
ಬೆಂಗಳೂರು: ಮಹಾರಾಷ್ಟ್ರದ ಪುಣೆಯಲ್ಲಿ ಸಂಚಲನ ಮೂಡಿಸಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರು ತೀವ್ರಗೊಳಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ, ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ಗೆ ಪಾಲಿಗ್ರಾಫ್ (ಸುಳ್ಳು ಪತ್ತೆ) ಪರೀಕ್ಷೆ ನಡೆಸಲು ಅನುಮತಿ ಕೋರಿ ಪೊಲೀಸರು ಇವತ್ತು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ಅವರಿಗೆ ನವೆಂಬರ್ನಲ್ಲಿ ವಿವಾಹ ನಿಶ್ಚಯವಾಗಿತ್ತು. ಆದರೆ, ಜೂನ್ 18 ರಂದು ಲೋಹಗಢ್ ಕೋಟೆಗೆ ಪ್ರವಾಸಕ್ಕೆ ಹೋದಾಗ, ಕೇತನ್ ಅವರು ಬೆಟ್ಟದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದರು. ಆರಂಭದಲ್ಲಿ ಇದು ಅಪಘಾತ ಎಂದು ಭಾವಿಸಲಾಗಿತ್ತು, ಆದರೆ ನಂತರ ಪೊಲೀಸರು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಎನ್ನಲಾದ ಚೇತನ್ ಚೌಧರಿ ಸೇರಿ ಕೇತನ್ನನ್ನು ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರನ್ನೂ ಬಂಧಿಸಿದ್ದರು.
ಈ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷದರ್ಶಿಗಳಿಲ್ಲ (Eye Witnesses). ಕೇತನ್ನನ್ನು ಕಂದಕಕ್ಕೆ ತಳ್ಳಿದ್ದು ಯಾರು ಎಂಬುದಕ್ಕೆ ನೇರ ಸಾಕ್ಷ್ಯಗಳ ಕೊರತೆಯಿದೆ. ಆರೋಪಿಗಳಾದ ಸಿಯಾ ಮತ್ತು ಚೇತನ್ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆಯಾದರೂ, ಅವರು ಸತ್ಯ ಮರೆಮಾಚುತ್ತಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆಯಲ್ಲಿ ಹೊಸ ಸುಳಿವುಗಳನ್ನು ಕಂಡುಕೊಳ್ಳಲು ಮತ್ತು ಘಟನೆಯ ಹಿಂದಿನ ನೈಜ ಸಂಚನ್ನು ಬಯಲಿಗೆಳೆಯಲು ಈ ಪಾಲಿಗ್ರಾಫ್ ಪರೀಕ್ಷೆ ಅತ್ಯಗತ್ಯ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಘಟನೆಯ ನಂತರ ಕೇತನ್ ಅಗರ್ವಾಲ್ ಅವರ ಮೊಬೈಲ್ ಫೋನ್ ಸ್ವಲ್ಪ ಸಮಯದವರೆಗೆ ಸಿಯಾ ಗೋಯಲ್ ಬಳಿಯೇ ಇತ್ತು. ಈ ವೇಳೆ ಅವಳು ಫೋನ್ನಲ್ಲಿದ್ದ ಪ್ರಮುಖ ಸಾಕ್ಷ್ಯಗಳನ್ನು ಅಥವಾ ಮೆಸೇಜ್ಗಳನ್ನು ಡಿಲೀಟ್ ಮಾಡಿದ್ದಾಳೆಯೇ ಎಂಬ ಬಗ್ಗೆ ವಿಧಿವಿಜ್ಞಾನ (Forensic) ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಈಗಾಗಲೇ ಲೋಹಗಢ್ ಕೋಟೆಗೆ ಆರೋಪಿಗಳನ್ನು ಕರೆದೊಯ್ದು, ಡಮ್ಮಿ ಗೊಂಬೆಯನ್ನು ಬಳಸಿ ಕೇತನ್ನನ್ನು ಹೇಗೆ ತಳ್ಳಲಾಯಿತು ಎಂಬುದರ ಮರುಸೃಷ್ಟಿ (Crime Scene Recreation) ಮಾಡಿದ್ದಾರೆ. ಸಿಯಾ ಮತ್ತು ಚೇತನ್ ಚೌಧರಿ ಸೇರಿ ಈ ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸದ್ಯ ಆರೋಪಿಗಳಿಬ್ಬರೂ ಜುಲೈ 3 ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪಾಲಿಗ್ರಾಫ್ ಪರೀಕ್ಷೆಯ ವರದಿಯನ್ನು ನ್ಯಾಯಾಲಯವು ನೇರ ಸಾಕ್ಷ್ಯವಾಗಿ ಪರಿಗಣಿಸದಿದ್ದರೂ, ತನಿಖಾಧಿಕಾರಿಗಳಿಗೆ ಪ್ರಕರಣದ ದಿಕ್ಕನ್ನು ಬದಲಿಸುವಂತಹ ಪ್ರಮುಖ ಸುಳಿವುಗಳನ್ನು ನೀಡಲು ಇದು ಸಹಕಾರಿಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ