ಕ್ರಿಕೆಟಿಗ ಹರ್ಭಜನ್‌ ಸೇರಿ ಐವರು ಆಪ್‌ನಿಂದ ರಾಜ್ಯಸಭೆಗೆ

By Kannadaprabha NewsFirst Published Mar 22, 2022, 7:31 AM IST
Highlights

*ಏ.9ಕ್ಕೆ ಪಂಜಾಬ್‌ನ 5 ರಾಜ್ಯಸಭಾ ಸದಸ್ಯರ ನಿವೃತ್ತಿ
*ಅವರ ಜಾಗಕ್ಕೆ ಆಪ್‌ನ 5 ಅಭ್ಯರ್ಥಿಗಳ ಆಯ್ಕೆ ಖಚಿತ

ಚಂಡೀಗಢ (ಮಾ. 22):  ರಾಜ್ಯಸಭೆಯಲ್ಲಿ ಖ್ಯಾತ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರ ಅವಧಿ ಮುಗಿದ ಕೆಲ ವರ್ಷಗಳ ನಂತರ ಇದೀಗ ಇನ್ನೊಬ್ಬ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ರಾಜ್ಯಸಭೆಗೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಪಂಜಾಬ್‌ನಲ್ಲಿ ಇತ್ತೀಚೆಗೆ ಭಾರಿ ಬಹುಮತದೊಂದಿಗೆ ಜಯಗಳಿಸಿದ ಆಮ್‌ ಆದ್ಮಿ ಪಕ್ಷ (ಆಪ್‌) ಹರ್ಭಜನ್‌ ಸೇರಿದಂತೆ ಐದು ಮಂದಿಗೆ ರಾಜ್ಯಸಭೆ ಟಿಕೆಟ್‌ ನೀಡಿದೆ. ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳ ಪೈಕಿ 92ನ್ನು ಆಪ್‌ ಗೆದ್ದಿರುವುದರಿಂದ ಇವರೆಲ್ಲರೂ ಆಯ್ಕೆಯಾಗುವುದು ನಿಶ್ಚಿತ.

ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡದ ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಜೊತೆ ಲವ್ಲಿ ಪ್ರೊಫೆಷನಲ್‌ ಯುನಿವರ್ಸಿಟಿ ಸಂಸ್ಥಾಪಕ ಅಶೋಕ್‌ ಮಿತ್ತಲ್‌, ಆಪ್‌ ಶಾಸಕ ರಾಘವ್‌ ಚಡ್ಡಾ, ಐಐಟಿ ದೆಹಲಿಯ ಪ್ರೊಫೆಸರ್‌ ಸಂದೀಪ್‌ ಪಾಠಕ್‌ ಮತ್ತು ಉದ್ಯಮಿ ಸಂಜೀವ್‌ ಅರೋರಾ ಅವರಿಗೆ ಆಪ್‌ ಟಿಕೆಟ್‌ ನೀಡಿದ್ದು, ಇವರೆಲ್ಲರೂ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದರು. 

ಇದನ್ನೂ ಓದಿ: Punjab Cabinet: ಮಾನ್ ಸಂಪುಟದಲ್ಲಿ ಓರ್ವ ಮಹಿಳೆ, 2ನೇ ಬಾರಿ ಶಾಸಕರಾದವರ ನಿರ್ಲಕ್ಷ್ಯ!

ಮಾ.31ರಂದು ಆರು ರಾಜ್ಯಗಳ ವಿಧಾನಸಭೆಯಿಂದ 13 ರಾಜ್ಯಸಭಾ ಸೀಟುಗಳಿಗೆ ಚುನಾವಣೆ ನಡೆಯಲಿದೆ. ಅದರಲ್ಲಿ 5 ಪಂಜಾಬ್‌ನದ್ದಾಗಿದೆ. ಅದೇ ದಿನ ಮತ ಎಣಿಕೆ ನಡೆಯಲಿದೆ. ಏ.9ರಂದು 13 ರಾಜ್ಯಸಭಾ ಸದಸ್ಯರು ನಿವೃತ್ತಿಯಾಗಲಿದ್ದು, ಏ.2ರಂದೇ ಹೊಸ ಸದಸ್ಯರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಪಂಜಾಬ್‌ನಿಂದ ಶಿರೋಮಣಿ ಅಕಾಲಿದಳದ 2, ಕಾಂಗ್ರೆಸ್‌ನ 2 ಹಾಗೂ ಬಿಜೆಪಿಯ 1 ರಾಜ್ಯಸಭಾ ಸದಸ್ಯರು ನಿವೃತ್ತಿಯಾಗುತ್ತಿದ್ದಾರೆ. ಆಪ್‌ ಕಣಕ್ಕಿಳಿಸಿರುವ ಐವರಲ್ಲಿ ಹರ್ಭಜನ್‌ ಮಾತ್ರ ಪಂಜಾಬಿಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಮತ್ತು ಶಿರೋಮಣಿ ಅಕಾಲಿದಳ ಪಕ್ಷಗಳು ಆಪ್‌ ಪಂಜಾಬಿಗಳಿಗೆ ವಂಚನೆ ಮಾಡಿದೆ ಎಂದು ಕಿಡಿಕಾರಿವೆ.

ಕೆಲಸ ಮಾಡಿ ಇಲ್ಲವೇ ಹೊರಡಿ: ಪಂಜಾಬ್‌ ಸಚಿವರಿಗೆ ಕೇಜ್ರಿ ಫರ್ಮಾನು: : ‘ಪಂಜಾಬಿನ ಮುಖ್ಯಮಂತ್ರಿ ಭಗವಂತ್‌ ಮಾನ್‌ ತಮ್ಮ ಕ್ಯಾಬಿನೆಟ್‌ನಲ್ಲಿರುವ ಪ್ರತಿ ಸಚಿವರಿಗೂ ಗುರಿಗಳನ್ನು ನಿಗದಿಪಡಿಸಿದ್ದಾರೆ. ಸಚಿವರು ಆ ಗುರಿಯನ್ನು ಸಾಧಿಸುವಲ್ಲಿ ವಿಫಲವಾದರೆ ಜನರು ಸಚಿವರನ್ನು ಆ ಸ್ಥಾನದಿಂದ ವಜಾಗೊಳಿಸಲು ಒತ್ತಾಯಿಸಬಹುದಾಗಿದೆ’ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭಾನುವಾರ ಹೇಳಿದ್ದಾರೆ. ಈ ಮೂಲಕ ಸಚಿವರಿಗೆ ತೀಕ್ಷ$್ಣ ಎಚ್ಚರಿಕೆ ನೀಡಿದ್ದಾರೆ

ಇದನ್ನೂ ಓದಿ: ಪಂಜಾಬ್ ನಲ್ಲಿ ಭ್ರಷ್ಟಾಚಾರ ನಿಗ್ರಹ ಹೆಲ್ಪ್ ಲೈನ್, "ಇದೇ ನನ್ನ ವೈಯಕ್ತಿಕ ನಂಬರ್" ಎಂದ Bhagwant Mann!

ಶನಿವಾರ 10 ಸಚಿವರು ಕ್ಯಾಬಿನೆಟ್‌ನಲ್ಲಿ ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಾನ್‌ ಕಾರ್ಯನಿರ್ವಹಿಸುತ್ತಿರುವ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಜ್ರಿವಾಲ್‌ ‘ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೂರೇ ದಿನಗಳಲ್ಲಿ ಮಾನ್‌ ಬಹಳಷ್ಟುಕಾರ್ಯಗಳನ್ನು ಮಾಡುತ್ತಿದ್ದಾರೆ. ಹಳೆಯ ಸಚಿವರಿಗೆ ನೀಡಿದ ಭದ್ರತಾ ವ್ಯವಸ್ಥೆಯನ್ನು ಹಿಂಪಡೆದುಕೊಂಡ ಮಾನ್‌ ಜನರಿಗೆ ಭದ್ರತೆ ನೀಡುತ್ತಿದ್ದಾರೆ. ನಷ್ಟವಾದ ಬೆಳೆಗಳಿಗೆ ಪರಿಹಾರ ನೀಡಿದ್ದಾರೆ. ಭ್ರಷ್ಟಾಚಾರ ತಡೆಗೆ ಸಹಾಯವಾಣಿ ಘೋಷಿಸಿದ್ದಾರೆ. 10,000 ಪೊಲೀಸ್‌ ಸೇರಿದಂತೆ 25,000 ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದಾರೆ’ ಎಂದರು.

‘ಪಂಜಾಬಿನ ಜನರು ವಜ್ರಗಳನ್ನು ಆಯ್ದುಕೊಂಡಿದ್ದಾರೆ. ಮಾನ್‌ ನೇತೃತ್ವದಲ್ಲಿ ಈ 92 ಶಾಸಕರ ತಂಡವು ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ. ನಾನು ಮಾನ್‌ನ ಹಿರಿಯ ಸಹೋದರನಿದ್ದಂತೆ’ ಎಂದು ಹೇಳಿದರು.

ಕ್ರೀಡಾ ಸಾಧಕರಿಗೆ ಪದ್ಮ ಗೌರವ: ಭಾರತದ ತಾರಾ ಪ್ಯಾರಾ ಅಥ್ಲೀಟ್‌ ದೇವೇಂದ್ರ ಝಾಝರಿಯಾಗೆ ಸೋಮವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದಿದ್ದ ಶೂಟರ್‌ ಅವನಿ ಲೇಖರಾ, ತಾರಾ ಹಾಕಿ ಪಟು ವಂದನಾ ಕಟಾರಿಯಾ, ಜಮ್ಮು ಮತ್ತು ಕಾಶ್ಮೀರದ ಮಾರ್ಷಲ್‌ ಆಟ್ಸ್‌ರ್‍ ಕೋಚ್‌ ಫೈಸಲ್‌ ಅಲಿ ದಾರ್‌ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಈ ಸಾಲಿನಲ್ಲಿ ಒಟ್ಟು 9 ಕ್ರೀಡಾ ಸಾಧಕರು ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಉಳಿದ 5 ಮಂದಿಗೆ ಮಾ.28ರಂದು ಪ್ರಶಸ್ತಿ ವಿತರಿಸಲಾಗುತ್ತದೆ.

click me!