
ಬೆಂಗಳೂರು: 24 ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಬಿಹಾರ ಮೂಲದ ಅಪ್ಪ ಮಗನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. 40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳು ಕಳೆದೊಂದು ವರ್ಷಗಳಿಂದ ಬೆಂಗಳೂರಿನಲ್ಲಿ ಅಡಗಿದ್ದರು ಎಂದು ಪೊಲೀಸರು ತಿಳಿಸಿದ್ದು, ಕೊಲೆ ಆರೋಪಿಗಳನ್ನು ಮಣಿಕ್ ಸಿಂಗ್ ಹಾಗೂ ಆತನ ತಂದೆ ಮನೋಜ್ ಸಿಂಗ್ ಎಂದು ಗುರುತಿಸಲಾಗಿದೆ. ಬಿಹಾರದ ಸ್ಪೆಷಲ್ ಟಾಸ್ಕ್ ಫೋರ್ಸ್ನಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನ ರಾಜ್ಯ ಗುಪ್ತಚರ ಪೊಲೀಸ್ ಸಹಾಯದಿಂದ ಈ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರ ಬಳಿ ಇದ್ದ 8 ಡೊಂಗಲ್, 9 ಮೊಬೈಲ್ ಫೋನ್ ಮೂರು ಕೀಪ್ಯಾಡ್ ಫೋನ್ ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಅಪ್ಪ ಮಗ ಒಟ್ಟು 24 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರ ವಿರುದ್ಧ 40ಕ್ಕೂ ಹೆಚ್ಚು ಪ್ರಕರಣಗಳಿವೆ. ಇದರಲ್ಲಿ 2 ಡಜನ್ನಷ್ಟು ಡಬ್ಬಲ್ ಮರ್ಡರ್ ಕೇಸ್ಗಳಾಗಿದ್ದು, ಕೊಲೆ, ದರೋಡೆ, ಡಕಾಯಿತಿ, ಬೆದರಿಕೆ, ಹಫ್ತಾ ವಸೂಲಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಗಳ ಉಲ್ಲಂಘಿಸಿದ ಆರೋಪ ಇವರ ಮೇಲಿದೆ. ಇವರಿಬ್ಬರು ಪಾಟ್ನಾದ ನಿವಾಸಿಗಳಾಗಿದ್ದು, ಇವರ ವಿರುದ್ಧ ಬಿಹಾರ ಮಾತ್ರವಲ್ಲದೇ ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲೂ ಕೇಸುಗಳು ದಾಖಲಾಗಿವೆ.
ಒಟ್ಟು 4 ಲಕ್ಷ ಬಹುಮಾನ ಘೋಷಿಸಿದ್ದ ಪೊಲೀಸರು:
ಆರೋಪಿಗಳಲ್ಲಿ ಓರ್ವ ತಲೆಗೆ ಬಿಹಾರ ಪೊಲೀಸರು 3 ಲಕ್ಷ ಹಾಗೂ ಮತ್ತೊರ್ವನ ತಲೆಗೆ 1 ಲಕ್ಷ ಬಹುಮಾನ ಘೋಷಿಸಿದ್ದರು. ಮಣಿಕ್ ಕಳೆದೊಂದು ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ, ಆತನ ತಂದೆ ಮನೋಜ್ ಸಿಂಗ್ ಸಾಂದರ್ಭಿಕವಾಗಿ ಭೇಟಿ ಮಾಡುತ್ತಿದ್ದರು. ಕಳೆದ ವರ್ಷ ಇವರಿಬ್ಬರು ಸೇರಿ ಪಾಟ್ನಾದಲ್ಲಿ ಮನೀಶ್ ಕುಮಾರ್ ಎಂಬಾತನನ್ನು ಕೊಲೆ ಮಾಡಿದ್ದರು. ಇದಾದ ನಂತರ ಪೊಲೀಸರು ಇವರ ಪತ್ತೆಗೆ ಹುಡುಕಾಟ ತೀವ್ರಗೊಳಿಸಿದ್ದರು. ಇವರಿಗೆ ಬೆಂಗಳೂರಿನಲ್ಲಿ ಆಶ್ರಯ ಹಾಗೂ ಇತರ ಸವಲತ್ತು ನೀಡಿದ ವ್ಯಕ್ತಿಗಳಿಗಾಗಿ ಈಗ ಬಿಹಾರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Thyroid Cancer: ದೇಹ ನೀಡುವ ಈ ಮುನ್ಸೂಚನೆಗಳನ್ನು ಕಡೆಗಣಿಸಬೇಡಿ
ಇವರಿಬ್ಬರು ನಟೋರಿಯಸ್ ಕ್ರಿಮಿನಲ್ಗಳಾಗಿದ್ದು, 2015ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಹೀಗೆ ಬಿಡುಗಡೆಯಾದವರು ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದು, ಅಲ್ಲಿ ಅವರು ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು.
ಇವರು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರುತ್ತಿದ್ದಾ ಛೋಟೆ ಸರ್ಕಾರ್ ಎಂಬ ಕೈದಿಯನ್ನು ಕೊಂದಿದ್ದರು. ಈ ಛೋಟೆ ಸರ್ಕಾರ್ ವಿರುದ್ಧ 16 ಪ್ರಕರಣಗಳು ದಾಖಲಾಗಿದ್ದವು. ಬಂಧನಕ್ಕೂ ಮುನ್ನ, ಮಾಣಿಕ್ ಮತ್ತು ಮನೋಜ್ ನಮ್ಮನ್ನು ಪೊಲೀಸರು ಎನ್ಕೌಂಟರ್ ಮಾಡಬಹುದು ಎಂದು ಆರೋಪಿಸಿ ವೀಡಿಯೋ ಬಿಡುಗಡೆ ಮಾಡಿದ್ದರು. ವೀಡಿಯೊ ಸಂದೇಶದಲ್ಲಿಇವರು ತಮ್ಮಿಬ್ಬರನ್ನು ಬಂಧಿಸಿ ಕೈಕೋಳ ಹಾಕಿ ಕರೆದೊಯ್ಯುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ಪುಟ್ಟ ಕಂದನ ಬಿಟ್ಟು ವಿದೇಶಕ್ಕೆ ಹೋದ ತಾಯಿ : ಅಮ್ಮನಿಗಾಗಿ ಮಗು ಅಳುವ ವೀಡಿಯೋ ವೈರಲ್ ಆಗ್ತಿದ್ದಂತೆ ವ್ಯಾಪಕ ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ