
ನವದೆಹಲಿ (ನ.07): ಕಾರು, ಜೀಪು ಮೊದಲಾದ ಲಘು ಮೋಟಾರು ವಾಹನ (ಎಲ್ಎಂವಿ) ಚಾಲನೆಗೆ ಪರವಾನಗಿ ಹೊಂದಿರುವವರು, 7500 ಕೆಜಿ ತೂಕದವರೆಗಿನ ಸರಕು ಸಾಗಣೆ ವಾಹನಗಳನ್ನು ಯಾವುದೇ ಹೊಸ ಅನುಮತಿ ಇಲ್ಲದೆಯೇ ಚಲಾಯಿಸಬಹುದು ಎಂದು ಸುಪ್ರೀಂಕೋರ್ಟ್ನ ಪಂಚಸದಸ್ಯರ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ. ಹೀಗಾಗಿ ಎಲ್ಎಂವಿ ಲೈಸೆನ್ಸ್ ಹೊಂದಿದ್ದವರು, ಸರಕು ಸಾಗಣೆ ವಾಹನ ಚಾಲನೆ ಮಾಡಿದ ವೇಳೆ ಸಂಭವಿಸುವ ಅಪಘಾತಗಳಿಗೆ ವಿಮಾ ಕಂಪನಿಗಳು ಪರಿಹಾರ ನಿರಾಕರಿಸುತ್ತಿ ಪ್ರಕರಣಗಳಿಗೆ ತೆರೆ ಬೀಳಲಿದೆ.
ಎಲ್ಎಂವಿ ಲೈಸೆನ್ಸ್ ಹೊಂದಿರುವ ವ್ಯಕ್ತಿಗಳು 7500 ಕೆಜಿ ತೂಕದವರೆಗಿನ ಸರಕು ಸಾಗಣೆ ವಾಹನ ಚಲಾಯಿಸಲು ಯಾವುದೇ ಹೆಚ್ಚುವರಿ ಅನುಮತಿ ಲೈಸೆನ್ಸ್ ಪಡೆಯಬೇಕಾದ್ದಿಲ್ಲ. ಎಲ್ಎಂವಿ ಮತ್ತು ಸರಕು ಸಾಗಣೆ ವಾಹನಗಳು ಸಂಪೂರ್ಣ ಪ್ರತ್ಯೇಕ ವರ್ಗಕ್ಕೆ ಸೇರಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠ ಹೇಳಿತು. ಆದರೆ ಅಪಾಯಕಾರಿ ವಸ್ತುಗಳನ್ನು ಸಾಗಣೆ ಮಾಡುವ ಇದೇ ತೂಕದ ಮಿತಿಯ ವಾಹನ ಚಾಲನೆ ಮಾಡುವವರು ಪ್ರತ್ಯೇಕ ಅನುಮತಿ ಪಡೆಯುವುದು ಅಗತ್ಯ ಎಂದು ಸ್ಪಷ್ಟಪಡಿಸಿತು.ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಕ್ಕೆ 1.7 ಲಕ್ಷ ಜನರು ಸಾವನ್ನಪುತ್ತಿದ್ದಾರೆ.
ಡಿಸಿ, ಎಸಿಗೆ ಧಮ್ಕಿ ಹಾಕಿದ್ದಾನೆ ಸಚಿವ ಜಮೀರ್: ಶಾಸಕ ಬಸನಗೌಡ ಯತ್ನಾಳ
ಇದಕ್ಕೆ ಎಲ್ಎಂವಿ ಲೈಸೆನ್ಸ್ ಹೊಂದಿರುವವರು ಸರಕು ಸಾಗಣೆ ವಾಹನ ಚಾಲನೆ ಮಾಡುತ್ತಿರುವುದೇ ಕಾರಣ ಎಂಬ ಅಭಿಪ್ರಾಯವಿದೆ. ಆದರೆ ಇದಕ್ಕೆ ಪೂರಕವಾಗುವಂತೆ ಯಾವುದೇ ಸಾಕ್ಷ್ಯಗಳನ್ನು ಯಾವುದೇ ಅರ್ಜಿದಾರರು ನೀಡಿಲ್ಲ. ಬದಲಾಗಿ ರಸ್ತೆ ಅಪಘಾತ ಮತ್ತು ಸಾವಿನ ಪ್ರಕರಣಗಳಿಗೆ ಅತಿವೇಗದ ಚಾಲನೆ, ರಸ್ತೆ ವಿನ್ಯಾಸ, ಸಂಚಾರ ನಿಯಮ ಪಾಲನೆ ಮಾಡದೇ ಇರುವುದು, ಚಾಲನೆ ವೇಳೆ ಮೊಬೈಲ್ ಬಳಸುವುದು, ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸದೇ ಇರುವುದೇ ಪ್ರಮುಖ ಕಾರಣ ಎಂದು ನ್ಯಾಯಪೀಠ ಹೇಳಿತು.ಚಾಲಕ ರಹಿತ ಕಾರುಗಳು ಕಾಲ್ಪನಿಕ ಕಥೆಗಳಾಗಿ ಉಳಿಯದೇ ವಾಸ್ತವ ರೂಪಕ್ಕೆ ಬಂದಿರುವ ಹೊತ್ತಿನಲ್ಲಿ ಲೈಸೆನ್ಸ್ ನಿಯಮಗಳು ಸ್ಥಿರವಾಗಿ ಉಳಿದಿರುವುದು ತರವಲ್ಲ.
ಈ ಸಂಬಂಧ ಮೋಟಾರು ವಾಹನ ಕಾಯ್ದೆಗೆ ತಂದಿರುವ ತಿದ್ದುಪಡಿಗಳು ಎಲ್ಲಾ ಸಂಭವನೀಯ ಕಳವಳಗಳನ್ನು ಗಮನಿಸದೇ ಇರಬಹುದು. ಆದರೆ ಶಾಸನದಲ್ಲಿ ಇಂಥ ನ್ಯೂನತೆಗಳನ್ನು ಸರಿಪಡಿಸಲು ಸರ್ಕಾರ ಕಾರ್ಯನಿರತವಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಹೀಗಾಗಿ ಸಾಂವಿಧಾನಿಕ ಪೀಠ ಸರ್ವಾನುಮತದಿಂದ ಎಲ್ವಿಎಂ ಲೈಸೆನ್ಸ್ ಹೊಂದಿದ್ದವರು ಕೂಡಾ ನಿಗದಿತ ಮಿತಿಯ ಸರಕು ಸಾಗಣೆ ವಾಹನ ಓಡಿಸಲು ಹೊಸದಾಗಿ ಅನುಮತಿ ಪಡೆಯಬೇಕಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ಹೇಳಿತು.
ಸಿದ್ದುಗೆ ತಾಕತ್ತಿದ್ದರೆ ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ಯಡಿಯೂರಪ್ಪ ಸವಾಲು
ಪ್ರಕರಣ ಹಿನ್ನೆಲೆ: ವಿವಿಧ ಅಪಘಾತ ಪ್ರಕರಣಗಳಲ್ಲಿ ಎಲ್ಎಂವಿ ಲೈಸೆನ್ಸ್ ಹೊಂದಿದ್ದವರು, ಸರಕು ಸಾಗಣೆ ವಾಹನೆ ಚಾಲನೆ ಮಾಡುತ್ತಿದ್ದರು ಎಂಬ ಕಾರಣಕ್ಕೆ ವಿಮಾ ಕಂಪನಿಗಳು ವಿಮೆ ನಿರಾಕರಿಸಿದ್ದವು. ಈ ಹಿನ್ನೆಲೆಯಲ್ಲಿ ಎಲ್ಎಂವಿ ಹೊಂದಿದ್ದವರು, 7500 ಕೆಜಿ ತೂಕದ ಸರಕು ಸಾಗಣೆ ವಾಹನೆ ಚಾಲನೆ ಮಾಡಬಹುದೇ ಇಲ್ಲವೇ ಎಂಬ ಮೂಲ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಈ ತೀರ್ಪಿನ ಮೂಲಕ ಸ್ಪಷ್ಟನೆಯನ್ನು ನ್ಯಾಯಾಲಯ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ