
ನವದೆಹಲಿ (ಫೆ.07): ಛತ್ತೀಸ್ಗಢದಲ್ಲಿ ಉದ್ಯಮಿಯೊಬ್ಬರು ಮಾಡಿದ ಆರೋಪದ ಹಿನ್ನೆಲೆಯಲ್ಲಿ, ಡಿವೈಎಸ್ಪಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ಉದ್ಯಮಿ ದೂರು ನೀಡಿದ್ದರು. ಪ್ರಾಥಮಿಕ ತನಿಖೆಯ ನಂತರ, ಪೊಲೀಸ್ ಅಧಿಕಾರಿ ಕಲ್ಪನಾ ವರ್ಮಾ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಡಿಸೆಂಬರ್ 16 ರಂದು, ಉದ್ಯಮಿ ದೀಪಕ್ ಟೋಂಡನ್ ಅವರು ದಂತೇವಾಡ ಡಿವೈಎಸ್ಪಿ ಕಲ್ಪನಾ ವರ್ಮಾ ವಿರುದ್ಧ ಛತ್ತೀಸ್ಗಢ ಪೊಲೀಸ್ ಮಹಾನಿರ್ದೇಶಕ ಅರುಣ್ ದೇವ್ ಗೌತಮ್ ಅವರಿಗೆ ಲಿಖಿತ ದೂರು ನೀಡಿದ್ದರು. ಡಿವೈಎಸ್ಪಿ ವರ್ಮಾ, ಅವರ ತಂದೆ ಮತ್ತು ಸಹೋದರ ತಮಗೆ ಐದು ವರ್ಷಗಳಿಂದ ಪರಿಚಯ. ಡಿವೈಎಸ್ಪಿ ತಮ್ಮ ಪ್ರಭಾವ ಬಳಸಿ ತಮಗೆ 2ಕೋಟಿ ರೂಪಾಯಿ ಆರ್ಥಿಕ ನಷ್ಟ ಮಾಡಿದ್ದಾರೆ ಎಂದು ಟೋಂಡನ್ ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನ ನಂತರ ತನಿಖೆ ಆರಂಭಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು. ರಾಜ್ಯದ ಹಿರಿಯ ಪೊಲಿಸ್ ಅಧಿಕಾರಿಯಾಗಿ ಅವರ ನಡವಳಿಕೆ ನಾಗರಿಕ ಸೇವೆಗೆ ಸರಿಹೊಂದುವಂತಿಲ್ಲ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ದಂತೇವಾಡ ಜಿಲ್ಲೆಯ ಡಿವೈಎಸ್ಪಿ ಕಲ್ಪನಾ ವರ್ಮಾ ವಿರುದ್ಧದ ದೂರಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲಾಗಿದೆ.
ಈ ವರದಿಯಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿವೆ. ಹಣಕಾಸು ವ್ಯವಹಾರ, ತನಿಖೆ ವೇಳೆ ನೀಡಿದ ಹೇಳಿಕೆಗೂ ವಾಟ್ಸಾಪ್ ಚಾಟ್ಗೂ ಇರುವ ವ್ಯತ್ಯಾಸ, ಕರ್ತವ್ಯದಲ್ಲಿದ್ದಾಗ ಅಕ್ರಮವಾಗಿ ಹಣ ಗಳಿಸಿದ್ದು, ಹುದ್ದೆ ದುರ್ಬಳಕೆ ಮತ್ತು ಆದಾಯ ಮೀರಿ ಆಸ್ತಿ ಗಳಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅಮಾನತು ಆದೇಶದಲ್ಲಿ ಹೇಳಲಾಗಿದೆ.
ಅಮಾನತು ಅವಧಿಯಲ್ಲಿ, ನವಾ ರಾಯ್ಪುರದ ಅಟಲ್ ನಗರದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯೇ ಅವರ ಹೆಡ್ಕ್ವಾರ್ಟರ್ಸ್ ಆಗಿರುತ್ತದೆ. ಸಸ್ಪೆಂಡ್ ಆಗಿರುವ ಸಮಯದಲ್ಲಿ ನಿಯಮಗಳ ಪ್ರಕಾರ ಅವರಿಗೆ ಭತ್ಯೆ ಸಿಗಲಿದೆ ಎಂದು ಸಹ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ