ಗುಜರಾತ್‌ನಲ್ಲಿ ಕಾಂಗ್ರೆಸ್ ಸೋಲು: ಕೈ ಅಧ್ಯಕ್ಷ ಆಕಾಂಕ್ಷಿಯಾಗಿದ್ದ ತರೂರ್ ಏನ್ ಹೇಳಿದ್ರು ನೋಡಿ

By Anusha KbFirst Published Dec 8, 2022, 4:45 PM IST
Highlights

ನಿನ್ನೆಯ ದೆಹಲಿ ಮುನ್ಸಿಪಲ್ ಚುನಾವಣೆ ಹಾಗೂ ಇಂದು ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಸಂಸದ, ಶಶಿ ತರೂರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಹೀಗೆ...

ನವದೆಹಲಿ: ನಿನ್ನೆಯ ದೆಹಲಿ ಮುನ್ಸಿಪಲ್ ಚುನಾವಣೆ ಹಾಗೂ ಇಂದು ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಸಂಸದ, ಶಶಿ ತರೂರ್ ಅವರನ್ನು ಮಾಧ್ಯಮಗಳು ಪ್ರತ್ರಿಕ್ರಿಯೆ ಕೇಳಿದ್ದು ಪ್ರತಿಕ್ರಿಯಿಸಿದ್ದ ಅವರು, ನಾನು ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೂ ಅಲ್ಲ. ಹಾಗೆಯೇ ಪ್ರಚಾರ ಮಾಡಬೇಕೆಂದು ನಿರೀಕ್ಷಿಸಿದ್ದ ಪಟ್ಟಿಯಲ್ಲೂ ನಾನಿರಲಿಲ್ಲ. ಹೀಗಾಗಿ ಸ್ಥಳೀಯವಾಗಿ ನಾನು ಅಲ್ಲಿ ಇಲ್ಲದೇ ಇದ್ದಿದ್ದರಿಂದ ಈ ಪ್ರಶ್ನೆಗೆ ಉತ್ತರಿಸುವುದು ಬಲು ಕಷ್ಟದ ಕೆಲಸ ಎಂದು ಹೇಳಿದ್ದಾರೆ. 

ಸೋನಿಯಾ ಗಾಂಧಿ ಹಾಗೂ ಕೆಲ ಕಾಂಗ್ರೆಸ್ ಹಿರಿಯ ತಲೆಗಳ ವಿರೋಧದ ನಡುವೆಯೂ ಶಶಿ ತರೂರ್ ಅವರು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ವಿರುದ್ಧ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ ನಂತರ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಪ್ರಚಾರ ಮಾಡಬೇಕಿದ್ದ ಕಾಂಗ್ರೆಸ್ ನಾಯಕರ ಪಟ್ಟಿಯಿಂದ ಅವರನ್ನು ಕೈ ಬಿಡಲಾಗಿತ್ತು. ಮಲ್ಲಿಕಾರ್ಜುನ್ ಖರ್ಗೆ ಅವರ ಅವಿರೋಧ ಆಯ್ಕೆಯನ್ನು ಬಯಸಿದ್ದ ಕಾಂಗ್ರೆಸ್ ನಾಯಕರಿಗೆ ಶಶಿ ತರೂರ್ ಸ್ಪರ್ಧೆ ಮುಜುಗರಕ್ಕೆ ಕಾರಣವಾಗಿತ್ತು.

Gujarat Election Result 2022: ಡಿ.12ಕ್ಕೆ ಭೂಪೇಂದ್ರ ಪಟೇಲ್‌ ಸಿಎಂ ಆಗಿ ಪ್ರಮಾಣವಚನ


ಸಂಸತ್ ಎದುರು ಮಾಧ್ಯಮಗಳ ಜೊತೆ ಮಾತನಾಡಿದ ತರೂರ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದ್ದು ಇದು ನಮಗೆ ಸಹಕಾರಿಯಾಯ್ತು, ಆದರೆ ಗುಜರಾತ್‌ನಲ್ಲಿ(Gujarat) ಅದು ಕೆಲಸ ಮಾಡಲಿಲ್ಲ ಎಂದರು. ಈ ಸೋಲನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಹಿಂಜರಿಯುತ್ತಿರುವುದನ್ನು ಒಪ್ಪಿಕೊಂಡ ಅವರು ಕೆಲವು ಕ್ಷೇತ್ರಗಳಲ್ಲಿ ಎಎಪಿಯ ಸ್ಪರ್ಧೆಯೂ ನಮ್ಮ ಮತಗಳನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಯ್ತು ಎಂಬುದನ್ನು ಹೇಳಿದ್ದಾರೆ. ಅರವಿಂದ್ ಕೇಜ್ರಿವಾಲ್ ( Arvind Kejriwal) ಅವರ ಎಎಪಿಯೂ ಗುಜರಾತ್‌ನಲ್ಲಿ ಆರು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಮೂಲಕ ಖಾತೆ ತೆರೆದಿದೆ. ಆದರೆ ಅಲ್ಲಿ ಎಎಪಿ ನಿರೀಕ್ಷೆ ಮಾಡಿದ್ದಕ್ಕಿಂತ ಕಡಿಮೆ ಸಾಧನೆಯಾಗಿದೆ. ಆದರೂ ಕಾಂಗ್ರೆಸ್ ಅಥವಾ ಬಿಜೆಪಿ ಎರಡೇ ಆಯ್ಕೆ ಇದ್ದಂತಹ ಗುಜರಾತ್‌ನಲ್ಲಿ ಮತಗಳ ಧ್ರುವೀಕರಣಕ್ಕೆ ಎಎಪಿ ಕಾರಣವಾಗಿದೆ ಎಂಬುದನ್ನು ಅವರು ಹೇಳಿದ್ದಾರೆ. 

Assembly election: ನಾವ್‌ ಸುಮ್ನೆ ಇದ್ರೂ ಕರ್ನಾಟಕದಲ್ಲಿ ಗೆಲ್ಲುತ್ತೇವೆ: ಸಿದ್ಧರಾಮಯ್ಯ

ಇತ್ತ ಗುಜರಾತ್‌ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ. 182 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 156 ಸೀಟುಗಳನ್ನು ಬಾಚಿಕೊಂಡಿದೆ. ಇದು ಕೇವಲ ಪಕ್ಷದ ಪಾಲಿಗೆ ಮಾತ್ರ ದಾಖಲೆಯಲ್ಲ. ರಾಜ್ಯಕ್ಕೂ ಇದೂ ದಾಖಲೆಯಾಗಿದೆ. 1985ರಲ್ಲಿ ಇಲ್ಲಿ ಕಾಂಗ್ರೆಸ್ 149 ಸೀಟುಗಳನ್ನು ಗೆದ್ದು ಬೀಗಿತ್ತು. ಬಿಜೆಪಿ ಗುಜರಾತ್‌ನಲ್ಲಿ 7ನೇ ಬಾರಿಗೆ ಸತತ ಗೆಲುವು ದಾಖಲಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಚುನಾವಣಾ ಪೂರ್ವ 30ಕ್ಕೂ ಹೆಚ್ಚು ಸಮಾವೇಶಗಳನ್ನು ಮಾಡುವ ಮೂಲಕ ಪ್ರಧಾನಿ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. 

ಇತ್ತ ಹಿಮಾಚಲದಲ್ಲಿ (Himachal Pradesh) ಮತ ಎಣಿಕೆಯ ವೇಳೆ ಆರಂಭದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಒಮ್ಮೆ ಬಿಜೆಪಿ ಮತ್ತೊಮ್ಮೆ ಕಾಂಗ್ರೆಸ್ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಎಣಿಕೆ ವೇಳೆ ಹಾವು ಏಣಿಯಾಟವಾಡಿದ್ದವು. ಆದರೆ ಕೊನೆಗೆ 68 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 35 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಜಯ ಪತಾಕೆ ಹಾರಿಸಿತು. ಆಕ್ಟೋಬರ್‌ನಲ್ಲಿ ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ನಂತರ ಪಕ್ಷ ಹಾಗೂ ಸಂಸದ ಶಶಿ ತರೂರ್ ನಡುವಿನ ಸಂಬಂಧ ಹಳಸಿದೆ. ತಿರುವನಂತಪುರದಿಂದ (Thiruvanvathapuram) ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿರುವ ತರೂರ್ ಇತ್ತೀಚೆಗೆ ತಮ್ಮ ಕೇರಳ ಪ್ರವಾಸದ ವೇಳೆ ಸ್ವಪಕ್ಷೀಯ ನಾಯಕರೇ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. 


Gujarat Election Result 2022: ಮೋದಿ-ಅಮಿತ್‌ ಶಾ ತವರಲ್ಲಿ ಅರಳಿದ ಕಮಲ, ಆರೆಸ್ಸೆಸ್‌ ತಂತ್ರಗಾರಿಕೆ ಸಿಕ್ಕ ಫಲ!

click me!