
ಚೆನ್ನೈ (ಜೂ.01) ಪೊಲೀಸ್ ಕರ್ತವ್ಯಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡ ಅಣ್ಣಾಮಲೈ ತಮಿಳುನಾಡಿನಲ್ಲಿ ಹೊಸ ಅಲೆ ಸೃಷ್ಟಿಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಹಾಕಿದ ಬ್ರೇಕ್, ಬಳಿಕ ಹಿರಿಯ ನಾಯಕರ ನಿರ್ಲಕ್ಷ್ಯದಿಂದ ತಮಿಳುನಾಡಿನಲ್ಲಿ ಅಣ್ಣಾಮಲೈ ಮಾತ್ರವಲ್ಲ ಬಿಜೆಪಿ ಮೂಲೆಗುಂಪಾಯಿತು. ದಿಢೀರ್ ದೆಹಲಿಗೆ ತೆರಳಿ ವರಿಷ್ಠರ ಭೇಟಿಯಾದ ಅಣ್ಣಾಮಲೈ ಬಿಜೆಪಿ ತೊರೆಯುತ್ತಿದ್ದಾರೆ. ಹೊಸ ಪಕ್ಷ ಕಟ್ಟುತ್ತಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಅಣ್ಣಾಮಲೈ ನೀಡಿದ ಉತ್ತರ ಇದೀಗ ತಮಿಳುನಾಡು ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಎರಡು ದಿನ ಕಾಯಿರಿ, ಎಲ್ಲಾ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಇನ್ನೆರಡು ದಿನದಲ್ಲಿ ಅಣ್ಣಾಮೈಲೆ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದಾರೆ. ಇದೇ ದಿನ ಹೊಸ ಪಕ್ಷ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ದೆಹಲಿ ಭೇಟಿ ಬಳಿಕ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಣ್ಣಾಮಲೈಗೆ ಮಾಧ್ಯಮಗಳು ನೇರ ಪ್ರಶ್ನೆ ಕೇಳಿತ್ತು. ಅಣ್ಣಾಮಲೈ ಬಿಜೆಪಿ ತೊರೆಯುತ್ತಿದ್ದಾರೆ, ಹೊಸ ಪಕ್ಷ ಆರಂಭಿಸುತ್ತಿದ್ದಾರೆ, ತಮಿಳುನಾಡಿನಲ್ಲಿ ಅಣ್ಣಾಮಲೈ ನೇತೃತ್ವದಲ್ಲಿ ಹೊಸ ಆಂದೋಲನ ಶುರುವಾಗಲಿದೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ ಎಂದು ಪ್ರಶ್ನಿಸಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ ಇನ್ನೆರಡು ದಿನ ಕಾಯಬೇಕು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದಿದ್ದಾರೆ.
ಅಣ್ಣಾಮಲೈ ಇನ್ನೆರಡು ದಿನ ಕಾಯಬೇಕು ಎಂದಿದ್ದಾರೆ. ಇನ್ನೆರಡು ದಿನ ಅಂದರೆ ಜೂನ್ ನಾಲ್ಕರಂದು ಅಣ್ಣಾಮಲೈ 42ನೇ ವರ್ಷದ ಹುಟ್ಟುಹಬ್ಬ ಆಚರಿಸಲಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನವೇ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ ಎಂದು ರಾಜಕೀಯ ತಜ್ಞರು ವ್ಯಾಖ್ಯಾನಿಸಿದ್ದಾರೆ. ಅಣ್ಣಾಮಲೈ ಹುಟ್ಟುಹಬ್ಬ ದಿನವೇ ಹೊಸ ಪಕ್ಷದ ಉದಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಣ್ಣಾಮಲೈ ಹುಟ್ಟುಹಬ್ಬ ಹಿನ್ನಲೆಯಲ್ಲಿ ಕೊಯಂಬತ್ತೂರಿನ ಹಲವೆಡೆ ಹೊಸ ಪೋಸ್ಟರ್ ಅಂಟಿಸಲಾಗಿದೆ. ನಮ್ಮ ನಾಯಕ ನಮ್ಮ ಆಡಳಿತ ನಡೆಸುತ್ತಾರೆ. ದೂರದೃಷ್ಠಿಯುಳ್ಳ ನಾಯಕನಿಗೆ ಮಿತಿಗಳಿಲ್ಲ ಎಂಬೆಲ್ಲಾ ಬರಹ ಹಾಗೂ ಅಣ್ಣಾಮಲೈ ಫೋಟೋ ಇರುವ ಪೋಸ್ಟರ್ ಕಾಣಿಸಿಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳು ಅಣ್ಣಾಮಲೈ ಬಿಜೆಪಿ ತೊರೆದು ಹೊಸ ಪಾರ್ಟಿ ಆರಂಭಿಸುತ್ತಿರುವ ಸೂಚನೆಗಳು ನೀಡುತ್ತಿದೆ.
ನಟ ವಿಜಯ್ ಟಿವಿಕೆ ಪಕ್ಷ ಕಟ್ಟಿ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ್ದು ಮಾತ್ರವಲ್ಲ, ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿಯೊಂದಿಗೆ ಹೊಸ ಅಲೆ ಸೃಷ್ಟಿಸಿದ ಅಣ್ಣಾಮಲೈ, ಮೈತ್ರಿ ರಾಜಕೀಯಕ್ಕೆ ತಲೆಬಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸ್ಥಾನ ಗೆದ್ದುಕೊಂಡಿದೆ. ಟಿವಿಕೆ ರೀತಿ ಹೊಸ ಪಕ್ಷ ಸ್ಥಾಪಿಸಿ ಮುಂಬರುವ ಲೋಕಸಭೆ ಚುನಾವಣೆಗೆ ಶಕ್ತಿ ಸಾಮರ್ಥ್ಯ ತೋರಿಸಲು ಅಣ್ಣಾಮಲೈ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡು ಜನ, ರಾಜಕೀಯ ಪ್ರಾದೇಶಿಕ ಪಕ್ಷಕ್ಕೆ ನೀಡಿದ ಸ್ಥಾನಮಾನ, ರಾಷ್ಟ್ರೀಯ ಪಕ್ಷಗಳಿಗೆ ನೀಡುತ್ತಿಲ್ಲ ಅನ್ನೋ ಸ್ಪಷ್ಟ ಅರಿವು ಅಣ್ಣಾಮಲೈಗಿದೆ.
#WATCH | Tamil Nadu | BJP leader K. Annamalai leaves for Delhi from Chennai.
When asked on speculations about him expected to launch a new party, he says, "Please wait. We will sit down and talk in two days" pic.twitter.com/5qOZfp7OHD— ANI (@ANI) June 1, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ