* ಸಾವು ನೆನೆದು ಮೋದಿ ಗದ್ಗದಿತ
* ಎಲ್ಲ ಪ್ರಯತ್ನಗಳ ಹೊರತಾಗ್ಯೂ ಸಾವು ಸಂಭವಿಸುತ್ತಿವೆ
* ಸ್ವಕ್ಷೇತ್ರದ ವೈದ್ಯರ ಜತೆ ಸಂವಾದದಲ್ಲಿ ಪ್ರಧಾನಿ ಭಾವುಕ
ವಾರಾಣಸಿ(ಮೇ.22): ಕೊರೋನಾ ಸೋಂಕಿನಿಂದ ನಿರಂತರವಾಗಿ ಸಂಭವಿಸುತ್ತಿರುವ ಸಾವುಗಳನ್ನು ನೆನೆದು ಪ್ರಧಾನಿ ನರೇಂದ್ರ ಮೋದಿ ಭಾವುಕರಾದ ಪ್ರಸಂಗ ಶುಕ್ರವಾರ ನಡೆಯಿತು.
ಸ್ವಕ್ಷೇತ್ರ ವಾರಾಣಸಿ ಲೋಕಸಭಾ ಕ್ಷೇತ್ರದ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಜತೆ ಅವರು ವಿಡಿಯೋ ಸಂವಾದ ನಡೆಸುತ್ತಿದ್ದರು. ಈ ವೇಳೆ, ‘ಕೊರೋನಾ ಸೋಂಕಿನ ಪರಿಣಾಮ ಹೇಗಿದೆ ಎಂದರೆ ಎಲ್ಲ ಪ್ರಯತ್ನಗಳ ಹೊರತಾಗಿಯೂ ಹಲವಾರು ಸಾವುಗಳು ಸಂಭವಿಸಿವೆ. ನಮ್ಮ ಹಲವು ಪ್ರೀತಿಪಾತ್ರರನ್ನು ವೈರಸ್ ಕಸಿದುಕೊಂಡಿದೆ. ನಾನು ಅವರಿಗೆಲ್ಲಾ ಹೃದಯಪೂರ್ವಕವಾಗಿ ನಮನ ಸಲ್ಲಿಸುತ್ತೇನೆ ಮತ್ತು ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರಿಗೆ ಸಂತಾಪ ಸಲ್ಲಿಸುತ್ತೇನೆ’ ಎಂದು ಹೇಳಿದಾಗ ಅವರು ಭಾವುಕರಾದರು. ಕಣ್ಣಂಚಲ್ಲಿ ನೀರಾಡಿತು.
"कोरोना वायरस ने हमारे कई अपनों को हमसे छीना है। मैं उन सभी लोगों को अपनी श्रद्धांजलि देता हूं, उनके परिजनों के प्रति सांत्वना व्यक्त करता हूं।"
कोरोना के कारण जान गंवाने वालों को श्रद्धांजलि देते हुए प्रधानमंत्री श्री नरेन्द्र मोदी भावुक हो गए। pic.twitter.com/UqTp8JzAAy
ನಂತರ ಕ್ಷಣಕಾಲ ಸಾವರಿಸಿಕೊಂಡು ಮಾತು ಮುಂದುವರಿಸಿದ ಅವರು, ‘ಕೊರೋನಾ ವಿರುದ್ಧದ ಹೋರಾಟ ಸುದೀರ್ಘವಾದುದು. ಸೋಂಕನ್ನು ಈಗ ಸಾಕಷ್ಟುನಿಯಂತ್ರಿಸಿದ್ದೇವೆ. ಆದರೆ ಹಾಗಂತ ‘ನಿಯಂತ್ರಿಸಿದೆವು’ ಎಂದು ಸಮಾಧಾನಪಡಕೂಡದು. ಏಕೆಂದರೆ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ಸಕಲ ಮುಂಜಾಗ್ರತೆ ಅನುಸರಿಸುತ್ತ ಮುಂದುವರಿಯಬೇಕು’ ಎಂದರು.
‘ಈ ಹೋರಾಟದ ನಡುವೆಯೇ ಇಂದು ಬ್ಲಾಕ್ ಫಂಗಸ್ ಕಾಣಿಸಿಕೊಂಡಿದೆ. ಇದು ದೊಡ್ಡ ಸವಾಲು. ಈ ಬಗ್ಗೆಯೂ ಮುಂಜಾಗ್ರತೆ ಅನುಸರಿಸಬೇಕು ಹಾಗೂ ಅದನ್ನು ಹೇಗೆ ನಿಯಂತ್ರಿಸಬೇಕು ಎಂಬುದರತ್ತ ಗಮನ ಹರಿಸಬೇಕು’ ಎಂದು ವೈದ್ಯ ಸಮುದಾಯಕ್ಕೆ ಅವರು ಕರೆ ನೀಡಿದರು.
ಇದೇ ವೇಳೆ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಆರೋಗ್ಯ ಸೇವೆ ನೀಡುತ್ತಿರುವ ವೈದ್ಯ ಸಿಬ್ಬಂದಿಯನ್ನು ಶ್ಲಾಘಿಸಿದ ಅವರು, ‘ಎಲ್ಲಿ ರೋಗ ಇದೆಯೋ ಅಲ್ಲಿಗೇ ತೆರಳಿ ಉಪಚಾರ ನಡೆಸುತ್ತಿದ್ದಾರೆ. ಈಗ ಗ್ರಾಮಗಳತ್ತ ನಮ್ಮ ಗಮನ ಹರಿಸಬೇಕು. ಪೂರ್ವಾಚಲ ಹಾಗೂ ವಾರಾಣಸಿಯ ಗ್ರಾಮಗಳತ್ತ ಗಮನ ಹರಿಸಬೇಕು. ಇದರಿಂದ ಸೋಂಕು ನಿಯಂತ್ರಣಕ್ಕೆ ಬರಬಹುದು’ ಎಂದು ಭಾವಪರವಶರಾಗಿ ನುಡಿದರು
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona