
ಭಾರತದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದು ಜನರಿಗೆ ಅಭ್ಯಾಸವಾಗಿಬಿಟ್ಟಿದೆ. ಸರ್ಕಾರ ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಜನರ ಮನಸ್ಥಿತಿ ಮಾತ್ರ ಬದಲಾಗುವುದೇ ಇಲ್ಲ. ಪೋಷಕರು ತಾವೇ ರಸ್ತೆಯಲ್ಲಿ ಕಸ ಎಸೆಯುವವರಾಗಿದ್ದರೆ, ಮುಂದಿನ ತಲೆಮಾರಿನ ತಮ್ಮ ಮಕ್ಕಳಿಗೆ ಬುದ್ಧಿ ಹೇಳುವ ಹಕ್ಕು ಅವರಿಗೆಲ್ಲಿರುತ್ತದೆ. ಹೀಗಾಗಿ ಸರ್ಕಾರ ಸ್ವಚ್ಛತೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಸಾರ್ವಜನಿಕ ರಸ್ತೆಗಳಲ್ಲಿ, ಸ್ಥಳಗಳಲ್ಲಿ ಕಸ ಎಸೆಯುವ ಪರಂಪರೆ ಮುಂದುವರೆಯುತ್ತಲೇ ಇದೆ. ಯಾರು ಎಷ್ಟೇ ಸ್ವಚ್ಛ ಮಾಡಲಿ ನಮ್ಮ ಜನರ ಬುದ್ಧಿ ಹಾಗೆಯೇ ಇರುತ್ತದೆ. ಕಸ ಎಸೆದ ಸ್ಥಳವನ್ನು ಎಷ್ಟು ಸ್ವಚ್ಛ ಮಾಡಿದರೂ ಮರುದಿನ ನೋಡಿದರೆ ಅಲ್ಲೊಂದು ಕಸದ ಗುಪ್ಪೆ ನಿರ್ಮಾಣವಾಗಿರುತ್ತದೆ. ಕಸ ಎಸೆಯಬೇಡಿ ಎನ್ನುವ ಪೌರ ಕಾರ್ಮಿಕರ ಮೇಲೆಯೇ ವಿದ್ಯಾವಂತರೆನಿಸಿಕೊಂಡವರು ಹಲ್ಲೆಗೆ ಮುಂದಾಗುತ್ತಾರೆ. ಜನರ ಈ ಮನಸ್ಥಿತಿಯಿಂದಾಗಿ ದೇಶದ ಮಾನ ವಿದೇಶದಲ್ಲಿ ಕಳೆಯುವಂತಾಗುತ್ತಿದೆ. ಕೆಲ ದಿನಗಳ ಹಿಂದೆ ವಿದೇಶಿಗನೋರ್ವ ನಮ್ಮ ದೇಶದ ಸಾರ್ವಜನಿಕ ಸ್ಥಳವೊಂದರಲ್ಲಿ ಸ್ವಚ್ಛತೆ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ಹಾಗೆಯೇ ಈಗ ಮತ್ತೊಂದು ವಿದೇಶಿ ಯುವತಿಯೊಬ್ಬಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋದಲ್ಲಿ ನಮ್ಮ ದೇಶದ ಮಕ್ಕಳ ಮನಸ್ಥಿತಿ ನೋಡಿ ನಾವು ತಲೆತಗ್ಗಿಸುವಂತಾಗಿದೆ.
ಹೌದು amina_finds ಎಂಬ ಇನ್ಸ್ಟಾಗ್ರಾಮ್ ಪೇಜ್ನಿಂದ ಈ ವೀಡಿಯೋ ವೈರಲ್ ಆಗಿದೆ. ಭಾರತೀಯ ಮಕ್ಕಳೊಂದಿಗೆ ಮಾತನಾಡಲು ಹೋಗಿ ತಪ್ಪಾಯ್ತು ಎಂದು ಅವರು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಮಕ್ಕಳು ರಸ್ತೆಯಲ್ಲೇ ಕಸ ಎಸೆದಿದ್ದನ್ನು ನೋಡಿ ಆ ವಿದೇಶಿ ಯುವತಿ ಹೀಗೆ ಮಾಡಬೇಡಿ ಈ ಕಸವನ್ನು ಎತ್ತಿ ಕಸದ ಬುಟ್ಟಿಗೆ ಹಾಕಿ ಇದು ನಿಮ್ಮ ದೇಶ ಎಂದು ಸೌಮ್ಯವಾಗಿ ಮನವಿ ಮಾಡುತ್ತಾರೆ. ಆದರೆ ಆ ಬಾಲಕರು ಅದಕ್ಕೆ ಒಪ್ಪುವುದಿಲ್ಲ, ಅದಕ್ಕೆ ವಿದೇಶಿ ಯುವತಿ ಇದು ಸರಿಯಲ್ಲ, ಕಸವನ್ನು ಎತ್ತಿ ಕಸದ ಬುಟ್ಟಿಗೆ ಹಾಕಿ ಎಂಬಂತೆ ಮನವಿ ಮಾಡ್ತಾಳೆ. ಆದರೆ ಮಕ್ಕಳು ತಮ್ಮ ಮೊಂಡಾಟ ಮುಂದುವರೆಸಿದ್ದಾರೆ. ಮಕ್ಕಳ ವರ್ತನೆ ನೋಡಿ ಆ ವಿದೇಶಿ ಮಹಿಳೆ ಅಚ್ಚರಿಪಟ್ಟು ಸುಮ್ಮನಾಗಿದ್ದಾರೆ.
ಆದರೆ ಮಕ್ಕಳು ಸುಮ್ಮನಾಗಿಲ್ಲ, ಮಕ್ಕಳ ವರ್ತನೆಯಿಂದ ಬೇಸರಿಸಿಕೊಂಡು ತಿರುಗಿ ನಿಂತಿದ್ದ ಮಹಿಳೆಯನ್ನು ಎಕ್ಸ್ಕ್ಯೂಸ್ ಮಿ ಎಂದರು ಕರೆದು ಡಾಲರ್ ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯುವತಿ ನಾನು ನಿಮಗೆ ಏನನ್ನೂ ಕೊಡುವುದಿಲ್ಲ, ನೀವು ಇಲ್ಲಿ ಕಸ ಎಸೆದಿದ್ದೀರಿ ಎಂದು ಅಲ್ಲಿ ಮಕ್ಕಳು ಎಸೆದ ಕಸವನ್ನು ತೋರಿಸುತ್ತಾರೆ. ಇಷ್ಟಕ್ಕೆ ಸುಮ್ಮನಿರದ ಮಕ್ಕಳು ಕಿಡಿಗೇಡಿಗಳಂತೆ ವರ್ತಿಸುತ್ತಾ ಆಕೆಯ ಹಿಂದಿಂದೇ ಸಾಗುತ್ತಾ ಆಕೆ ಹೋದಲೆಲ್ಲಾ ಕಸ ಎಸೆಯುತ್ತಾ ಹೋಗಿ ಆಕೆಯನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಮಹಿಳೆ ಇದು ನಿಮ್ಮ ದೇಶ, ನೀವು ಹೀಗೆಯೇ ಮಾಡುತ್ತಾ ಹೋದರೆ ನೀವು ಕಸದಲ್ಲೇ ಬದುಕಬೇಕಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಈ ಕಿಡಿಗೇಡಿ ಮಕ್ಕಳು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಆಕೆಯನ್ನು ಅಣಕಿಸಲು ನೋಡಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ಅನೇಕ ಭಾರತೀಯ ನೆಟ್ಟಿಗರು ಮಕ್ಕಳ ವರ್ತನೆಗೆ ಆಕೆಯಲ್ಲಿ ಕ್ಷಮೆ ಕೇಳಿದ್ದಾರೆ. ಈ ರೀತಿಯ ಅನುಭವ ನಿಮಗಾಗಿದ್ದಕ್ಕೆ ಕ್ಷಮೆ ಕೇಳುತ್ತೇವೆ ಎಂದು ಒಬ್ಬರು ಮನವಿ ಮಾಡಿದ್ದಾರೆ. ಅನೇಕರು ಮಕ್ಕಳಿಗೆ ಮಾರ್ಗದರ್ಶನದ ಕೊರತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರನ್ನು ತಿದ್ದಲು ಪ್ರಯತ್ನಿಸಿದ್ದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಒಡಿಶಾದ ಚಿಲಿಕಾ ಸರೋವರದಲ್ಲಿ ಅಪರೂಪದ ವಿದ್ಯಮಾನ: ಸುರುಳಿ ಸುತ್ತಿ ಆಕಾಶಕ್ಕೆ ಚಿಮ್ಮಿದ ನೀರು
ಇದನ್ನೂ ಓದಿ: ಅಕ್ಷರ ಕಲಿಯುವ ಮೊದಲೇ ಹಲವರ ಉಸಿರು ನಿಲ್ಲಿಸಿದ: ದೇಶದ ಅತ್ಯಂತ ಕಿರಿಯ ಸೀರಿಯಲ್ ಕಿಲ್ಲರ್ ಕತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ