ಕೇಂದ್ರ ಸೇವೆಗೆ ನಿಯೋಜಿತರಾಗಿದ್ದ ಆಲಾಪನ್‌ ನಿವೃತ್ತಿ, ಮಮತಾ ಸಲಹೆಗಾರರಾಗಿ ನೇಮಕ!

By Suvarna NewsFirst Published Jun 1, 2021, 8:05 AM IST
Highlights

* ದೀದಿ-ಕೇಂದ್ರ ಸಂಘರ್ಷ ತಾರಕಕ್ಕೆ

* ಕೇಂದ್ರ ಸೇವೆಗೆ ನಿಯೋಜಿತರಾಗಿದ್ದ ಸಿಎಸ್‌ ಆಲಾಪನ್‌ ನಿವೃತ್ತಿ

* ಮುಂದಿನ 3 ವರ್ಷದ ಅವಧಿಗೆ ಮಮತಾ ಸಲಹೆಗಾರರಾಗಿ ನೇಮಕ

ಕೋಲ್ಕತಾ(ಜೂ.01): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಸೋಮವಾರ ಹೊಸ ಮಜಲು ಮುಟ್ಟಿದೆ. ಕೇಂದ್ರ ಸೇವೆಗೆ ಸೇರಬೇಕು ಎಂಬ ಮೋದಿ ಸರ್ಕಾರದ ಸೂಚನೆ ಧಿಕ್ಕರಿಸಿದ್ದ ಮಮತಾ ಅವರ ನೆಚ್ಚಿನ ಅಧಿಕಾರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಲಾಪನ್‌ ಬಂಡೋಪಾಧ್ಯಾಯ ಅವರು ತಮ್ಮ ಸೇವಾ ನಿವೃತ್ತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಆಲಾಪನ್‌ ಅವರನ್ನು ಮಮತಾ ಅವರು ಮುಖ್ಯಮಂತ್ರಿಯ ಸಲಹೆಗಾರ ಎಂದು ಮುಂದಿನ 3 ವರ್ಷದ ಅವಧಿಗೆ ನೇಮಿಸಿ ಮಮತಾ ಘೋಷಣೆ ಮಾಡಿದ್ದಾರೆ.

ಈ ನಡುವೆ, ಕೇಂದ್ರದ ಸೂಚನೆ ಧಿಕ್ಕರಿಸಿದ ಕಾರಣಕ್ಕೆ ಆಲಾಪನ್‌ ಅವರಿಗೆ ಕೇಂದ್ರ ಸರ್ಕಾರ ನೋಟಿಸ್‌ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

'ಕಾಯಿಸಿ ಅವಮಾನಿಸಿದ್ದು ನಾನಲ್ಲ, ಮೋದಿ'

ಆಗಿದ್ದೇನು?:

ಪೂರ್ವನಿರ್ಧಾರದ ಪ್ರಕಾರ ಆಲಾಪನ್‌ ಮೇ 31ರಂದು ನಿವೃತ್ತಿ ಆಗಬೇಕಿತ್ತು. ಆದರೆ ಪ.ಬಂಗಾಳ ಸರ್ಕಾರದ ಸೂಚನೆ ಕೋರಿಕೆ ಮೇರೆಗೆ ಇತ್ತೀಚೆಗೆ ಕೇಂದ್ರ ಸರ್ಕಾರವು ಅವರಿಗೆ 3 ತಿಂಗಳ ಸೇವಾ ವಿಸ್ತರಣೆ ನೀಡಿತ್ತು.

ಈ ನಡುವೆ ಇತ್ತೀಚೆಗೆ ಮಮತಾ ಸರ್ಕಾರ ಹಾಗೂ ಮೋದಿ ಸರ್ಕಾರದ ನಡುವೆ ಚಂಡಮಾರುತ ಕುರಿತು ಸಂಘರ್ಷ ಏರ್ಪಟ್ಟಿತ್ತು. ಹೀಗಾಗಿ ಮೇ 28ರಂದು ಹಠಾತ್‌ ಅಲಪನ್‌ ಬಂಡೋಪಾಧ್ಯಾಯ ಅವರ ಸೇವೆ ತಮಗೆ ಬೇಕಾಗಿದ್ದು, ತಕ್ಷಣವೇ ಅವರನ್ನು ಬಿಟ್ಟುಕೊಡಿ ಎಂದು ಕೇಂದ್ರ ಸರ್ಕಾರ ಕೇಳಿತ್ತು. ಇದಕ್ಕೆ ಮಮತಾ ವಿರೋಧ ವ್ಯಕ್ತಪಡಿಸಿ, ಆಲಾಪನ್‌ ಅವರನ್ನು ರಿಲೀವ್‌ ಮಾಡುವುದಿಲ್ಲ ಎಂದು ಸೋಮವಾರ ಬೆಳಗ್ಗೆ ಖಡಾಖಂಡಿತವಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಸೋಮವಾರ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ಪತ್ರ ಬರೆದು, ಆಲಾಪನ್‌ ಅವರ ಸೇವೆ ಹಿಂಪಡೆಯುವಂತೆ ಕೇಂದ್ರ ಸರ್ಕಾರ ನೀಡಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದರು. ಇದರ ನಡುವೆ, ಕೇಂದ್ರ ಸರ್ಕಾರವು ಆಲಾಪನ್‌ ವಿರುದ್ಧ ಶಿಸ್ತುಕ್ರಮದ ಸಿದ್ಧತೆ ಆರಂಭಿಸಿತ್ತು.

ಈ ನಡುವೆ, ಸೋಮವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಮಮತಾ, ‘ಆಲಾಪನ್‌ ಅವರು ಸೋಮವಾರವೇ ನಿವೃತ್ತಿ ಹೊಂದುವ ಕೋರಿಕೆ ಸಲ್ಲಿಸಿದ್ದಾರೆ. ಅವರ ಕೋರಿಕೆ ಮನ್ನಿಸಲಾಗಿದೆ. ಇನ್ನು 3 ವರ್ಷಗಳ ಕಾಲ ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗುವುದು’ ಎಂದು ಘೋಷಿಸಿದರು.

ಮೋದಿ, ಗೌರ್ನರನ್ನೇ ಕಾಯಿಸಿದ ದೀದಿ: ಬಂಗಾಳಕ್ಕೆ ಹೋದ ಪ್ರಧಾನಿಗೆ ಅವಮಾನ!

‘ಆಲಾಪನ್‌ ಅವರಿಗೆ ಮಂಗಳವಾರದಿಂದ ದಿಲ್ಲಿಯ ನಾರ್ತ್ ಬ್ಲಾಕ್‌ಗೆ ಸೇರ್ಪಡೆಯಾಗುವಂತೆ ಕೇಂದ್ರ ಸೂಚಿಸಿತ್ತು. ಆದರೆ ರಾಜ್ಯದ ಒಪ್ಪಿಗೆ ಇಲ್ಲದೆ ಅಧಿಕಾರಿಯೋರ್ವರನ್ನು ಒತ್ತಾಯಪೂರ್ವಕವಾಗಿ ಕಳುಹಿಸುವಂತಿಲ್ಲ. ಇದು ಅಸಾಂವಿಧಾನಿಕ, ಏಕಪಕ್ಷೀಯ ನಿರ್ಧಾರ. ಅಲ್ಲದೆ ಈ ಸಂಬಂಧ ನಾನು ಬರೆದಿರುವ ಪತ್ರಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಿಲ್ಲ’ ಆರೋಪಿಸಿದರು.

click me!