ವಿವಾದದ ಮಧ್ಯೆ ಸಮೀರ್‌ ವಾಂಖೇಡೆ 'ನಿಖಾ' ಫೋಟೋ ಶೇರ್ ಮಾಡಿದ ಸಚಿವ ಮಲಿಕ್!

Published : Oct 27, 2021, 12:23 PM IST
ವಿವಾದದ ಮಧ್ಯೆ ಸಮೀರ್‌ ವಾಂಖೇಡೆ 'ನಿಖಾ' ಫೋಟೋ ಶೇರ್ ಮಾಡಿದ ಸಚಿವ ಮಲಿಕ್!

ಸಾರಾಂಶ

* ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ * ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ಜಾತಿ ವಿವಾದ * ಸಮೀರ್ ಮೊದಲ ಮದುವೆ ಫೋಟೋ ಶೇರ್ ಮಾಡಿದ ಸಚಿವ ಮಲಿಕ್

ಮುಂಬೈ(ಅ.27): ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ಜಾತಿ ವಿಚಾರ ಸದ್ಯ ವಿವಾದ ಸೃಷ್ಟಿಸಿದೆ. ಹೌದು  ಸಮೀರ್ ವಾಂಖೆಡೆ ತಮ್ಮ ವೈಯಕ್ತಿಕ ದಾಖಲೆ ಹಾಗೂ ಜನ್ಮ ಪ್ರಮಾಣ ಪತ್ರವನ್ನು ನಕಲು ಮಾಡಿದ್ದಾರೆ. ಅವರು ಹುಟ್ಟಿನಿಂದ ಮುಸ್ಲಿಂ ಆಗಿದ್ದು, ಅವರ ನಿಜವಾದ ಹೆಸರು ಸಮೀರ್ ದಾವೂದ್ ವಾಂಖೇಡೆ ಎಂದು ಮಹಾಷ್ಟ್ರದ ಸಚಿವ ನವಾಬ್ ಮಲಿಕ್ ಎರಡು ದಿನಗಳ ಹಿಂದಷ್ಟೇ ಆರೋಪಿಸಿದ್ದರು. ಅಲ್ಲದೇ ದಾಖಲೆಯೊಂದನ್ನೂ ಟ್ವೀಟ್ ಮಾಡಿದ್ದರು. ಇದರಿಂದ ಕೆರಳಿದ್ದ ಸಮೀರ್ ವಾಂಖೇಡೆ, ತನಿಖೆಯ ಹಾದಿ ತಪ್ಪಿಸುವ ಉದ್ದೇಶದಿಂದ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ತಿರುಗೇಟು ನೀಡಿದ್ದರು. 

ಆದರೀಗ ಮತ್ತೆ ಸಮೀರ್ ವಾಂಖೇಡೆ ಜಾತಿ ವಿಚಾರ ಫೋಟೋ ಒಂದರ ಮೂಲಕ ಮತ್ತೆ ಸದ್ದು ಮಾಡಿದೆ. ಹೌದು ಸಚಿವ ಮಲಿಕ್ ಮತ್ತೆ ವಾಂಖೆಡೆ ಅವರ ಮೊದಲ ವಿವಾಹದ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ಮುಸ್ಲಿಂ ಸಂಪ್ರದಾಯದ ಅನ್ವಯ ಡಾ. ಶಬಾನಾ ಖುರೇಷಿಯನ್ನು ಮದುವೆಯಾಗಿರುವುದು ಸ್ಪಷ್ಟವಾಗಿದೆ. ಅಲ್ಲದೇ ಮಲಿಕ್ ತಮ್ಮ ಮತ್ತೊಂದು ಟ್ವೀಟ್‌ನಲ್ಲಿ ಸಮೀರ್ ದಾವೂದ್ ವಾಂಖೇಡೆ ಹಾಗೂ ಶಬಾನಾರವರ ಮೊದಲ ವಿವಾಹದ ನಿಖಾ ನಾಮಾ ಕೂಡಾ ಶೇರ್ ಮಾಡಲಾಗಿದೆ.

'ನನ್ನ ತಂದೆ ಹಿಂದು..ತಾಯಿ ಮುಸ್ಲಿಂ... ಸಮೀರ್ ವಾಂಖೆಡೆ ತಿರುಗೇಟು!

ನನ್ನ ತಂದೆ ಹಿಂದೂ, ತಾಯಿ ಮುಸ್ಲಿಂ: ವಾಂಖೇಡೆ

ಈ ವಿಚಾರದಿಂದ ಕೆರಳಿರುವ ಅಧಿಕಾರಿ ವಾಂಖೇಡೆ ಸಚಿವರು ತಮ್ಮ ವೈಯುಕ್ತಿಕ ಜೀವನದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆಂದು ಕಿಡಿ ಕಾರಿದ್ದಾರೆ. ಅಲ್ಲದೇ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಡ್ರಗ್ಸ್​ ಪ್ರಕರಣದಲ್ಲಿ ನವಾಬ್ ಮಲಿಕ್ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ತಮ್ಮನ್ನೂ ಬಂಧಿಸಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಹೀಗಾಗಿ, ತನಿಖೆಯ ಹಾದಿ ತಪ್ಪಿಸಲು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

‘ನನ್ನ ವೈಯಕ್ತಿಕ ವಿಷಯ ಕೆದಕುವುದು ಸರಿಯಲ್ಲ. ಹೌದು ನನ್ನ ತಂದೆ ಹಿಂದೂ. ತಾಯಿ ಮುಸ್ಲಿಂ. ಇನ್ನು ಮುಸ್ಲಿಮಳನ್ನು ಮದುವೆಯಾಗಿ ನಾನು ಹಿಂದೆ ವಿಚ್ಛೇದನ ನೀಡಿದೆ. ಬಳಿಕ ಮರಾಠಿ ನಟಿಯೊಬ್ಬಳನ್ನು ಮದುವೆಯಾಗಿ ಜೀವಿಸುತ್ತಿದ್ದೇನೆ. ಜಾತ್ಯತೀತತೆಯನ್ನು ಎತ್ತಿ ಹಿಡಿದ ಕುಟುಂಬ ನಮ್ಮದು. ಆದರೆ ವೃತ್ತಿ ವಿಷಯ ಬಿಟ್ಟು ನನ್ನ ವೈಯಕ್ತಿಕ ವಿಷಯ ಕೆದಕುತ್ತಿರುವುದೇಕೆ?’ ಎಂದು ಮಲಿಕ್‌ರನ್ನು ವಾಂಖೇಡೆ ಪ್ರಶ್ನಿಸಿದ್ದಾರೆ.

ವಾಂಖೇಡೆಯಿಂದ ಭಾರಿ ಹಣಕ್ಕೆ ಬೇಡಿಕೆ: ಶಾರುಖ್‌ ಪುತ್ರನ ಕೇಸ್‌ ಮುಚ್ಚಲು 25 ಕೋಟಿ ಡೀಲ್‌?

ಗಂಡನ ನೆರವಿಗೆ ಧಾವಿಸಿದ್ದ ಪತ್ನಿ ಕ್ರಾಂತಿ

ಇನ್ನು ಇದೇ ವಿಚಾರವಾಗಿ ಸಮೀರ್ ಪತ್ನಿ ಕ್ರಾಂತಿ ರೆಡ್ಕರ್ ಗಂಡನ ನೆರವಿಗೆ ಧಾವಿಸಿದ್ದರು. ನಿನ್ನೆಯಷ್ಟೇ ತನ್ನ ಹಾಗೂ ಸಮೀರ್ ವಿವಾಹದ ಫೋಟೋ ಶೇರ್ ಮಾಡಿಕೊಂಡಿದ್ದ ಅವರು 'ನನ್ನ ಗಂಡನ ಮೇಲೆ ಏನೇ ಆರೋಪಗಳು ಬಂದರೂ ಅದು ತಪ್ಪು ಎಂದು ಬರೆದಿದ್ದಾರೆ. ನಾನು ಮತ್ತು ನನ್ನ ಪತಿ ಸಮೀರ್‌ ಹಿಂದೂಗಳು. ನಾವು ಯಾವತ್ತೂ ಬೇರೆ ಧರ್ಮಕ್ಕೆ ಮತಾಂತರಗೊಂಡಿಲ್ಲ. ಎಲ್ಲಾ ಧರ್ಮಗಳನ್ನು ಗೌರವಿಸಿ. ಸಮೀರ್‌ನ ತಂದೆಯೂ ನನ್ನ ಮುಸ್ಲಿಂ ಅತ್ತೆಯನ್ನು ಮದುವೆಯಾಗಿದ್ದಾರೆ. ಸಮೀರ್ ಅವರ ಹಿಂದಿನ ವಿವಾಹವು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿತ್ತು, 2016 ರಲ್ಲಿ ವಿಚ್ಛೇದನ ಪಡೆದಿದ್ದಾರೆ. ನಾವು ಹಿಂದೂ ವಿವಾಹ ಕಾಯ್ದೆ 2017 ರ ಅಡಿಯಲ್ಲಿ ವಿವಾಹವಾಗಿದ್ದೇವೆ ಎಂದಿದ್ದರು.

25 ಕೋಟಿ ಲಂಚ ಪಡೆದ ಆರೋಪ

 ಶಾರುಖ್‌ ಪುತ್ರನನ್ನು ಬಂಧಿಸಿರುವ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ) ಮುಖ್ಯಸ್ಥ ಸಮೀರ್‌ ವಾಂಖೇಡೆ(Sameer Wankhede), ಈ ಪ್ರಕರಣವನ್ನು ಮುಚ್ಚಿಹಾಕಲು ಖಾಸಗಿ ಗುಪ್ತಚರ ಕೆ.ಪಿ.ಗೋಸಾವಿ ಮೂಲಕ 25 ಕೋಟಿ ರು.ಗೆ ಬೇಡಿಕೆ ಇರಿಸಿದ್ದರು ಎಂಬ ಆರೋಪವನ್ನು ಗೋಸಾವಿ ಸಹಚರ ಪ್ರಭಾಕರ ಸೈಲ್‌ ಆರೋಪಿಸಿದ್ದಾನೆ.

ಗೋಸಾವಿ ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದು, ಈತನ ಅಂಗರಕ್ಷಕ ಸೈಲ್‌(Prabhakar sail) ನೋಟರಿ ಅಫಿಡವಿಟ್‌ನಲ್ಲಿ ಈ ಆರೋಪ ಮಾಡಿದ್ದಾನೆ. ಆದರೆ ಈ ಆರೋಪವನ್ನು ಎನ್‌ಸಿಬಿ ತಳ್ಳಿಹಾಕಿದ್ದು, ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದಿದೆ. ಗೋಸಾವಿ, ಎನ್‌ಸಿಬಿ ವಶದಲ್ಲಿದ್ದ ಶಾರುಖ್‌ ಪುತ್ರನ ಜತೆ ಸೆಲ್ಫಿ ತೆಗೆದುಕೊಂಡು ಇತ್ತೀಚೆಗೆ ಸುದ್ದಿಯಾಗಿದ್ದ.

ಮದುವೆ ಫೋಟೋ ಶೇರ್ ಮಾಡಿ ಸತ್ಯ ಬಹಿರಂಗಪಡಿಸಿದ ವಾಂಖೇಡೆ ಪತ್ನಿ, ಎಲ್ಲರ ಬಾಯಿಗೆ ಬೀಗ!

ಸೈಲ್‌ ಹೇಳಿದ್ದೇನು?:

‘ಗೋಸಾವಿ ಈ ಪ್ರಕರಣದಲ್ಲಿ ಮಧ್ಯವರ್ತಿಯಂತೆ ಕೆಲಸ ಮಾಡಿದ್ದಾರೆ. ಗೋಸಾವಿ ಹಾಗೂ ಸ್ಯಾಮ್‌ ಎಂಬ ಇನ್ನೊಬ್ಬ ವ್ಯಕ್ತಿ, ಶಾರುಖ್‌ ಖಾನ್‌(Shah Rukh Khan) ಮ್ಯಾನೇಜರ್‌ ಪೂಜಾ ದಡ್ಲಾನಿಯನ್ನು ದಾಳಿ ನಡೆದ ಮಧ್ಯರಾತ್ರಿ ಭೇಟಿ ಮಾಡಿದ್ದರು. ಈ ವೇಳೆ ಗೋಸಾವಿ 25 ಕೋಟಿ ರು. ಕೊಟ್ಟರೆ ಪ್ರಕರಣ ಇತ್ಯರ್ಥ ಮಾಡಿಸುವೆ ಎಂದು ಸಮೀರ್‌ ವಾಂಖೇಡೆ ಪರವಾಗಿ ಆಫರ್‌ ಇಟ್ಟ. ಕೊನೆಗೆ 18 ಕೋಟಿ ರು.ಗೆ ‘ಡೀಲ್‌ ಓಕೆ’ ಆಯಿತು. ಇದರಲ್ಲಿ 8 ಕೋಟಿ ರು. ವಾಂಖೇಂಡೆಗೆ ನೀಡಲಾಗುವುದು ಹಾಗೂ 10 ಕೋಟಿ ರು.ಗಳನ್ನು ತಮ್ಮ ನಡುವೆ ಹಂಚಿಕೊಳ್ಳೋಣ ಎಂದು ಗೋಸಾವಿ ಹೇಳಿದ’ ಎಂದು ಸೈಲ್‌ ಆರೋಪಿಸಿದ್ದಾನೆ.

‘ಇದರ ಮುಂಗಡ ಹಣವಾಗಿ ಮರುದಿನ ಮುಂಜಾನೆ 50 ಲಕ್ಷ ರು.ಗಳನ್ನು ಕೊಡಲಾಗಿತ್ತು. ಇದರಲ್ಲಿ 12 ಲಕ್ಷ ರು.ಗಳನ್ನು ತಾನು ಇರಿಸಿಕೊಂಡ ಗೋಸಾವಿ, ಉಳಿದಿದ್ದನ್ನು ನನ್ನ ಮುಖಾಂತರ ಸ್ಯಾಮ್‌ಗೆ ತಲುಪಿಸಿದ್ದ’ ಎಂದೂ ಹೇಳಿದ್ದಾನೆ.

‘ಇನ್ನು ಎನ್‌ಸಿಬಿ ನನ್ನ ಕಡೆಯಿಂದ 6-7 ಖಾಲಿ ಕಾಗದದಲ್ಲಿ ಪಂಚನಾಮೆಗೆ ಸಹಿ ಹಾಕಿಸಿಕೊಂಡಿದೆ. ಈ ನಡುವೆ, ಗೋಸಾವಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ನನ್ನ ಜೀವಕ್ಕೆ ಕೂಡ ಎನ್‌ಸಿಬಿಯಿಂದ ಭಯ ಇದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾನೆ.

ವಿಡಿಯೋ ವೈರಲ್‌:

ಪ್ರಭಾಕರ ಸೈಲ್‌, ಎನ್‌ಸಿಬಿ(NCB) ದಾಳಿಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ಇದರಲ್ಲಿ ಗೋಸಾವಿ ಸ್ಪೀಕರ್‌ ಆನ್‌ ಇರಿಸಿ ಯಾರಿಗೋ ಫೋನ್‌ ಮಾಡಿ ಮೊಬೈಲ್‌ ಹಿಡಿದಿಕೊಂಡಿದ್ದು, ‘ಇದರಲ್ಲಿ ಮಾತನಾಡು’ ಎಂದು ಆರ‍್ಯನ್‌ಗೆ ಹೇಳುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋ ಈಗ ವೈರಲ್‌ ಆಗಿದೆ.

ವಾಂಖೇಡೆ ವಿರುದ್ಧ ತನಿಖೆ

ಸಮೀರ್‌ ವಾಂಖೇಡೆ ಅವರು, ತಮ್ಮ ವಿರುದ್ಧ ಕೇಳಿಬರುತ್ತಿರುವ ಸುಲಿಗೆ ಆರೋಪಗಳ ವಿರುದ್ಧ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ. ‘ನನ್ನ ವಿರುದ್ಧ ಒಳಸಂಚು ನಡೆದಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿರುವ ನನ್ನ ವಿರುದ್ಧ ವೈಯಕ್ತಿಕ ತೇಜೋವಧೆ ನಡೆಸಲಾಗುತ್ತಿದೆ. ಒಬ್ಬ ದೊಡ್ಡ ರಾಜಕೀಯ ವ್ಯಕ್ತಿಯ ಅಳಿಯ ಸಮೀರ್‌ ಖಾನ್‌(Sameer Khan) ಎಂಬಾತನನ್ನು ಡ್ರಗ್ಸ್‌ ಕೇಸಿನಲ್ಲಿ ಬಂಧಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಅರ್ಜಿಯ ವಿಚಾರಣೆಗೆ ಮತ್ತು ಯಾವುದೇ ಆದೇಶ ಹೊರಡಿಸಲು ನಿರಾಕರಿಸಿದ ಕೋರ್ಟ್‌, ಹೈಕೋರ್ಟ್‌ ಮೊರೆ ಹೋಗುವಂತೆ ಸೂಚಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..