ಕಾಲುವೆಗೆ ಬಿದ್ದ ಆನೆಮರಿ ರಕ್ಷಿಸಿದ ಅರಣ್ಯ ಇಲಾಖೆಗೆ ಸೊಂಡಿಲೆತ್ತಿ ನಮಸ್ಕರಿಸಿದ ತಾಯಾನೆ

By Anusha KbFirst Published Feb 26, 2024, 12:31 PM IST
Highlights

ಕಾಲುವೆಗೆ ಬಿದ್ದ ತನ್ನ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ ಹಾಗೂ ನಾಗರಿಕರಿಗೆ ತಾಯಿ ಆನೆಯೊಂದು ಸೊಂಡಿಲೆತ್ತಿ ನಮಸ್ಕರಿಸಿದ ಅಚ್ಚರಿಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 

ಕೊಯಂಬತ್ತೂರು: ಕಾಲುವೆಗೆ ಬಿದ್ದ ತನ್ನ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ ಹಾಗೂ ನಾಗರಿಕರಿಗೆ ತಾಯಿ ಆನೆಯೊಂದು ಸೊಂಡಿಲೆತ್ತಿ ನಮಸ್ಕರಿಸಿದ ಅಚ್ಚರಿಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಐಎಎಸ್ ಅಧಿಕಾರಿ ಹಾಗೂ ತಮಿಳುನಾಡಿನ ಪರಿಸರ ಹಾಗೂ ಹವಾಮಾನ ಬದಲಾವಣೆ ಹಾಗೂ ಅರಣ್ಯದ ಮುಖ್ಯ ಕಾರ್ಯದರ್ಶಿಯಾಗಿರುವ ಸುಪ್ರಿಯಾ ಸಾಹು ಅವರು ಈ ಮನಸೆಳೆಯುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿ ಈ ಮನಮುಟ್ಟುವ ಘಟನೆ ನಡೆದಿದೆ. 

ತಾಯಿಯೊಂದಿಗೆ ಸುತ್ತಾಡುತ್ತಿದ್ದ ಪುಟಾಣಿ ಮರಿಯಾನೆಯೊಂದು  ಪೊಲ್ಲಾಚಿಯಲ್ಲಿರುವ ಕಾಲುವೆಗೆ ಬಿದ್ದಿದೆ.  ಕಾಲುವೆಗೆ ಬಿದ್ದ ಮರಿಯನ್ನು ರಕ್ಷಿಸಲು ತಾಯಿ ಇನ್ನಿಲ್ಲದ ಪ್ರಯತ್ನ ಮಾಡಿದೆ. ಆದರೆ ನೀರಿನ ಹರಿವು ಬಲವಾಗಿದ್ದ ಕಾರಣ ಪುಟಾಣಿ ಮರಿಗೆ ಏನು ಮಾಡಿದರೂ ಕಾಲುವೆಯಿಂದ ಮೇಲೆ ಬರುವುದಕ್ಕೆ ಸಾಧ್ಯವಾಗಿಲ್ಲ, ಈ ಹಿನ್ನೆಲೆಯಲ್ಲಿ ತಾಯಿ ದಿಕ್ಕು ತೋಚದೆ ಅಲೆದಾಡಿದೆ. ಇತ್ತ ಈ ವಿಚಾರ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿದಿದ್ದು, ಕಾಲುವೆಯಿಂದ ಆನೆಮರಿಯನ್ನು ರಕ್ಷಿಸಲು ಸಿಬ್ಬಂದಿ ಸರ್ವಪ್ರಯತ್ನ ಮಾಡಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಕಾಲುವೆಗೆ ಇಳಿದ ಸಿಬ್ಬಂದಿ ಆನೆ ಮರಿಯನ್ನು ನಿಧನವಾಗಿ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಜೊತೆಗೆ ಮರಿಯನ್ನು ತಾಯಿಯೊಂದಿಗೆ ಒಟ್ಟು ಗೂಡಿಸಿದ್ದಾರೆ. ಇತ್ತ ಆ ಸ್ಥಳದಿಂದ ಮರಿಯೊಂದಿಗೆ ತೆರಳುವ ಮುನ್ನ ತಾಯಾನೆ ಕಾಲುವೆಯಿಂದ ತನ್ನ ಮರಿಯನ್ನು ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಸೊಂಡಿಲೆತ್ತಿ ನಮಸ್ಕರಿಸುವ ಮೂಲಕ ಕೃತಜ್ಞತೆ ಸಲ್ಲಿಸಿದೆ. 

ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು: ತಪ್ಪಿಸಿಕೊಂಡ ಬಳಿಕ ಮತ್ತೆ ತಾಯಿ ಮಡಿಲು ಸೇರಿ ಸುಖನಿದ್ದೆಗೆ ಜಾರಿದ ಮರಿಯಾನೆ

ಈ ಭಾವುಕ ವೀಡಿಯೋಗಳನ್ನು ಐಎಫ್‌ಎಸ್ ಅಧಿಕಾರಿ ಪೋಸ್ಟ್ ಮಾಡಿದ್ದು,  ಜೊತೆಗೆ ಭಾವುಕ ಬರಹವನ್ನು ಬರೆದುಕೊಂಡಿದ್ದಾರೆ. ತಾಯಿ ಆನೆ ತನ್ನ ತುಂಬಾ ಎಳೆಯ ಮರಿಯನ್ನು ರಕ್ಷಿಸಿ ತನ್ನೊಂದಿಗೆ ಮತ್ತೆ ಸೇರಿಸಿದ  ಅರಣ್ಯ ಇಲಾಖೆ ಸಿಬ್ಬಂದಿಯನ್ನು ನೋಡಿ ಸೊಂಡಿಲೆತ್ತಿ ಕೃತಜ್ಞತೆ ಸಲ್ಲಿಸಿದ ದೃಶ್ಯ ನೋಡಿ ನಮ್ಮ ಹೃದಯ ತುಂಬಿ ಬಂತು. ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿರುವ ಕಾಲುವೆಗೆ ಆನೆ ಮರಿ ಕಾಲು ಜಾರಿ ಬಿದ್ದು ಬಿಟ್ಟಿತ್ತು. ಈ ವೇಳೆ ಮರಿಯನ್ನು ರಕ್ಷಿಸಲು ತಾಯಿ ತನ್ನೆಲ್ಲಾ ಪ್ರಯತ್ನ ಮಾಡಿತ್ತು, ಆದರೆ ನೀರಿನ ಹರಿವು ರಭಸವಾಗಿದ್ದರಿಂದ ತಾಯಿ ಆನೆಗೆ ತನ್ನ ಕಂದನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ, 

ಆದರೆ ಈ ಆನೆ ಮರಿಯನ್ನು ರಕ್ಷಿಸುವ ಹಾಗೂ ತಾಯಿಯೊಂದಿಗೆ ಸೇರಿಸುವ ಕಾರ್ಯಾಚರಣೆಯು ಅಪಾಯಗಳಿಂದ ಕೂಡಿದ್ದರೂ ತಾಯಿ ಮರಿಯ ಯಶಸ್ವಿ ಪುನರ್ಮಿಲನಕ್ಕೆ ಕಾರಣವಾದ ಅವರ ಅಸಾಧಾರಣ ಪ್ರಯತ್ನಗಳಿಗೆ ತಂಡಕ್ಕೆ ಅಭಿನಂದನೆಗಳು. ಎಫ್‌ಡಿ ರಾಮಸುಬ್ರಮಣಿಯನ್ , ಡಿಡಿ ಬಿ.ತೇಜಾ, ಪುಗಲೆಂಥಿ ಎಫ್‌ಆರ್‌ಒ, ಫಾರೆಸ್ಟರ್‌ ತಿಲಕರ್, ಫಾರೆಸ್ಟ್ ಗಾರ್ಡ್ ಸರವಣನ್, ವೆಲ್ಲಿಗಿರಿ, ವಾಚರ್ ಮುರಳಿ, ರಾಸು, ಬಾಲು, ನಾಗರಾಜ್, ಮಹೇಶ್, ಚಿನ್ನಾಥನ್ ಮುಂತಾದವರಿಗೆ ತಮ್ಮ ಅದ್ಭುತ ಕಾರ್ಯಕ್ಕಾಗಿ ಧನ್ಯವಾದಗಳು ಎಂದು ಸುಪ್ರಿಯಾ ಸಾಹು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಅಮ್ಮನಿಗಾಗಿ ಅಲೆದಾಡುತ್ತಿದ್ದ ಪುಟಾಣಿ ಮರಿಯಾನೆ: ಮತ್ತೆ ತಾಯಿ ಮಡಿಲು ಸೇರಿಸಿದ ಅರಣ್ಯ ಸಿಬ್ಬಂದಿ

 

Our hearts are melting with joy to see the Elephant mother raising her trunk to thank our foresters after they rescued and united a very young baby elephant with the mother. The baby had slipped and fallen into a canal in Pollachi in Coimbatore District in Tamil Nadu. The Mother… pic.twitter.com/wjJjl0b2le

— Supriya Sahu IAS (@supriyasahuias)

 

click me!