
ಪತ್ನಿ ಹಾಗೂ ತನ್ನ ಆಪ್ತ ಸ್ನೇಹಿತನ ನಡುವೆ ಅಕ್ರಮ ಸಂಬಂಧವಿದೆ ಎಂದು ತಿಳಿದ 38 ವರ್ಷದ ವ್ಯಕ್ತಿಯೊಬ್ಬ, ಇಬ್ಬರನ್ನೂ ತನ್ನ ಮನೆಯಲ್ಲೇ ಗುಂಡಿಕ್ಕಿ ಕೊಂದಿದ್ದಾನೆ. ಘಾಜಿಯಾಬಾದ್ನ ಟ್ರೋನಿಕಾ ಸಿಟಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ರಶೀದ್, ತನ್ನ ಪತ್ನಿ ಶಬನಂ ಹಾಗೂ ತನ್ನ ಆಪ್ತ ಸ್ನೇಹಿತ ಮತ್ತು ಸಹೋದ್ಯೋಗಿ ಫಹೀಮ್ ನಡುವೆ ಎರಡು ವರ್ಷಗಳಿಂದ ಸಂಬಂಧ ಇರುವುದನ್ನು ಪತ್ತೆ ಹಚ್ಚಿದ್ದ. ಶಬನಂ ತನ್ನನ್ನು ಬಿಟ್ಟು ಹೋಗಲು ಪ್ಲ್ಯಾನ್ ಮಾಡಿದ್ದಳು ಅನ್ನೋದು ಕೂಡ ರಶೀದ್ಗೆ ಗೊತ್ತಾಗಿತ್ತು.
ಸೋಮವಾರ ಸಂಜೆ ರಶೀದ್, ಫಹೀಮ್ನನ್ನು ಊಟಕ್ಕೆ ಮನೆಗೆ ಕರೆದಿದ್ದ. ಮೂವರೂ ಒಟ್ಟಿಗೆ ಊಟ ಮಾಡಿ, ಸಿಗರೇಟ್ ಕೂಡ ಸೇದಿದ್ದಾರೆ. ಇದಾದ ಬಳಿಕವೇ ಈ ಅಪರಾಧ ನಡೆದಿದೆ. ಈ ದಂಪತಿಯ 7 ವರ್ಷದ ಮಗ ಈ ಕೊಲೆಯನ್ನು ಕಣ್ಣಾರೆ ಕಂಡಿದ್ದಾನೆ. ರಶೀದ್ ಬೆಡ್ರೂಮ್ನಲ್ಲಿದ್ದ ಕಪಾಟಿನಿಂದ ಗನ್ ತೆಗೆದು, ಮೊದಲು ಫಹೀಮ್ಗೆ, ನಂತರ ತನ್ನ ಹೆಂಡತಿಗೆ ಹತ್ತಿರದಿಂದ ತಲೆಗೆ ಶೂಟ್ ಮಾಡಿದ ಅಂತ ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ.
ಕೊಲೆ ಮಾಡಿದ ನಂತರ ರಶೀದ್ ತನ್ನ ಮಗನನ್ನು ನೋಡಿ, 'ಅಬ್ ಸಬ್ ಠೀಕ್ ಹೋ ಜಾಯೇಗಾ' (ಈಗ ಎಲ್ಲವೂ ಸರಿ ಹೋಗುತ್ತೆ) ಎಂದು ಹೇಳಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಕ್ಕಪಕ್ಕದವರು ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ, ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಫಹೀಮ್ ತಂದೆ ನೀಡಿದ ದೂರಿನ ಅನ್ವಯ, ಪೊಲೀಸರು ರಶೀದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಪತ್ತೆಹಚ್ಚಲು ಹಲವು ತಂಡಗಳನ್ನು ರಚಿಸಲಾಗಿದೆ. ರಶೀದ್ಗೆ ಗನ್ ಎಲ್ಲಿಂದ ಸಿಕ್ಕಿತು ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತನಿಖೆ ವೇಳೆ, ರಶೀದ್ ಮತ್ತು ಫಹೀಮ್ ಇಬ್ಬರಿಗೂ ಕ್ರಿಮಿನಲ್ ಹಿನ್ನೆಲೆ ಇರುವುದು ಗೊತ್ತಾಗಿದೆ. ಫಹೀಮ್ ವಿರುದ್ಧ ಕೊಲೆ ಯತ್ನ, ಕಳ್ಳತನ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆಯ ಹಲವು ಪ್ರಕರಣಗಳಿದ್ದವು. ಇತ್ತ ರಶೀದ್ ಕೂಡ 2023ರಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ.
ಇಬ್ಬರ ತಲೆಗೂ ಗುಂಡು ತಗುಲಿ ಸಾವು ಸಂಭವಿಸಿದೆ ಎಂದು ಡಿಸಿಪಿ (ಗ್ರಾಮೀಣ) ಸುರೇಂದ್ರ ನಾಥ್ ತಿವಾರಿ ಖಚಿತಪಡಿಸಿದ್ದಾರೆ.
ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ 1.5 ವರ್ಷದಿಂದ 20 ವರ್ಷದೊಳಗಿನ ಏಳು ಮಕ್ಕಳಿದ್ದಾರೆ. ಹಿರಿಯ ಮಗನ ಮದುವೆ ನಡೆದ ಆರು ತಿಂಗಳ ಹಿಂದೆಯೇ ರಶೀದ್ಗೆ ಈ ಅಕ್ರಮ ಸಂಬಂಧದ ಬಗ್ಗೆ ಗೊತ್ತಾಗಿತ್ತು. ಅಂದಿನಿಂದಲೇ ಮನೆಯಲ್ಲಿ ಕಲಹ ಶುರುವಾಗಿತ್ತು ಎಂದು ಕುಟುಂಬಸ್ಥರು ಮತ್ತು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಸಂಬಂಧ ಮುಂದುವರಿದಿತ್ತು, ಇದರಿಂದಾಗಿ ಆಗಾಗ ಜಗಳ ನಡೆಯುತ್ತಿತ್ತು.
ಶಬನಂ ವಿಚ್ಛೇದನ ಪಡೆಯಲು ಬಯಸಿದ್ದಳು ಮತ್ತು ತನ್ನ ಹೆಸರಿನಲ್ಲಿದ್ದ ಮನೆಯನ್ನು ಮಾರಾಟ ಮಾಡಲು ಯೋಜಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ನಡೆಯುವ ಒಂದು ವಾರಕ್ಕೂ ಮುನ್ನ ಇದೇ ವಿಚಾರವಾಗಿ ರಶೀದ್ ಮತ್ತು ಫಹೀಮ್ ನಡುವೆ ಜಗಳವಾಗಿತ್ತು. ಘಟನೆ ನಡೆದ ರಾತ್ರಿ, ಮಕ್ಕಳು ಮಲಗಿದ್ದಾರೆಂದು ಭಾವಿಸಿ ರಶೀದ್, ಮನೆಯಲ್ಲಿ ಬಚ್ಚಿಟ್ಟಿದ್ದ ಪಿಸ್ತೂಲ್ನೊಂದಿಗೆ ಇಬ್ಬರನ್ನೂ ಮತ್ತೊಮ್ಮೆ ಎದುರಿಸಿದ್ದಾನೆ.
ವಾಗ್ವಾದ ತಾರಕಕ್ಕೇರಿದಾಗ, ಟಿವಿ ನೋಡುತ್ತಿದ್ದ ದಂಪತಿಯ ಚಿಕ್ಕ ಮಗ ರೂಮಿಗೆ ಬಂದಿದ್ದು, ಈ ಭಯಾನಕ ಕೃತ್ಯಕ್ಕೆ ಸಾಕ್ಷಿಯಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ