
ದೆಹಲಿ: ದೇಶದಲ್ಲಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಇತ್ತೀಚೆಗೆ ನಡೆದ ನೀಟ್ ಯುಜಿ-2026 ಮೊದಲ ಪರೀಕ್ಷೆಯಲ್ಲಿನ ಪ್ರಶ್ನೆ ಪತ್ರಿಕೆಸೋರಿಕೆ ಹಗರಣ ವಿಚಾರಗಳನ್ನು ವಿರೋಧಿಸಿ, ಸತತ 21 ದಿನಗಳಿಂದ ಉಪವಾಸ ನಿರತರಾಗಿದ್ದ ಶಿಕ್ಷಣ ಪರಿವರ್ತಕ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ಹೀಗೇ ಮುಂದುವರೆದರೆ ಅವರ ಪ್ರಾಣಕ್ಕೆ ಅಪಾಯ ಎನ್ನುವ ಕಾರಣಕ್ಕೆ, ಅವರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ.
ಉಪವಾಸದಿಂದ ಸೋನಮ್ ವಾಂಗ್ಚುಕ್ ಅವರ ದೇಹ ತೂಕ ಆರೋಗ್ಯ 9ಕೆ.ಜಿಯಷ್ಟಿ ಇಳಿದಿದ್ದು, ಉಸಿರಾಟ ತೊಂದರೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿದು ಆರೋಗ್ಯ ಕ್ಷೀಣವಾಗಿದೆ. ವೈದ್ಯಕೀಯ ಸೇವೆ ನೀಡಿ ಜೀವ ಉಳಿಸಲು ಹಸ್ತಕ್ಷೇಪ ಮಾಡಬೇಕು ಎಂದು ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಹಾಗೂ ತಜ್ಞ ವೈದ್ಯರ ಸಲಹೆಯಂತೆ ಅವರನ್ನು ಶಿಫ್ಟ್ ಮಾಡಲಾಗಿದೆ.
ಇದರ ಬೆನ್ನಲ್ಲೇ, ಈ ಹೋರಾಟಕ್ಕೆ ಕಾರಣೀಕರ್ತರಾಗಿರುವ, ಪ್ರತಿಭಟನೆಯ ನೇತೃತ್ವ ವಹಿಸಿರುವ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೋನಮ್ ವಾಂಗ್ಚುಕ್ ಅವರು ಉಪವಾಸ ಕೈಗೊಂಡಿರುವ ಜಾಗದಲ್ಲಿಯೇ ತಾವು ಉಪವಾಸ ಮುಂದುವರೆಸುವುದಾಗಿ ಹೇಳಿದ್ದಾರೆ. ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿರುವ ಅಭಿಜೀತ್ ಅವರು, ಇದರ ಜೊತೆಗೆ, ನಾಡಿದ್ದು ಅಂದರೆ ಜುಲೈ 20ರಂದು ನಿಗದಿಯಂತೆ ಸಂಸತ್ ಚಲೋ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ನಿಂದ ಪ್ರತಿಭಟನೆ ನಡೆಸುತ್ತಿದೆ. ಸೋನಮ್ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ ಬೆನ್ನಲ್ಲೇ, ಈ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿರುವ CJP ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಈ ಕುರಿತು ಘೋಷಣೆ ಹೊರಡಿಸಿದ್ದು, "ತಮ್ಮ ನೇತೃತ್ವದ ಈ ಹೋರಾಟ ಮುಂದುವರೆಯಲಿದ್ದು, ಇಂದಿನಿಂದ (ಜುಲೈ18 ಶನಿವಾರ) ತಾವು ಅನಿರ್ದಿಷ್ಟಾವಧಿಗೆ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದು, ಜುಲೈ 20 ರಂದು ಸಂಸತ್ತಿಗೆ ನಡೆಸಲು ಉದ್ದೇಶಿಸಿರುವ ಮೆರವಣಿಗೆ ನಿಗದಿಯಂತೆ ನಡೆಯಲಿದೆ. ಅಲ್ಲದೆ, ಈ ಪ್ರತಿಭಟನೆಗಳೊಂದಿಗೆ ತಮ್ಮ ಉಪವಾಸವೂ ಮುಂದುವರೆಯಲಿದೆ" ಎಂದು ಎಕ್ಸ್ನಲ್ಲಿ CJP ತಿಳಿಸಿದೆ.
ನಾನು ಇಂದಿನಿಂದ ನನ್ನ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುತ್ತಿದ್ದೇನೆ. ಯಾರೂ ಹಿಂದೆ ಸರಿಯಬೇಡಿ ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಈ ಚಳವಳಿ ದೊಡ್ಡದಾಗಿ ಬೆಳೆಯುತ್ತದೆ. ಅವರು ಗಂಭೀರ ತಪ್ಪು ಮಾಡಿದ್ದಾರೆ. ಎಲ್ಲರೂ ಜಂತರ್ ಮಂತರ್ಗೆ ಬರಬೇಕೆಂದು ನಾನು ಒತ್ತಾಯಿಸುತ್ತೇನೆ; ನಮ್ಮ ಚಳವಳಿ ಇಲ್ಲಿಂದ ಮುಂದುವರಿಯುತ್ತದೆ ಮತ್ತು ಜುಲೈ 20 ರಂದು ನಿಗದಿಯಾಗಿರುವ ನಮ್ಮ ಮೆರವಣಿಗೆಯೊಂದಿಗೆ ನಾವು ಮುಂದುವರಿಯುತ್ತೇವೆ" ಎಂದು ಅಭಿಜೀತ್ ದೀಪ್ಕೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ