ಅಭಿವೃದ್ಧಿಯ ನಡುವೆಯೂ ಭಾರತದಲ್ಲಿ 12.9 ಕೋಟಿ ಕಡು ಬಡವರು: ವಿಶ್ವ ಬ್ಯಾಂಕ್

By Kannadaprabha NewsFirst Published Oct 17, 2024, 10:45 AM IST
Highlights

ಭಾರತದಲ್ಲಿ 12.9 ಕೋಟಿ ನಾಗರಿಕರು ತೀವ್ರ  ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ. 

ನವದೆಹಲಿ: ಭಾರತದಲ್ಲಿ 12.9 ಕೋಟಿ ನಾಗರಿಕರು ತೀವ್ರ  ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ. ಆದರೆ 2021ಕ್ಕೆ ಹೋಲಿಸಿದರೆ ಈ ಪ್ರಮಾಣ 3.8 ಕೋಟಿಯಷ್ಟು ಕಡಿಮೆಯಾಗಿದೆ ಎಂದು ವಿಶ್ವ ಬ್ಯಾಂಕ್ ಅಂಕಿ ಅಂಶ ಹೇಳಿದೆ. ವರದಿ ಪ್ರಕಾರ, 'ಭಾರತದಲ್ಲಿ ಪ್ರಸ್ತಕ ವರ್ಷದಲ್ಲಿ 12.9 ಕೋಟಿ ಜನರು ದಿನಕ್ಕೆ 181 ರು.ಗಿಂತಲೂ ಕಡಿಮೆ ಆದಾಯವನ್ನು ಹೊಂದಿದ್ದಾರೆ. 2021 ರಲ್ಲಿ ಭಾರತದಲ್ಲಿ ಬಡತನದ ಪ್ರಮಾಣ 16.7 ಕೋಟಿಯಷ್ಟಿತ್ತು. ಆದರೆ 2 ವರ್ಷಗಳಲ್ಲಿ ಈ ಪ್ರಮಾಣ 3.8 ಕೋಟಿಯಷ್ಟು ಇಳಿಕೆಯಾಗಿದೆ. ಈ ಪ್ರಮಾಣ ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ' ಎಂದು ಹೇಳಿದೆ.

ನೈಜೀರಿಯಾ ಪೆಟ್ರೋಲ್ ಟ್ಯಾಂಕರ್ ಸ್ಫೋಟಕ್ಕೆ 140 ಬಲಿ
ಅಬುಜಾ: ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 140 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡ ದುರ್ಘಟನೆ ನೈಜೀರಿಯಾದ ಜಿಗಾವಾ ರಾಜ್ಯದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಮಜಿಯಾದಲ್ಲಿನ ವಿಶ್ವವಿದ್ಯಾನಿಲಯದ ಸಮೀಪದ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್‌ ಉರುಳಿ ಬಿದ್ದಿತ್ತು. ಟ್ಯಾಂಕರ್‌ನಿಂದ ಪೆಟ್ರೋಲ್ ಸಂಗ್ರಹಿಸಲು ಅಲ್ಲಿನ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಒಮ್ಮೆಲೆ ಆಗಮಿಸಿದ್ದರು. ಇದರಿಂದಲೇ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಗಾಯಗೊಂಡ ವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.

Latest Videos

ಜೀವಂತ ಪ್ರಾಣಿಗಳ ಫೋಟೋ, ವಿಡಿಯೋಗಳಿಗೆ ತಾಲಿಬಾನ್ ಬ್ಯಾನ್
ಇಸ್ಲಾಮಾಬಾದ್‌: ಈಗಾಗಲೇ ಮಹಿಳೆಯರ ಶಿಕ್ಷಣ, ಸಂಗೀತ, ಹೊರ ಸಂಚಾರದ ಮೇಲೆ ನಾನಾ ರೀತಿಯ ನಿಷೇಧ ಹೇರಿರುವ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, ಇದೀಗ ಮಾಧ್ಯಮಗಳ ಮೇಲೂ ಕೆಲ ನಿಷೇಧ ಹೇರಿದೆ. ಯಾವುದೇ ಜೀವಂತ ಪ್ರಾಣಿಗಳ ಫೋಟೋ, ವಿಡಿಯೋ ಪ್ರಸಾರದ ಮೇಲೆ ತಾಲಿಬಾನ್ ನಿಷೇಧ ಹೇರಿದೆ. ಇಂಥದ್ದೊಂದು ಆದೇಶ ದೇಶದ ಹಲವು ಪ್ರದೇಶಗಳಲ್ಲಿ ಜಾರಿಗೆ ಬಂದಿದೆ. ಸರ್ಕಾರದ ಅಧೀನದಲ್ಲಿರುವ ಟೀವಿ ಮತ್ತು ಇತರೆ ಮಾಧ್ಯಮಗಳಲ್ಲಿ ಈ ನೀತಿ ಜಾರಿ ಮಾಡಲಾಗಿದೆ. ನೈತಿಕ ಕಾನೂನಿನ ಪಾಲನೆಗಾಗಿ ಈ ನಿಯಮ ಜಾರಿಗೆ ತರಲಾಗಿದೆ ಎಂದು ತಾಲಿಬಾನ್ ಸರ್ಕಾರ ಹೇಳಿಕೊಂಡಿದೆ. ಜೀವಂತ ಪ್ರಾಣಿಗಳ ಪಟ್ಟಿಯಲ್ಲಿ ಮಾನವರು, ಪ್ರಾಣಿಗಳು ಕೂಡಾ ಸೇರಿವೆ.

click me!