
ನವದೆಹಲಿ (ನ. 10): ಸೂಕ್ಷ್ಮ ಸಂದರ್ಭಗಳಲ್ಲಿ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದು, ಮತ್ತಷ್ಟು ಹಾನಿಗೆ ಕಾರಣವಾಗುತ್ತಿದ್ದ ಸಾಮಾಜಿಕ ಜಾಲತಾಣ ಶನಿವಾರದ ಮಟ್ಟಿಗೆ ಶಾಂತಿ, ಸೌಹಾರ್ಧತೆಯೆ ತಾಣವಾಗಿದ್ದು ವಿಶೇಷವಾಗಿತ್ತು. ಶನಿವಾರ ಬೆಳಿಗ್ಗೆ ತೀರ್ಪು ಪ್ರಕಟವಾಗಲಿದೆ ಎಂದು ಶುಕ್ರವಾರ ರಾತ್ರಿ ಮಾದ್ಯಮಗಳಲ್ಲಿ ಸುದ್ದಿ ಬಿತ್ತರಗೊಳ್ಳುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ, ಎಚ್ಚರಿಕೆಯ ಸಂದೇಶಗಳು ರವಾನೆಯಾಗುವುದಕ್ಕೆ ಪ್ರಾರಂಭವಾಗಿದ್ದವು.
ಪ್ರಕರಣ ಸಂಬಂಧ ಯಾವುದೇ ಮಾಹಿತಿಯನ್ನು ಶೇ.100 ರಷ್ಟು ಖಾತ್ರಿ ಪಡಿಸದೇ ಫಾರ್ವಡ್ ಮಾಡಬೇಡಿ, ಕೋಮ ಭಾವನೆ ಕೆರಳಿಸುವಂತಹ ಯಾವುದೇ ಪೋಸ್ಟ್ಗಳನ್ನು ಮಾಡಬೇಡಿ, ತೀರ್ಪಿಗಿಂತ ದೇಶದ ಶಾಂತಿ ಸಾಮರಸ್ಯ ಮುಖ್ಯ, ಹಿಂದೂ- ಮುಸ್ಲಿಂ ಭಾಯಿ ಭಾಯಿ, ಈಶ್ವರ್-ಅಲ್ಲಾ ತೇರೋ ನಾಮ್ ಮುಂತಾದ ಸಂದೇಶ ಸೇರಿದಂತೆ ದೇಶದ ಸಾರ್ವ ಭೌಮತೆಯನ್ನು ಎತ್ತಿ ಹಿಡಿಯುವ ಸ್ಟಿಕ್ಕರ್, ಫೋಟೋ ಹಾಗೂ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದವು.
ಅಂತಾರಾಷ್ಟ್ರೀಯ ಮಾಧ್ಯಮಗಳ ಕಣ್ಣಲ್ಲಿ ಅಯೋಧ್ಯೆ ಕಾಣಿಸಿದ್ದು ಹೀಗೆ
ಇದರ ಜತೆಗೆ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಕೂಡ ಹದ್ದಿನ ಕಣ್ಣಿಟ್ಟು, ಅಡ್ಮಿನ್ಗಳಿಗೆ ಎಚ್ಚರಿಕೆ ನೀಡಿದ್ದರಿಂದ ಬಹುತೇಕ ವ್ಯಾಟ್ಸ್ಆ್ಯಪ್ ಗ್ರೂಪ್ಗಳ ಅಡ್ಮಿನ್ಗಳು ‘ಅಡ್ಮಿನ್ಸ್ ಓನ್ಲಿ ’ ಆಯ್ಕೆ ಸಕ್ರಿಯಗೊಳಿಸಿದ್ದರು. ತೀರ್ಪು ಯಾರ ಪರ ಬಂದರೂ, ನಾಗರಿಕರು ಸಂಯಮ ಕಾಪಾಡಿಕೊಳ್ಳಬೇಕು, ದೇಶದ ನ್ಯಾಯಾಲಯವನ್ನು ಗೌರವಿಸಬೇಕು ಎಂದು ಧಾರ್ಮಿಕ ನಾಯಕರು ಕರೆ ಕೊಟ್ಟರುವ ವಿಡಿಯೋಗಳು, ಪೋಸ್ಟರ್ಗಳು ಸ್ಟೇಟಸ್ಗಳಿಗೆ ಹಾಕಿಕೊಳ್ಳುವ ಮೂಲಕ ನೆಟ್ಟಿಗರು ಸಂಯಮ ಕಾಪಾಡಿಕೊಂಡಿದ್ದು ವಿಶೇಷವಾಗಿತ್ತು. ಅಲ್ಲದೇ ಪ್ರಕರಣದ ತೀರ್ಪು ನೀಡುವ ಪೀಠದಲ್ಲಿ ಹಿಂದೂ-ಮುಸ್ಲಿಂ ನ್ಯಾಯಮೂರ್ತಿಗಳು ಇದ್ದಿದ್ದುನ್ನು ಕೂಡ ಪ್ರಸ್ತಾಪಿಸಿ, ದೇಶದ ಜಾತ್ಯಾತೀಯ ಮೌಲ್ಯಗಳನ್ನು ಸಾರುವ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಪಾರ್ವಡ್ ಆದವು.
ರಾಮ ಮಂದಿರ ನಿರ್ಮಾಣಕ್ಕೆ 2 ವರ್ಷ ಹಿಂದೆಯೇ ಸಿಮೆಂಟ್ ಕೊಟ್ಟಿದ್ದ ಮುಸ್ಲಿಂ ಯುವಕ
ಜಗತ್ತಿಗೆ ಶಾಂತಿ ಸಂದೇಶ ರವಾನಿಸಿದ ಪ್ರವಾದ ಮುಹಮ್ಮದ ಜನ್ಮ ಮಾಸವಾಗಿದ್ದರಿಂದ, ಅವರ ಬೋಧನೆಗಳಾದ ಶಾಂತಿ ಸೌಹಾರ್ಧತೆ ತೀರ್ಪಿನ ಬಳಿಕ ಪ್ರತಿಫಲಿಸಲಿ, ಇಟ್ಟಿಗೆ ಪವಿತ್ರವಲ್ಲ- ಜೀವ ಪವಿತ್ರ ಎನ್ನು ಪಿ. ಲಂಕೇಶರ ಸಾಲುಗಳನ್ನು ಬಳಸಿ ನೆಟ್ಟಿಗರು ಶಾಂತವಾಗಿದ್ದು ವಿಶೇಷವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ