ಕಚ್ಚಿದ ಹಾವನ್ನು ಹೆಗಲಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದ ಬಿಹಾರಿ : ವೀಡಿಯೋ ವೈರಲ್

By Anusha KbFirst Published Oct 17, 2024, 12:25 PM IST
Highlights

ಬಿಹಾರದ ಬಾಗಲ್ಪುರದಲ್ಲಿ ವ್ಯಕ್ತಿಯೊಬ್ಬ ತನಗೆ ಕಚ್ಚಿದ ಹಾವನ್ನು ಹಿಡಿದು ಹೆಗಲ ಮೇಲೆ ಟವೆಲ್‌ನಂತೆ ಹಾಕಿಕೊಂಡು ಸೀದಾ ಆಸ್ಪತ್ರೆಗೆ ಬಂದಂತಹ ವಿಚಿತ್ರ ಘಟನೆ ನಡೆದಿದೆ.

ಬಿಹಾರ: ಬಿಹಾರದ ಬಾಗಲ್ಪುರದಲ್ಲಿ ವ್ಯಕ್ತಿಯೊಬ್ಬ ತನಗೆ ಕಚ್ಚಿದ ಹಾವನ್ನು ಹಿಡಿದು ಹೆಗಲ ಮೇಲೆ ಟವೆಲ್‌ನಂತೆ ಹಾಕಿಕೊಂಡು ಸೀದಾ ಆಸ್ಪತ್ರೆಗೆ ಬಂದಂತಹ ವಿಚಿತ್ರ ಘಟನೆ ನಡೆದಿದೆ. ಸಾಮಾನ್ಯವಾಗಿ ಹಾವು ಕಚ್ಚಿದರೆ ಜನ ಜೀವ ಉಳಿಸಿಕೊಳ್ಳುವ ಪ್ರಥಮ ಚಿಕಿತ್ಸೆಗೆ ಗಮನ ನೀಡುತ್ತಾರೆ. ಆದರೆ ಈತ ಸ್ವಲ್ಪವೂ ಭಯ ಬೀಳದೇ ತನಗೆ ಕಚ್ಚಿದ ಹಾವನ್ನು ಹಿಡಿದು ಹೆಗಲ ಮೇಲೆ ಹಾಕಿಕೊಂಡು ಬಳಿಕವಷ್ಟೇ ಚಿಕಿತ್ಸೆಗಾಗಿ ಹಾವಿನೊಂದಿಗೆ ಆಸ್ಪತ್ರೆಗೆ ಬಂದಿದ್ದಾನೆ. ಆತ ಹಾವನ್ನು ಟವೆಲ್‌ನಂತೆ ಕುತಿಗೆಯ ಸುತ್ತ ಸುತ್ತಿಕೊಂಡು ಆಸ್ಪತ್ರೆಯ ಕಾರಿಡಾರ್‌ನಲ್ಲಿ ಓಡಾಡುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈತನಿಗೆ ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ರಸೆಲ್ ವೈಪರ್ ಕಚ್ಚಿದೆ ಎಂದು ತಿಳಿದು ಬಂದಿದೆ.

ಹಾವು ಕಚ್ಚಿದ ವ್ಯಕ್ತಿಯನ್ನು ಪ್ರಕಾಶ್ ಮಂಡಲ್ ಎಂದು ಗುರುತಿಸಲಾಗಿದೆ. ಈತ ಬಿಳಿ ಬನಿಯನ್ ಹಾಗೂ ನೀಲಿ ಕಳ್ಳಿಯ ಪಂಚೆ ಧರಿಸಿದ್ದು, ಹಾವನ್ನು ಕುತ್ತಿಗೆಯಲ್ಲಿ ಹಿಡಿದುಕೊಂಡು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಹೊರಭಾಗದಲ್ಲಿ ಓಡಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಕತ್ತಿನಲ್ಲಿ ಹಾವು ಸುತ್ತಿಕೊಂಡು ಬಂದ ಈತನನ್ನು ನೋಡಿ ಅಲ್ಲಿದ್ದ ಜನ ಗಾಬರಿಯಾಗಿದ್ದಾರೆ. ಆದರೆ ಈತ ಮಾತ್ರ ಸ್ವಲ್ಪವೂ ಕ್ಯಾರೇ ಇಲ್ಲದಂತೆ ಹಾವಿನ ಕತ್ತಿನಲ್ಲಿ ಹಿಡಿದುಕೊಂಡು ಅತ್ತಿತ್ತ ಓಡಾಡುತ್ತಾನೆ. ಅಲ್ಲದೇ ಕೆಲ ನಿಮಿಷದ ನಂತರ ನಿತ್ರಾಣವಾದಂತೆ ಕಂಡು ಬಂದ ಆತ ಅಲ್ಲೇ ಹಾವನ್ನು ಹಿಡಿದುಕೊಂಡೆ ನೆಲದ ಮೇಲೆ ಮಲಗುತ್ತಾನೆ.  ಹಾವು ಆತನ ಕೈಗೆ ಕಚ್ಚಿದ್ದು, ವಿಷ ಮೇಲೇರದಂತೆ ಆತನ ಕೈಗೆ ಬಟ್ಟೆಯೊಂದನ್ನು ತುಂಬಾ ಟೈಟ್ ಆಗಿ ಕಟ್ಟಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

Latest Videos

ಶಿಕ್ಷಕನ ಪ್ಯಾಂಟ್‌ನೊಳಗೆ ಸೇರಿದ ಬುಸ್ ಬುಸ್ ನಾಗಪ್ಪ; ಹೊರಗೆ ತೆಗೆದಿದ್ದು ಹೇಗಂತ ನೋಡಿ

ಹಾಗೆಯೇ ವೈರಲ್ ಆಗಿರು ಈತನದ್ದೇ ಮತ್ತೊಂದು ವೀಡಿಯೋದಲ್ಲಿಯೂ ಈತ ಆಸ್ಪತ್ರೆಯ ಸ್ಟ್ರೆಚರ್ ಮೇಲೆ ಮಲಗಿದ್ದರೂ ಹಾವನ್ನು ಮಾತ್ರ ದೂರ ಬಿಡದೇ ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಇದಾದ ನಂತರ ಆಸ್ಪತ್ರೆಯ ವೈದ್ಯರು ಆತನಿಗೆ ಹಾವನ್ನು ಬಿಟ್ಟರಷ್ಟೇ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದಿದ್ದಾರೆ. ಇದಾದ ನಂತರವಷ್ಟೇ ಆತ ಹಾವನ್ನು ದೂರ ಬಿಟ್ಟಿದ್ದಾನೆ.  ಆದರೆ ಆತನ ಆರೋಗ್ಯ ಸ್ಥಿತಿ ನಂತರ ಏನಾಯ್ತು ಎಂಬ ಬಗ್ಗೆ ಮಾಹಿತಿ ಇಲ್ಲ, ಆದರೆ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

2020ರ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಒಂದು ಮಿಲಿಯನ್ ಭಾರತೀಯರು ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಸುಮಾರು ಅರ್ಧದಷ್ಟು ಜನರು 30 ರಿಂದ 69 ವರ್ಷ ವಯಸ್ಸಿನವರು, ಕಾಲು ಭಾಗಕ್ಕಿಂತಲೂ ಹೆಚ್ಚು ಮಕ್ಕಳು ಹಾಗೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. 

ನಾಲ್ಕು ಹೆಬ್ಬಾವುಗಳೊಂದಿಗೆ ಸರಸವಾಡಲು ಹೋದ ವ್ಯಕ್ತಿ; ಯಾವ ಹಾವಿಗೆ ಆಹಾರವಾದ ಗೊತ್ತಾ?

बिहार के भागलपुर में एक शख्स को सांप ने काट लिया, जिसके बाद आदमी सांप पकड़कर अपने साथ अस्पताल ले आया. pic.twitter.com/jwoxj1N1sM

— Priya singh (@priyarajputlive)

 

click me!