Covid 19 Guidelines: ಜಾಗತಿಕ ಸೋಂಕಿನಿಂದ ಪಾಠ ಕಲಿಯಬೇಕು: ಕೇಂದ್ರ ಸರ್ಕಾರ ಎಚ್ಚರಿಕೆ

By Kannadaprabha NewsFirst Published Dec 11, 2021, 8:49 AM IST
Highlights

*ಒಮಿಕ್ರೋನ್‌ ಲಕ್ಷಣ ಸೌಮ್ಯ, ಆದರೆ ನಿಯಮ ಪಾಲನೆ ಅಗತ್ಯ
*ಮಾಸ್ಕ್‌, ಮಾರ್ಗಸೂಚಿಗೆ ಜನರ ನಿರ್ಲಕ್ಷ್ಯ: ಕೇಂದ್ರ ಎಚ್ಚರಿಕೆ
*ಮತ್ತೆ 9 ಒಮಿಕ್ರೋನ್‌ ಪ್ರಕರಣ: 32ಕ್ಕೆ ಏರಿಕೆ
 

ನವದೆಹಲಿ(ಡಿ. 11)  ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 30ಕ್ಕೂ ಹೆಚ್ಚು ಒಮಿಕ್ರೋನ್‌ (Omicron Cases in India) ಪ್ರಕರಣಗಳು ದಾಖಲಾಗಿದೆ. ಆದರೆ ಎಲ್ಲಾ ಪ್ರಕರಣಗಳಲ್ಲೂ ರೋಗಲಕ್ಷಣಗಳು ಸೌಮ್ಯವಾಗಿವೆ. ಆದರೂ ಎಚ್ಚರ ವಹಿಸುವುದು ಅಗತ್ಯ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ. ಜನರು ಮಾಸ್ಕ್‌ (Mask) ಧರಿಸಲು ನಿರ್ಲಕ್ಷ್ಯ ತೋರುತ್ತಿರುವ ಹಾಗೂ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದರ ಬಗ್ಗೆ ಕೂಡ ಸರ್ಕಾರ (Uninon Governmnet) ಎಚ್ಚರಿಕೆ ನೀಡಿದೆ. 

‘ಕೊರೋನಾ ರೂಪಾಂತರಿಯಾದ ಒಮಿಕ್ರೋನ್‌ (Covid 19 Variant) ವೈರಸ್‌ ಇಡೀ ಜಗತ್ತನ್ನು ಮತ್ತೊಮ್ಮೆ ಆತಂಕಕ್ಕೆ ದೂಡಿದೆ. ಇಂತಹ ಆಘಾತಕಾರಿ ಸನ್ನಿವೇಶದಲ್ಲಿ ಕೊರೊನಾ ಲಸಿಕೆಯ (Corona Vaccine) ಎರಡೂ ಡೋಸ್‌ ಪಡೆಯುವುದು ಮತ್ತು ಮಾಸ್ಕ್‌ ಅನ್ನು ಧರಿಸುವುದು ನಿರ್ಣಾಯಕವಾಗಿದೆ. ಈ ಹಿನ್ನೆಲೆ ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ. ಆದರೆ ಜನರು ಮಾಸ್ಕ್‌ ಧಾರಣೆ ಹಾಗೂ ಇತರ ಕೋವಿಡ್‌ ಸನ್ನಡತೆ ಮರೆತಿದ್ದಾರೆ. ಜಾಗತಿಕ ವಿದ್ಯಮಾನಗಳಿಂದ ನಾವು ಪಾಠ ಕಲಿಯಬೇಕು’ ಎಂದು ನೀತಿ ಆಯೋಗದ (NITI Ayog) ಸದಸ್ಯ ಡಾ. ವಿ.ಕೆ ಪಾಲ್‌ (V K Paul) ಎಚ್ಚರಿಸಿದ್ದಾರೆ.

ಐಸಿಎಂಆರ್‌ ನಿರ್ದೇಶನದಂತೆ ಎಚ್ಚರಿಕೆ!

ಒಮಿಕ್ರೋನ್‌ ರೂಪಾಂತರಿ ಇಲ್ಲಿಯವರೆಗೆ ಆರೋಗ್ಯ ವ್ಯವಸ್ಥೆಯ ಮೇಲೆ ಯಾವುದೇ ದುಷ್ಪರಿಣಾಮ ಬೀರಿಲ್ಲ. ಆದರೆ ಐಸಿಎಂಆರ್‌ ನಿರ್ದೇಶನದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಎಲ್ಲಾ ಪ್ರಕರಣಗಳಲ್ಲೂ ರೋಗ ಲಕ್ಷಣಗಳು ಸೌಮ್ಯವಾಗಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ನಿರ್ದೇಶಕ ಲಾವ್‌ ಅಗರವಾಲ್‌ ಹೇಳಿದ್ದಾರೆ.

Omicron Threat: ವಿದೇಶದಿಂದ ಬಂದ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಮೇಲೆ ಒಲವು

ಲಸಿಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆಗಿರುವುದರಿಂದ ಒಮಿಕ್ರೋನ್‌ ತಡೆಯುವುದು ಸುಲಭವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ ಎಂದು ಸರ್ಕಾರ ಹೇಳಿದೆ. ಒಮಿಕ್ರೋನ್‌ಗೆ ಸಂಬಂಧಿಸಿದಂತೆ ಹೆಚ್ಚಿನ ನಿಯಮಗಳನ್ನು ಜಾರಿಗೊಳಿಸುವಂತೆ ಯಾವುದೇ ಪ್ರಸ್ತಾವಗಳನ್ನು ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾಸ್ಕ್‌ ಬಳಕೆ ಇಳಿಕೆ: ಕೇಂದ್ರದಿಂದ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ಜನರು ಕೊರೋನಾ ಸನ್ನಡತೆ ಮರೆಯುತ್ತಿದ್ದಾರೆ. ಮಾಸ್ಕ್‌ ಬಳಕೆ 2020ರ ಡಿಸೆಂಬರ್‌ಗೆ ಹೋಲಿಸಿದರೆ ಶೇ.60 ಕಡಿಮೆಯಾಗಿದೆ. ಆದರೆ, ಒಮಿಕ್ರೋನ್‌ ಮತ್ತೊಮ್ಮೆ ಜಗತ್ತನ್ನು ಆತಂಕಕ್ಕೆ ದೂಡಿದೆ. ಹೀಗಾಗಿ ಎಲ್ಲರೂ ಮಾಸ್ಕ್‌ ಧರಿಸಬೇಕು ಮತ್ತು ಎರಡೂ ಡೋಸ್‌ ಲಸಿಕೆ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ಮತ್ತೆ 9 ಒಮಿಕ್ರೋನ್‌ ಪ್ರಕರಣ: 32ಕ್ಕೆ ಏರಿಕೆ

ದೇಶದಲ್ಲಿ ಒಮಿಕ್ರೋನ್‌ ರೂಪಾಂತರಿ ಕೊರೋನಾ ವೈರಸ್‌ ಸೋಂಕಿನ 9 ಪ್ರಕರಣಗಳು ಶುಕ್ರವಾರ ಪತ್ತೆಯಾಗಿವೆ. ಗುಜರಾತ್‌ನ ಇಬ್ಬರು ಹಾಗೂ ಮಹಾರಾಷ್ಟ್ರದಲ್ಲಿ ಮೂರೂವರೆ ವರ್ಷ ಮಗು ಸೇರಿ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಮಿಕ್ರೋನ್‌ ಪೀಡಿತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

"

ಕೋವಿಡ್‌ ವೇಳೆ ಶೇ.70ರಷ್ಟು ಮಕ್ಕಳು ಓದಿಗೆ ಗುಡ್‌ಬೈ

ಬೆಳಗ್ಗೆ ಗುಜರಾತ್‌ನಲ್ಲಿ ಹೊಸದಾಗಿ 2 ಒಮಿಕ್ರೋನ್‌ ಪ್ರಕರಣಗಳು ಪತ್ತೆಯಾಗಿವೆ. ಡಿ.4ರಂದು ಜಿಂಬಾಬ್ವೆಯಿಂದ ಅನಿವಾಸಿ ಭಾರತೀಯ ಉದ್ಯಮಿಯೊಬ್ಬ ಜಾಮ್‌ನಗರಕ್ಕೆ ಬಂದಿದ್ದರು. ಅವರಲ್ಲಿ ಒಮಿಕ್ರೋನ್‌ ದೃಢವಾಗಿತ್ತು. ಅವರ ಜತೆಗೆ ಅವರ ಪತ್ನಿ ಹಾಗೂ ಭಾವ ಕೂಡ ಜಿಂಬಾಬ್ವೆಯಿಂದ ಬಂದಿದ್ದು, ಅವರಲ್ಲಿ ಕೊರೋನಾ ದೃಢಪಟ್ಟಿತ್ತು. ಬಳಿಕ ಅವರನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಿದಾಗ ಒಮಿಕ್ರೋನ್‌ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಈ ನಡುವೆ, ಇವರ ಸಂಪರ್ಕಕ್ಕೆ ಬಂದಿದ್ದ ಕನಿಷ್ಠ 10 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದ್ದು, ಟೆಸ್ಟ್‌ಗೆ ಒಳಪಡಿಸಲಾಗಿದೆ.

ಇನ್ನೊಂದೆಡೆ ಮುಂಬೈನ ಧಾರಾವಿ ಪ್ರದೇಶದಲ್ಲಿ ಒಬ್ಬನಲ್ಲಿ ಒಮಿಕ್ರೋನ್‌ ಧೃಡಪಟ್ಟಿದೆ. 49 ವರ್ಷದ ಈತ ಡಿ.4ರಂದು ತಾಂಜೇನಿಯಾದಿಂದ ಬಂದಿದ್ದರು. ಹಾಗೆಯೇ ಬ್ರಿಟನ್‌, ದಕ್ಷಿಣ ಆಫ್ರಿಕಾದ ನೈರೋಬಿಯಿಂದ ಮುಂಬೈಗೆ ಬಂದಿದ್ದ ಇಬ್ಬರಲ್ಲಿ ಒಮಿಕ್ರೋನ್‌ ದೃಢಪಟ್ಟಿದೆ. ಜೊತೆಗೆ ನೈಜೀರಿಯಾ ಮಹಿಳೆಯ ಸಂಪರ್ಕಕ್ಕೆ ಬಂದ ನಾಲ್ವರಲ್ಲಿಯೂ ಒಮಿಕ್ರೋನ್‌ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಒಮಿಕ್ರೋನ್‌ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ಈವರೆಗೆ ಕರ್ನಾಟಕ, ದಿಲ್ಲಿ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಈ ಪ್ರಕರಣ ಕಂಡುಬಂದಿವೆ. ಈ ನಡುವೆ, ಗುರುವಾರವಷ್ಟೇ ಒಮಿಕ್ರೋನ್‌ ಸೋಂಕಿತರಾಗಿದ್ದ ರಾಜಸ್ಥಾನದ 9 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು.

click me!