ನವದೆಹಲಿ: ಸತತ ಚುನಾವಣೆ ಸೋಲುಗಳಿಂದ ಮಂಕಾಗಿರುವ ಕಾಂಗ್ರೆಸ್ಸನ್ನು ಪುನರುತ್ಥಾನಗೊಳಿಸುವ ಗಂಭೀರ ಪ್ರಯತ್ನವೊಂದು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಆರಂಭವಾಗಿದೆ. ಶನಿವಾರ ದೆಹಲಿಯಲ್ಲಿ ಹಿರಿಯ ನಾಯಕರ ಸಭೆಯನ್ನು ಸೋನಿಯಾ ನಡೆಸಿದ್ದು, ಈ ವೇಳೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಚುನಾವಣೆ ಎದುರಿಸುವ ಕುರಿತು ಪ್ರಾತ್ಯಕ್ಷಿಕೆಯೊಂದನ್ನು ನೀಡಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿ ಹೂಡುವ ಬದಲಿಗೆ 370ರಿಂದ 400 ಕ್ಷೇತ್ರಗಳಿಗಷ್ಟೇ ಗಮನಕೇಂದ್ರೀಕರಿಸಬೇಕು. ಪಕ್ಷ ದುರ್ಬಲವಾಗಿರುವೆಡೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಪ್ರಶಾಂತ್ ಕಿಶೋರ್ (Prasanth Kishore) ಹೇಳಿದ್ದಾರೆ. ಅವರ ಈ ಶಿಫಾರಸುಗಳನ್ನು ಪರಿಶೀಲಿಸಿ, ಆ ವಿಚಾರವಾಗಿ ಮುಂದಡಿ ಇಡಲು ಸಣ್ಣ ಸಮಿತಿಯೊಂದನ್ನು ರಚನೆ ಮಾಡಲಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ (KC Vnugopal)ತಿಳಿಸಿದ್ದಾರೆ.
ಮತ್ತೆ ಪ್ರಶಾಂತ್ ಕಿಶೋರ್ ಜತೆ ನಿತೀಶ್ ಭೇಟಿ: ಬಿಜೆಪಿಗೆ ಸಂದೇಶ?
ಇದೇ ವೇಳೆ, ಪಕ್ಷದ ಪರ ಚುನಾವಣಾ ತಂತ್ರಗಾರರಾಗಿ ಕೆಲಸ ಮಾಡುವ ಬದಲಿಗೆ ಕಾಂಗ್ರೆಸ್ ಪಕ್ಷಕ್ಕೆ (Congress Party) ಸೇರ್ಪಡೆಯಾಗುವಂತೆ ಪ್ರಶಾಂತ್ ಕಿಶೋರ್ ಅವರಿಗೆ ನಾಯಕರು ಆಹ್ವಾನ ನೀಡಿದ್ದಾರೆ. ಹೀಗಾಗಿ ಅವರು ಮುಂದೇನು ಮಾಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಇದೇ ವೇಳೆ, ಮಾಸಾಂತ್ಯಕ್ಕೆ ರಾಜಸ್ಥಾನದಲ್ಲಿ ಚಿಂತನ ಶಿಬಿರ ನಡೆಸಿ ಮುಂಬರುವ ಗುಜರಾತ್ (Gujarat) ಹಾಗೂ ಹಿಮಾಚಲಪ್ರದೇಶ (Himachala Pradesh) ವಿಧಾನಸಭೆ ಚುನಾವಣೆಯ (Assembly Election) ತಂತ್ರಗಾರಿಕೆ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ಉದ್ದೇಶಿಸಿದೆ. ಶನಿವಾರದ ಸಭೆಯಲ್ಲೂ ಆ ಎರಡೂ ರಾಜ್ಯಗಳ ಚುನಾವಣೆ ಕುರಿತು ಚರ್ಚೆ ನಡೆದಿದೆ.
Tathagata Roy Tweet: ಬಿಜೆಪಿ ಕಾರ್ಯಕರ್ತರಿಂದ ತೃಣಮೂಲ ಕಾಂಗ್ರೆಸ್ ಪರ ಕೆಲಸ: ತಿಂಗಳಿಗೆ 13,000 ಸಂಬಳ!
ಸೋನಿಯಾ ನಿವಾಸದಲ್ಲಿ ನಡೆದ ಪ್ರಶಾಂತ್ ಕಿಶೋರ್ ಜತೆಗಿನ ಸಭೆಯಲ್ಲಿ ರಾಹುಲ್ ಗಾಂಧಿ (Rahul Gandhi), ಮಲ್ಲಿಕಾರ್ಜುನ ಖರ್ಗೆ(Mallikharjuna Kharge), ಕೆ.ಸಿ. ವೇಣುಗೋಪಾಲ್, ಅಂಬಿಕಾ ಸೋನಿ (Ambika Sony), ಅಜಯ್ ಮಾಕನ್ (Ajaya Maken) ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರೂ ಇದ್ದರು.
2ನೇ ಸುತ್ತಿನ ಸಂಧಾನ:
ಈ ಮೊದಲು ಕಾಂಗ್ರೆಸ್ ಪರ ಪ್ರಶಾಂತ್ ಕಿಶೋರ್ ಅವರು ಚುನಾವಣಾ ತಂತ್ರಗಾರಿಕೆ ಮಾಡಿಕೊಟ್ಟಿದ್ದರಾದರೂ, ಆನಂತರ ಕಾಂಗ್ರೆಸ್ ಜತೆಗಿನ ಅವರ ಸಂಬಂಧ ಹಳಸಿತ್ತು. ಹಲವು ಸಂದರ್ಭದಲ್ಲಿ ಅವರು ರಾಹುಲ್ ಗಾಂಧಿ ವಿರುದ್ಧವೇ ಟೀಕೆ ಮಾಡಿದ್ದರು. ಪ್ರಶಾಂತ್ ಅವರ ಮಾಜಿ ಆಪ್ತನನ್ನು ಚುನಾವಣಾ ತಂತ್ರಗಾರಿಕೆಗೆ ಕಾಂಗ್ರೆಸ್ ಬಳಸಿಕೊಂಡಿತ್ತು. ಇದೀಗ ಕಾಂಗ್ರೆಸ್ ಹಾಗೂ ಪ್ರಶಾಂತ್ ಮತ್ತೆ ಒಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ