ಭಾರತ್‌ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್‌ ಸಂಸದ ಸಂತೋಕ್‌ ಸಿಂಗ್‌ ನಿಧನ!

By Santosh NaikFirst Published Jan 14, 2023, 12:17 PM IST
Highlights

ಜಲಂಧರ್‌ನ ಕಾಂಗ್ರೆಸ್‌ ಸಂಸದ ಸಂತೋಕ್‌ ಸಿಂಗ್‌ ಭಾರತ್‌ ಜೋಡೋ ಪಾದಯಾತ್ರೆಯ ವೇಲೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಯಾತ್ರೆಯ ವೇಳೆ ಕುಸಿದು ಬಿದ್ದ ಅವರನ್ನು ಫಗ್ವಾರದ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾರೆ.
 

ಲೂಧಿಯಾನಾ (ಜ.14): ಭಾರತ್‌ ಜೋಡೋ ಯಾತ್ರೆಯ ವೇಳೆ ಮತ್ತೊಂದು ಸಾವಿನ ಪ್ರಕರಣ ವರದಿಯಾಗಿದೆ. ಪಂಜಾಬ್‌ನ ಕಾಂಗ್ರೆಸ್‌ ಸಂಸದ ಸಂತೋಕ್‌ ಸಿಂಗ್‌ ಚೌಧರಿ ಅವರಿಗೆ ಶನಿವಾರ ಭಾರತ್‌ ಜೋಡೋ ಪಾದಯಾತ್ರೆಯ ವೇಳೆ ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, 76 ವರ್ಷದ ರಾಜಕಾರಣಿ ಚಿಕಿತ್ಸೆ ಫಲಿಸದೇ ಸಾವು ಕಂಡಿದ್ದಾರೆ.ಪಂಜಾಬ್‌ನ ಫಿಲ್ಲೌರ್‌ನಲ್ಲಿ ನಡೆದ ಪಾದಯಾತ್ರೆಯ ವೇಳೆ ಜಲಂಧರ್‌ನ ಪಕ್ಷದ ಸಂಸದ ಸಂತೋಕ್‌ ಸಿಂಗ್ ಚೌಧರಿ ಕುಸಿದು ಬಿದ್ದಿದ್ದಾರೆ. ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಫಗ್ವಾರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವು ಕಂಡಿದ್ದಾರೆ. ಯಾತ್ರೆಯ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿ ಅವರು ಪಾದಯಾತ್ರೆಯನ್ನು ಮಧ್ಯದಲ್ಲಿಯೇ ಬಿಟ್ಟು ಹಿರಿಯ ಕಾಂಗ್ರೆಸ್ ನಾಯಕನನ್ನು ಕರೆದುಕೊಂಡು ಹೋಗಿದ್ದ ಆಸ್ಪತ್ರೆಗೆ ಧಾವಿಸಿದರು ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ. ರಾಹುಲ್‌ ಗಾಂಧಿ ಆಸ್ಪತ್ರೆಗೆ ತೆರಳಿದ ಸಮಯದಲ್ಲಿಯೇ ಸಂತೋಕ್‌ ಸಿಂಗ್‌ ಸಾವು ಕಂಡಿರುವ ಸುದ್ದಿ ಖಚಿತಗೊಂಡಿತ್ತು. ರಾಹುಲ್‌ ಗಾಂಧಿ ಜಲಂಧರ್‌ನಲ್ಲಿರುವ ಚೌಧರಿ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನವನ್ನೂ ಹೇಳಿದ್ದಾರೆ.


ರಾಹುಲ್‌ ಗಾಧಿ ಶನಿವಾರ ಬೆಳಗ್ಗೆ ಭಾರತ್‌ ಜೋಡೋ ಯಾತ್ರೆಯ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಸಂಸದ ಸಂತೋಕ್‌ ಸಿಂಗ್‌, ಪಕ್ಷದ ಇತರ ನಾಯಕರೊಂದಿಗೆ ರಾಹುಲ್‌ ಗಾಂಧಿಯ ಜೊತೆ ಹೆಜ್ಜೆ ಹಾಕಿದ್ದನ್ನು ಕಾಣಬಹುದಾಗಿದೆ.  ಭಾರತ್‌ ಜೋಡೋ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್‌ ತಿಳಿಸಿದ್ದಾರೆ. ಅದರೊಂದಿಗೆ ಸಂತೋಕ್‌ ಸಿಂಗ್‌ ಚೌಧರಿ ಅವರ ಅಂತ್ಯಸಂಸ್ಕಾರ ಭಾನುವಾರ ಮುಂಜಾನೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.



ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಸಂತೋಕ್‌ ಸಿಂಗ್‌ ಚೌಧರಿ ಅವರ ಸಾವಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅವರ ಸಾವು ಪಕ್ಷಕ್ಕೆ ಹಾಗೂ ಸಂಘಟನೆ ದೊಡ್ಡ ಮಟ್ಟದ ಪೆಟ್ಟು ನೀಡಿದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 'ನಮ್ಮ ಸಂಸದರಾದ ಸಂತೋಕ್‌ ಸಿಂಗ್ ಚೌಧರಿ ಅವರ ಅಕಾಲಿಕ ನಿಧನದ ಬಗ್ಗೆ ತಿಳಿದು ತೀವ್ರ ಆಘಾತ ಮತ್ತು ದುಃಖವಾಗಿದೆ. ಅವರ ಅಗಲಿಕೆ ಪಕ್ಷ ಮತ್ತು ಸಂಘಟನೆಗೆ ದೊಡ್ಡ ಪೆಟ್ಟು ನೀಡಿದೆ. ಈ ದುಃಖದ ಸಮಯದಲ್ಲಿ, ನನ್ನ ಹೃದಯವು ಅವರ ಕುಟುಂಬ, ಸ್ನೇಹಿತರು ಮತ್ತು ಅನುಯಾಯಿಗಳಿಗೆ ದುಃಖಿಸುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಟ್ವೀಟ್ ಮಾಡಿದ್ದಾರೆ.

Accident In Bharat Jodo Yatra: ಭಾರತ್‌ ಜೋಡೋ ಯಾತ್ರೆಯಲ್ಲಿ ಅಪಘಾತ, ಕಾಂಗ್ರೆಸ್‌ ಕಾರ್ಯಕರ್ತ ಸಾವು!

ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ (Jairam Ramesh) "ಜಲಂಧರ್‌ನ ಕಾಂಗ್ರೆಸ್ ಸಂಸದ 76 ವರ್ಷ ವಯಸ್ಸಿನ ಸಂತೋಕ್‌ ಸಿಂಗ್ ಚೌಧರಿ ಅವರು ಇಂದು ಬೆಳಿಗ್ಗೆ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಸಂದರ್ಭದಲ್ಲಿ ಹಠಾತ್ ಹೃದಯ ಸ್ತಂಭನದಿಂದ ನಿಧನರಾದರು. ಅವರ ಕುಟುಂಬಕ್ಕೆ ನಾವು ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳಿವೆ. ಶೀಘ್ರದಲ್ಲೇ ಯಾತ್ರೆಯ ವೇಳಾಪಟ್ಟಿ ಹಂಚಿಕೊಳ್ಳಲಿದ್ದೇವೆ' ಎಂದು ಟ್ವೀಟ್‌ ಮಾಡಿದ್ದಾರೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಸಂತಾಪ ಸೂಚಿಸಿದ್ದಾರೆ.

ರಾಹುಲ್‌ ಯಾತ್ರೆ ವೇಳೆ ವಿದ್ಯುತ್‌ ತಗುಲಿ ನಾಲ್ವರಿಗೆ ಗಾಯ: ಆಸ್ಪತ್ರೆಗೆ ದಾಖಲು

ಸಂತೋಕ್‌ ಸಿಂಗ್‌ ಚೌಧರಿ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರೆ, 2019ರಲ್ಲಿ 2ನೇ ಬಾರಿ ಗೆಲುವು ಕಂಡಿದ್ದರು. ಅವರ ಪುತ್ರ ವಿಕ್ರಮ್‌ಜೀತ್‌ ಸಿಂಗ್‌ ಚೌಧರಿ  ಪಂಜಾಬ್‌ನ ಫಿಲ್ಲೌರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.

click me!