಷಯವನ್ನು ಕುಟುಂಬ ಸದಸ್ಯರು ಮತ್ತು ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ರೇಖಾ ಅವರಿಗೂ ತಿಳಿಸಲಾಯಿತು. ವಿಷಯ ತಿಳಿದ ಡಾ. ರೇಖಾ ರೋಗಿಯ ಬಳಿ ತೆರಳಿದಾಗ, ಆಕೆ ಇಹಲೋಕ ತ್ಯಜಿಸಲು ಏನೋ ಅಡ್ಡಿಯಾಗಿರುವುದನ್ನು ಕಂಡುಕೊಂಡರು. ಇದನ್ನು ನೋಡಿ ಮರುಗಿದ ಡಾ| ರೇಖಾ, ಕಲೀಮಾ (ಲಾ ಇಲಾಹಾ ಇಲ್ಲಲ್ಲಾ, ಮೊಹಮ್ಮದ್ ಸೂಲ್ ರಸೂಲಲ್ಲಾ) ಎಂದು ಪಠಿಸಿದರು. ಆಗ ಸೋಂಕಿತೆಯು ಸಮಾಧಾನದಿಂದ ಪ್ರಾಣ ಬಿಟ್ಟಳು.
ಇಸ್ಲಾಂ ಪ್ರಕಾರ ಹಿಂದು ವ್ಯಕ್ತಿ ಶವ ಸಮಾಧಿ; ಕುಟುಂಬದ ಮನವಿಗೆ ಸೌದಿಯಿಂದ ಭಾರತಕ್ಕೆ ಅವಶೇಷ!
ಈ ಬಗ್ಗೆ ಮಾತನಾಡಿದ ಡಾ| ರೇಖಾ, ‘ದುಬೈನಲ್ಲಿ ನಾನು ಇದ್ದಾಗ ಅಲ್ಲಿಯ ಇಸ್ಲಾಮಿಕ್ ಸಂಸ್ಕಾರಗಳನ್ನು ಕಲಿತಿದ್ದೆ. ನಾನು ಎಲ್ಲ ಧರ್ಮಗಳಿಗೂ ಗೌರವ ನೀಡುವಂಥವಳು. ಮಾನವೀಯ ನೆಲೆಯಿಂದ ಸೋಂಕಿತೆಯ ಕೊನೆಗಾಲದಲ್ಲಿ ನಡೆದುಕೊಂಡೆ. ಕುಟುಂಬದಿಂದ ದೂರ ಇರುವ ಕೋವಿಡ್ ರೋಗಿಗಳು ಏಕಾಂಗಿತನದಿಂದ ಕೊರಗುವುದು ನನಗೆ ಅರ್ಥವಾಗುತ್ತವೆ’ ಎಂದು ಹೇಳಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona