
ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಅಜಿತ್ ಪವಾರ್ ಬಣದ ಎನ್ಸಿಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 10 ಗ್ಯಾರಂಟಿ ಗಳನ್ನು ಘೋಷಿಸಿದೆ. ಈ ಪ್ರಣಾಳಿಕೆಯನ್ನು ಬಾರಾಮತಿಯಲ್ಲಿ ಅಜಿತ್ ಪವಾರ್, ಮುಂಬೈನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುನಿಲ್ ತತ್ಕರೆ, ಗೊಂಡಿಯಾದಲ್ಲಿ ಕಾರ್ಯಾಧ್ಯಕ್ಷಪ್ರಫುಲ್ ಪಟೇಲ್ ಪ್ರತ್ಯೇಕವಾಗಿ ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯಡಿ ರಾಜ್ಯದ 2.3 ಕೋಟಿ ಮಹಿಳೆಯರಿಗೆ ಮಾಸಾಶನವನ್ನು ಹಾಲಿ 1500 ರು.ನಿಂದ 2100 ರು.ಗೆ ಏರಿಕೆ ಮಾಡುವುದು ಪ್ರಮುಖ ಭರವಸೆಯಾಗಿದೆ.
10 ಗ್ಯಾರಂಟಿಗಳು
1. ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯಡಿ ರಾಜ್ಯದ 2.3 ಕೋಟಿ ಮಹಿಳೆಯರಿಗೆ ಮಾಸಾಶನ ಹಾಲಿ 1500 ರು.ನಿಂದ 2100 ರು.ಗೆ ಏರಿಕೆ ಮಾಡುವುದು
2.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಧಿಯನ್ನು ಸಂಯೋಜಿಸಿ, ರೈತ (ಶೇತ್ಕರಿ) ಸಮ್ಮಾನ್ ನಿಧಿಯ ಮೊತ್ತ 12,000 ರೂ.ಗಳಿಂದ 15,000 ರೂ.ಗೆ ಏರಿಕೆ
3.ಅರ್ಹ ರೈತರ ಸಾಲ ಮನ್ನಾ ಹಾಗೂ ಭತ್ತ ಬೆಳೆಗಾರರಿಗೆ ಪ್ರತಿ ಎಕರೆಗೆ 25,000 ರು. ಬೋನಸ್ ನೀಡುವ ಭರವಸೆ
4.ಕನಿಷ್ಠ ಬೆಂಬಲ ಬೆಲೆಯ ಅಡಿ ಮಾರಾಟವಾಗುವ ಬೆಳೆಗಳಿಗೆ ಶೇ.20ರಷ್ಟು ಹೆಚ್ಚುವರಿ ಸಬ್ಸಿಡಿ ಎಂಬ ಘೋಷಣೆ
5.ಗ್ರಾಮೀಣ ಕೃಷಿ ಮೂಲಸೌಕರ್ಯ ಬಲವರ್ಧನೆಗೆ 45,000 ಪಕ್ಕಾ ರಸ್ತೆಗಳ ಅಭಿವೃದ್ಧಿಗೆ ಮುಂದಿನ 5 ವರ್ಷದಲ್ಲಿ ಕ್ರಮ
6.ರಾಜ್ಯಾದ್ಯಂತ 25 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ
7.ವೃತ್ತಿಪರ ತರಬೇತಿ ಮೂಲಕ 10 ಲಕ್ಷ ವಿದ್ಯಾರ್ಥಿಗಳಿಗೆ 10,000 ರು. ಸ್ಟೈಫಂಡ್, ಈ ಮೂಲಕ ಶಿಕ್ಷಣಕ್ಕೆ ಆದ್ಯತೆ
8.ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15,000 ರು. ವೇತನ, ಹಲವು ವರ್ಷದ ಬೇಡಿಕೆ ಈಡೇರಿಕೆ
9ವಿದ್ಯುತ್ ಬಿಲ್ ಶೇ.30ರಷ್ಟು ಕಡಿಮೆ ಮಾಡಿ, ವಿದ್ಯುತ್ ಹಾಗೂ ನವೀಕರಿಸಬಹುದಾದ ಶಕ್ತಿ ಮೂಲಗಳಿಗೆ ಆದ್ಯತೆ
10.ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕ್ರಮ
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ ವಿರೋಧವಿಲ್ಲ, ಸರಿಯಾಗಿ ಅನುಷ್ಠಾನ ಮಾಡಿ: ಸುದರ್ಶನ್ ಎಂ.
ಗಡಿಯಾರ ಚಿಹ್ನೆ ಬಳಕೆಗೆ ಸುಪ್ರೀಂ ಷರತ್ತು
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗಡಿಯಾರ ಚಿಹ್ನೆ ಬಳಕೆಗೆ ಎನ್ಸಿಪಿಯ ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಷರತ್ತು ವಿಧಿಸಿದೆ. ‘ಗಡಿಯಾರ ಚಿಹ್ನೆಯ ಬಳಕೆ ಬಗ್ಗೆ ಇನ್ನೂ ಕೋರ್ಟ್ ಅಂತಿಮ ನಿರ್ಣಯ ಕೈಗೊಂಡಿಲ್ಲ. ಇದಿನ್ನೂ ನ್ಯಾಯಾಂಗ ಪರಾಮರ್ಶೆಯ ವಿಷಯ ಎಂದು ಮರಾಠಿ ದಿನಪತ್ರಿಕೆಗಳು ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ 36 ಗಂಟೆಗಳ ಒಳಗೆ ಜಾಹೀರಾತು ಪ್ರಕಟಿಸಿ’ ಎಂದು ಕೋರ್ಟ್ ಸೂಚಿಸಿದೆ. ಗಡಿಯಾರ ಚಿಹ್ನೆ ತಮಗೆ ಬೇಕು ಎಂದು ಶರದ್ ಪವಾರ್ ಅವರ ಎನ್ಸಿಪಿ ಬಣ ಅರ್ಜಿ ಹಾಕಿದ್ದು, ಹೀಗಾಗಿ ಕೋರ್ಟ್ ಈ ಆದೇಶ ನೀಡಿದೆ.
ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ತಿಂಗಳಿಗೆ ₹3000: ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಗ್ಯಾರಂಟಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ