ಯುವತಿಯ ಕಾರು ಎಳೆದೊಯ್ದ ಪ್ರಕರಣ: ಅಪಘಾತದ ತೀವ್ರತೆಗೆ ಮೆದುಳು, ಶ್ವಾಸಕೋಶ ಹೊರಕ್ಕೆ

By Kannadaprabha NewsFirst Published Jan 5, 2023, 11:37 AM IST
Highlights

ದೆಹಲಿಯಲ್ಲಿ ಹೊಸ ವರ್ಷಾಚರಣೆಯಂದು ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಅಂಜಲಿ ಶರ್ಮಾ (20) ಅತ್ಯಂತ ಭೀಕರ ಸ್ವರೂಪದಲ್ಲಿ ಗಾಯಗೊಂಡು ಸಾವನ್ನಪ್ಪಿದ್ದಾಳೆ ಎಂಬ ಅಂಶವನ್ನು ಮರಣೋತ್ತರ ವರದಿ ಬಹಿರಂಗಪಡಿಸಿದೆ.  

ನವದೆಹಲಿ: ದೆಹಲಿಯಲ್ಲಿ ಹೊಸ ವರ್ಷಾಚರಣೆಯಂದು ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಅಂಜಲಿ ಶರ್ಮಾ (20) ಅತ್ಯಂತ ಭೀಕರ ಸ್ವರೂಪದಲ್ಲಿ ಗಾಯಗೊಂಡು ಸಾವನ್ನಪ್ಪಿದ್ದಾಳೆ ಎಂಬ ಅಂಶವನ್ನು ಮರಣೋತ್ತರ ವರದಿ ಬಹಿರಂಗಪಡಿಸಿದೆ.  ಅಂಜಲಿ ಪ್ರಯಾಣಿಸುತ್ತಿದ್ದ ಸ್ಕೂಟಿಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಈ ವೇಳೆ ಆಕೆಯ ಕಾಲು ಕಾರಿನ ಚಕ್ರಕ್ಕೆ ಸಿಕ್ಕಿಹಾಕಿಕೊಂಡಿತ್ತು. ಅಪಘಾತವಾದರೂ ಕಾರು ನಿಲ್ಲಿಸದ ಕಾರಣ ಆಕೆಯ ದೇಹವನ್ನು 12 ಕಿ.ಮೀವರೆಗೂ ಅದೇ ಸ್ಥಿತಿಯಲ್ಲೇ  ಎಳೆದೊಯ್ಯಲಾಗಿತ್ತು. ಹೀಗೆ 12 ಕಿ.ಮೀ ಕಾರಿನ ಚಕ್ರಕ್ಕೆ ಸಿಕ್ಕಿಕೊಂಡೇಸಂಚರಿಸಿದ ಪರಿಣಾಮ ಆಕೆಯ ಎರಡೂ ಕಾಲುಗಳು ದೇಹದಿಂದ ಬೇರೆಯಾಗಿತ್ತು. ಮೆದುಳಿನ ಕೆಲ ಭಾಗಗಳು ನಾಪತ್ತೆಯಾಗಿದ್ದವು. ಶ್ವಾಸಕೋಶ ದೇಹದಿಂದ ಹೊರಬಂದಿತ್ತು. ಬೆನ್ನಿನ ಭಾಗದಲ್ಲಿ ಚರ್ಮ ಹರಿದು ಹೋದ ಕಾರಣ ಬೆನ್ನುಮೂಳೆಗಳು ದೇಹದಿಂದ ಹೊರಕ್ಕೆ ಚಾಚಿಕೊಂಡಿದ್ದವು ಆಕೆಯ ತಲೆ, ಬೆನ್ನು, ಕಾಲಿನ ಭಾಗಕ್ಕೆ ಹೆಚ್ಚಿನ ಹಾನಿಯಾಗಿದ್ದು, ಆಕೆ ಆಘಾತ ಮತ್ತು ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ ಎಂದು ಮರಣೋತ್ತರ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಕರಣ ಸಂಬಂಧ ಈಗಾಗಲೇ ಕಾರಿನಲ್ಲಿದ್ದ 5 ಆರೋಪಿಗಳನ್ನು (Accused) ಬಂಧಿಸಲಾಗಿದೆ. ವಿಚಾರಣೆ ವೇಳೆ ಸ್ಕೂಟರ್‌ಗೆ ತಮ್ಮ ಕಾರು ಡಿಕ್ಕಿ ಹೊಡೆದ ಮತ್ತು ಅದರಲ್ಲಿದ್ದ ಮಹಿಳೆ ಕಾರಿನ ಚಕ್ರಕ್ಕೆ ಸಿಕ್ಕಿಹಾಕಿಕೊಂಡಿದ್ದ ವಿಷಯ ತಮಗೆ ಗೊತ್ತಿರಲೇ ಇಲ್ಲ. ತಿರುವೊಂದರಲ್ಲಿ ಕಾರನ್ನು ತಿರುಗಿಸುವ ವೇಳೆಗಷ್ಟೇ ತಮಗೆ ಹಿಂದೆ ಏನೋ ಸಿಕ್ಕಿಬಿದ್ದ ವಿಷಯ ಗೊತ್ತಾಗಿತ್ತು. ತಕ್ಷಣವೇ ನಾವು ಕಾರು ನಿಲ್ಲಿಸಿ ನೋಡಿದಾಗ ಅಲ್ಲಿ ಮಹಿಳೆಯ ಶವ ಪತ್ತೆಯಾಯಿತು ಎಂದು ಆರೋಪಿಗಳು ಹೇಳಿದ್ದಾರೆ.

ಸ್ಕೂಟರ್‌ಗೆ ಡಿಕ್ಕಿ ಹೊಡೆದು, ಯುವತಿಯನ್ನು ಎಳೆದೊಯ್ದ ಕಾರು: ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆ..!

ಹೊಸ ವರ್ಷದಂದು ದಿಲ್ಲಿಯ ಸುಲ್ತಾನ್‌ಪುರಿ (Sultanpuri) ಬಳಿ ಈ ಭೀಕರ ಘಟನೆ ನಡೆದಿತ್ತು. ಬಗ್ಗೆ ಮೃತ ಅಂಜಲಿ ಸಿಂಗ್‌ರ ಗೆಳತಿ ನಿಧಿ ವಿಸ್ತೃತವಾಗಿ ಮಾತನಾಡಿದ್ದು,  ಕಾರಿನ ಚಕ್ರಕ್ಕೆ ಮಹಿಳೆ ಸಿಕ್ಕಿಬಿದ್ದ ವಿಷಯ ತಮಗೆ ಗೊತ್ತಿರಲಿಲ್ಲ ಎಂಬ ಆರೋಪಿಗಳ ವಾದವನ್ನು ನಿಧಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಘಟನೆ ನಡೆದ ದಿನ ನಾವಿಬ್ಬರೂ ಪಾರ್ಟಿ ಮುಗಿಸಿ ಮನೆಗೆ ಹೊರಟಿದ್ದೆವು. ಈ ವೇಳೆ ಅಂಜಲಿ ಸಾಕಷ್ಟು ಮದ್ಯ ಸೇವಿಸಿದ್ದ ಕಾರಣ ಆಕೆಗೆ ನಾನು ಬೈಕ್‌ ಓಡಿಸುವೆ ಎಂದು ಸ್ಪಷಪಡಿಸಿದ್ದೆ. ಈ ವೇಳೆ ನಮ್ಮಿಬ್ಬರ ನಡುವೆ ವಾಗ್ವಾದ ನಡೆದಿತ್ತು. ನಂತರ ನಾವು ಸ್ಕೂಟಿಯಲ್ಲಿ ಮನೆಗೆ ಹೊರಟ ವೇಳೆ ಕಾರೊಂದು ಎದುರಿನಿಂದ ಬಂದು ಡಿಕ್ಕಿ ಹೊಡೆಯಿತು. ಈ ವೇಳೆ ನಾನು ಒಂದು ಬದಿಗೆ ಬಿದ್ದರೆ, ಆಕೆ ಇನ್ನೊಂದು ಬದಿಗೆ ಬಿದ್ದಳು. ಈ ವೇಳೆ ಕಾರಿನಲ್ಲಿದ್ದ ವ್ಯಕ್ತಿಗಳು ಆಕೆಯ ಮೇಲೆ ಉದ್ದೇಶಪೂರ್ವಕವಾಗಿಯೇ ಕಾರು ಹತ್ತಿಸಿದರು. ಬಳಿಕವು ಎರಡು ಮೂರು ಸಲ ಹಿಂದೆ- ಮುಂದೆ ಕಾರನ್ನು ಚಲಾಯಿಸಿಕೊಂಡು ಹೋದರು ಎಂದು ನಿಧಿ (Nidhi) ಹೇಳಿದ್ದಾಳೆ.

ಈ ಬಗ್ಗೆ ಯಾರಿಗಾದರೂ ತಿಳಿಸೋಣವೆಂದರೆ ಅಪಘಾತದ ಹೊಡೆತಕ್ಕೆ ನಾನು ಮೊಬೈಲ್‌ ಕಳೆದುಕೊಂಡಿದ್ದೆ. ಜೊತೆಗೆ ಅಪಘಾತದ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕಾನೂನು ಜಂಜಾಟಕ್ಕೆ ಸಿಕ್ಕಿಬೀಳಬೇಕಾಗುತ್ತದೆ ಎಂದು ಹೆದರಿಕೊಂಡೆ. ಸ್ನೇಹಿತೆಗಾಗಿ ಏನೂ ಮಾಡಲಾಗದ ಹತಾಶೆಯಿಂದ ಮನೆಗೆ ತೆರಳಿದೆ. ಭಯದಿಂದ ಮನೆಯಲ್ಲೂ ಯಾರಿಗೂ ಈ ವಿಷಯ ಹೇಳಲಿಲ್ಲ. ಮನೆಯಲ್ಲಿ ಏಕಾಂಗಿಯಾಗಿ ಅತ್ತೆ ಎಂದು ನಿಧಿ ಹೇಳಿದ್ದಾರೆ.

ದೆಹಲಿಯಲ್ಲಿ ಯುವತಿ ಬಲಿ: ಮಗಳನ್ನು ರೇಪ್‌ ಮಾಡಿ ಕೊಲೆ ಮಾಡಲಾಗಿದೆ ಎಂದು ತಾಯಿ ಆರೋಪ

ದೆಹಲಿಯ ಸುಲ್ತಾನ್‌ಪುರಿಯಲ್ಲಿ ದ್ವಿಚಕ್ರವಾಹನದಲ್ಲಿ ಸಾಗುತ್ತಿದ್ದ ಯುವತಿಯರಿಗೆ ರಿವರ್ಸ್‌ (Car riverse) ತೆಗೆದುಕೊಳ್ಳುತ್ತಿದ್ದ ಕಾರೊಂದು ಗುದ್ದಿತ್ತು. ಅಪಘಾತದಲ್ಲಿ ಕಾರಿಗೆ ಸಿಲುಕಿಕೊಂಡ ಮಹಿಳೆಯನ್ನು ಸುಮಾರು 1.5 ಗಂಟೆಗಳ ಕಾಲ ಎಳೆದುಕೊಂಡೇ ಓಡಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಸಿಸಿಟೀವಿಯಲ್ಲೂ ಈ ಕುರಿತ ದೃಶ್ಯ ದಾಖಲಾಗಿವೆ. . ದೇಹವೊಂದು ಸಿಲುಕಿಕೊಂಡಿರುವ ಸ್ಥಿತಿಯಲ್ಲಿ ಮಾರುತಿ ಬಲೆನೋ ಕಾರು ರಸ್ತೆಯಲ್ಲಿ ಯೂಟರ್ನ್‌ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಹೊಸದಾಗಿ ಬಿಡುಗಡೆಯಾಗಿರುವ ಸಿಸಿಟೀವಿ (cctv) ದೃಶ್ಯಗಳಿಂದ ದೃಢಪಟ್ಟಿದೆ.

ಪ್ರತ್ಯಕ್ಷದರ್ಶಿ ದೀಪಕ್‌ ದಹಿಯಾ (deepak dahiya) ಮಾತನಾಡಿ, ಮುಂಜಾನೆ 3.20ರ ಸುಮಾರಿಗೆ ನಾನು ಅಂಗಡಿಯ ಹೊರಭಾಗದಲ್ಲಿ ನಿಂತಿದ್ದೆ, ಆಗ ನನಗೆ ಶಬ್ದ ಕೇಳಿತು. ನೋಡಿದಾಗ ಕಾರೊಂದು ಶವವನ್ನು ಎಳೆದುಕೊಂಡು ಹೋಗುತ್ತಿತ್ತು. ನಾನು ತಕ್ಷಣಕ್ಕೆ ಪೊಲೀಸರಿಗೆ ಫೋನ್‌ ಮಾಡಿದೆ. ಸ್ವಲ್ಪ ಹೊತ್ತಿನ ಬಳಿಕ ಕಾರು ಯೂಟರ್ನ್‌ ತೆಗೆದುಕೊಂಡು ಮರಳಿ ಹೋಯಿತು. ಆಗಲೂ ಸಹ ಶವ ಅದರಲ್ಲೇ ಸಿಲುಕಿಕೊಂಡಿತ್ತು. ಸುಮಾರು ನಾಲ್ಕೈದು ಕಿ.ಮೀ. ಅಂತರದಲ್ಲಿ ಯೂಟರ್ನ್‌ (U-turn) ತೆಗೆದುಕೊಂಡು ಕಾರು ಹಲವು ಬಾರಿ ಈ ರಸ್ತೆಯಲ್ಲೇ ಚಲಿಸುತ್ತಿತ್ತು. ಸುಮಾರು 1.5 ಗಂಟೆಗಳ ಕಾಲ ಮೃತ ದೇಹದೊಂದಿದೆ 20 ಕಿ.ಮೀ.ಗೂ ಹೆಚ್ಚು ದೂರ ಓಡಾಡಿದ್ದಾರೆ ಅಂದು ಅವರು ಹೇಳಿದ್ದಾರೆ.

click me!