ನವದೆಹಲಿ: ಅಳಿದು ಹೋದ/ಅಳಿವಿನ ಅಂಚಿನ ಪ್ರಾಣಿ ಪುನರುತ್ಥಾನ ಯೋಜನೆಯ ಅಂಗವಾಗಿ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ವಿಶೇಷ ಕಾರ್ಗೋ ವಿಮಾನದಲ್ಲಿ ಭಾರತಕ್ಕೆ ಕರೆತರಲಾಯಿತು. ಮಧ್ಯಪ್ರದೇಶದ ಗ್ವಾಲಿಯರ್ ಏರ್ಪೋರ್ಟ್ನಲ್ಲಿ ಚಿರತೆಗಳಿದ್ದ ವಿಶೇಷ ವಿಮಾನ ಲ್ಯಾಂಡ್ ಆಗಿದೆ. ಈ ಚೀತಾಗಳನ್ನು ನಂತರ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಡಲಾಗುತ್ತಿದೆ. ತಜ್ಞರ ಪ್ರಕಾರ ‘ಚೀತಾ’ ಪದವು ಸಂಸ್ಕೃತದ ‘ಚಿತ್ರಕಾ’ ಎಂಬ ಪದದಿಂದ ಬಂದಿದೆ. ಇದರ ಅರ್ಥ ‘ಚುಕ್ಕೆಗಳಿರುವಂತಹದ್ದು’ ಎಂದಾಗಿದೆ. ಚೀತಾ, ಚಿರತೆ, ಜಾಗ್ವಾರ್... ಇವು ಮೇಲ್ನೋಟಕ್ಕೆ ನೋಡಲು ಒಂದೇ ಎನ್ನಿಸಿದರೂ ಬೇರೆ ಬೇರೆ ಪ್ರಾಣಿಗಳು. ಜಾಗ್ವಾರ್, ಚೀತಾಗೆ ಹೋಲಿಸಿದರೆ ಚೀತಾ ಸಪೂರವಾಗಿದೆ. ಚೀತಾ ಮುಖದ ಮೇಲೆ 2 ಗೆರೆ ಇರುತ್ತವೆ ಹಾಗೂ ಚುಕ್ಕೆ ಕಮ್ಮಿ ಇರುತ್ತವೆ. ಚಿರತೆ ಮುಖದ ಮೇಲೆ ಗೆರೆ ಇರಲ್ಲ. ಚುಕ್ಕೆಗಳಲ್ಲೂ ವ್ಯತ್ಯಾಸವಿದೆ. ಚೀತಾಗಿಂತ ಚಿರತೆ ಬಲಿಷ್ಠ ಎನ್ನಲಾಗಿದೆ.
ಎಲ್ಲಿಂದ ಚೀತಾ ಆಗಮನ?
ನಮೀಬಿಯಾ ದೇಶದಿಂದ 8 ಚೀತಾ ತರಿಸಿಕೊಳ್ಳಲಾಗುತ್ತಿದೆ. ಇದರಲ್ಲಿ 5 ಹೆಣ್ಣು, 3 ಗಂಡು. ಇವುಗಳಲ್ಲಿ ಜೋಡಿಯಲ್ಲೇ ಬೇಟೆಯಾಡುವ 2 ಗಂಡು ಸಹೋದರ ಚೀತಾಗಳು ಹಾಗೂ ಇತ್ತೀಚಿನ ಕಾಡ್ಗಿಚ್ಚಿನಲ್ಲಿ ಸಂರಕ್ಷಿಸಲ್ಪಟ್ಟ ಹೆಣ್ಣು ಚೀತಾ ಮರಿ ಕೂಡಾ ಇವೆ.
ಕುನೋ ಅರಣ್ಯಕ್ಕೆ ಏಕೆ?
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಭೇದ ಎನಿಸಿದ ಏಷಿಯಾಟಿಕ್ ಸಿಂಹಗಳಿದ್ದು(Asiatic lions), ಅವುಗಳ ವಾಸಕ್ಕೆ ಅನುಕೂಲಕರ ಪರಿಸರವಿದೆ. ಇದು ಚೀತಾ ವಾಸಕ್ಕೂ ಯೋಗ್ಯವೆನಿಸಿದ ಕಾರಣ ಇಲ್ಲಿಯೇ ಚೀತಾಗಳನ್ನು ಇರಿಸಲಾಗುವುದು. ಚೀತಾಗಳ ಬೇಟೆಗಾಗಿ ಚಿಂಕಾರ, ಜಿಂಕೆ ಹಾಗೂ ಕೃಷ್ಣಮೃಗಗಳು ಇಲ್ಲಿ ವ್ಯಾಪಕ ಸಂಖ್ಯೆಯಲ್ಲಿ ಇವೆ.
Project Cheetah: ವೈಲ್ಡ್ಲೈಫ್ ತಜ್ಞರು ಕುತೂಹಲದಿಂದ ನೋಡುತ್ತಿರುವ ಪ್ರಯೋಗ
ಭಾರತದಲ್ಲಿತ್ತು ಸಾವಿರಾರು ಚೀತಾ
ದಶಕಗಳ ಹಿಂದೆ ಭಾರತದಲ್ಲಿ ಸಾವಿರಾರು ಚೀತಾಗಳು (Cheeta) ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸಿಕೊಂಡಿದ್ದವು. ಆದರೆ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಅವುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯಿತು ಅತಿಯಾದ ಬೇಟೆ, ಅವುಗಳ ನೈಸರ್ಗಿಕ ಆವಾಸಸ್ಥಾನದ ನಾಶದಿಂದ ದೇಶದಲ್ಲಿ ಚೀತಾ ಸಂತತಿ ಅಳಿಯಿತು. ಮಧ್ಯಪ್ರದೇಶದ ಮಹಾರಾಜ ರಾಮಾನುಜ ಪ್ರತಾಪ್ ಸಿಂಗ್ ದೇವ್ (Maharaja Ramanuja Pratap Singh Dev) ಅವರು 1947ರಲ್ಲಿ ಕೊನೆಯ ಚೀತಾವನ್ನು ಕೊಂದಿದ್ದರು. 1952ರಲ್ಲಿ ಭಾರತದಿಂದ ಚೀತಾ ನಾಮಾವಶೇಷವಾಗಿದೆ ಎಂದು ಘೋಷಿಸಲಾಗಿತ್ತು.
ಮುಂದೆ ಕರ್ನಾಟಕಕ್ಕೂ ಬರಲಿದೆ
ಹಾಲಿ ತಂದ ಚೀತಾಗಳು ಕುನೋ ಅರಣ್ಯದಲ್ಲಿ ಹೊಂದಿಕೊಂಡ ಬಳಿಕ ಮುಂದಿನ ದಿನಗಳಲ್ಲಿ ಕರ್ನಾಟಕ (Karnataka), ರಾಜಸ್ಥಾನ(Rajasthan) ಮತ್ತು ಗುಜರಾತ್ ಅರಣ್ಯಗಳಲ್ಲೂ ಇಂಥದ್ದೇ ಚೀತಾಗಳನ್ನು ತಂದುಬಿಡುವ ಉದ್ದೇಶ ಸರ್ಕಾರಕ್ಕಿದೆ.
ಚಂಬಲ್ ಡಕಾಯಿತ್ ಈಗ ಚೀತಾ ಮಿತ್ರ
ಹಿಂದೆ ಚಂಬಲ್ನಲ್ಲಿ ಡಕಾಯಿತನಾಗಿದ್ದ (Chambal Dacoit) ರಮೇಶ್ ಸಿಕರ್ವಾರ್ (Ramesh Sikarwar) ಈಗ ‘ಚೀತಾ ಮಿತ್ರ’ನಾಗಿದ್ದಾರೆ. ಚೀತಾ ಅರಣ್ಯದಿಂದ ಸಮೀಪದ ಗ್ರಾಮಗಳತ್ತ ಬಂದರೆ ಅವುಗಳ ಮೇಲೆ ದಾಳಿ ಮಾಡದೇ ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಆಫ್ರಿಕಾದ ಚೀತಾ ಭಾರತದ ಕಾಡಿಗೆ, ವೈಲ್ಡ್ಲೈಫ್ ತಜ್ಞರ ಕುತೂಹಲ ಪ್ರಯೋಗ
ಆಫ್ರಿಕಾದ ಈ ಚೀತಾಗಳನ್ನು ಭಾರತಕ್ಕೆ ಕರೆತರಲು ಈ ವಿಶೇಷ ವಿಮಾನವನ್ನು ಸಿದ್ಧಪಡಿಸಲಾಗಿದೆ. ಈ ಚೀತಾಗಳ ಆಗಮನಕ್ಕಾಗಿ ವಿಶೇಷವಾಗಿ B747 ಜಂಬೋ ಜೆಟ್ (jumbo jet) ವಿಮಾನವನ್ನು ನಿರ್ಮಿಸಲಾಗಿತ್ತು. ಈ ಜೆಟ್ ಭಾರತಕ್ಕೆ ವಿಶೇಷ ಆಫ್ರಿಕಾದ ಚೀತಾಗಳನ್ನು ಕರೆತರುತ್ತಿದೆ. ಮುಖ್ಯ ಕ್ಯಾಬಿನ್ನಲ್ಲಿ ಪಂಜರಗಳನ್ನು ಭದ್ರಪಡಿಸಲು ಸಾಧ್ಯವಾಗುವಂತೆ ಮಾರ್ಪಡಿಸಲಾಗಿದೆ . ಆದರೆ ಹಾರಾಟದ ಸಮಯದಲ್ಲಿ ಪಶುವೈದ್ಯರಿಗೆ ಈ ಚಿರತೆಗಳನ್ನು ಗಮನಿಸಲು ಪೂರ್ಣ ಅವಕಾಶವನ್ನು ನೀಡಲಾಗಿದೆ. ಈ ವಿಶೇಷ ಜೆಟ್ ವಿಮಾನಕ್ಕೆ ಹುಲಿಯ ಚಿತ್ರದ ಪೇಂಟಿಂಗ್ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ