ದೇಶದಲ್ಲಿ ಒಂದೇ ದಿನ 8122 ಮಂದಿಗೆ ಕೊರೋನಾ, 10400 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್!

By Kannadaprabha NewsFirst Published Jun 17, 2020, 7:17 AM IST
Highlights

ದೇಶದಲ್ಲಿ ಕೊರೋನಾಗೆ 10000 ಬಲಿ| ನಿನ್ನೆ 324 ಮಂದಿ ಸಾವು| 8122 ಜನಕ್ಕೆ ಸೋಂಕು| 10400 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ನವದೆಹಲಿ(ಜೂ.17): ಲಾಕ್‌ಡೌನ್‌ ತೆರವು ಬಳಿಕ ಅಟ್ಟಹಾಸ ನಡೆಸುತ್ತಿರುವ ಕೊರೋನಾ ವೈರಸ್‌ಗೆ ಮಂಗಳವಾರ ಹೊಸದಾಗಿ 324 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 10,057ಕ್ಕೇರಿಕೆಯಾಗಿದೆ. ಸಾವಿಗೀಡಾದವದವಲ್ಲಿ ಶೇ.70ರಷ್ಟುಮಂದಿ ಈಗಾಗಲೇ ಬೇರೆ ಬೇರೆ ರೀತಿಯ ಕಾಯಿಲೆಯಿಂದ ಬಳಲುತ್ತಿರುವವರಾಗಿದ್ದರು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇದೇ ವೇಳೆ ಮಂಗಳವಾರ 8122 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 3,40,962ಕ್ಕೆ ಏರಿಕೆಯಾಗಿದೆ. ಸಮಾಧಾನಕರ ಸಂಗತಿಯಂದರೆ ಒಂದೇ ದಿನ 10409 ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಹೊಸ ಸೋಂಕಿಗಿಂತ ಚೇತರಿಕೆಯಾದವರ ಪ್ರಮಾಣ ಹೆಚ್ಚಳವಾಗಿದೆ. 1,53,178 ಸಕ್ರಿಯ ಪ್ರಕರಣಗಳು ಇದ್ದರೆ, 1,80,012 ಮಂದಿ ಗುಣಮುಖರಾಗಿದ್ದಾರೆ. ಚೇತರಿಕೆಯ ಪ್ರಮಾಣ ಶೇ.52ರಷ್ಟಿದೆ.

ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ

ಈ ಮಧ್ಯೆ ದೇಶದಲ್ಲಿ ದೈನಂದಿನ ಕೊರೋನಾ ಪರೀಕ್ಷೆಯ ಸಾಮರ್ಥ್ಯವನ್ನು 3 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 659 ಸರ್ಕಾರಿ ಪ್ರಯೋಗಾಲಯಗಳು ಮತ್ತು 248 ಖಾಸಗಿ ಲ್ಯಾಬ್‌ಗಳು ಸೇರಿದಂತೆ ಒಟ್ಟು 907 ಲ್ಯಾಬ್‌ಗಳಲ್ಲಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈವರೆಗೆ ಒಟ್ಟು 59,21,069 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಯಾವ ರಾಜ್ಯ ಎಷ್ಟುಸಾವು?

ಮಹಾರಾಷ್ಟ್ರ 4128

ಗುಜರಾತ್‌ 1505

ದೆಹಲಿ 1400

ಪಶ್ಚಿಮ ಬಂಗಾಳ 485

ತಮಿಳುನಾಡು 479

ಮಧ್ಯ ಪ್ರದೇಶ 465

ಉತ್ತರ ಪ್ರದೇಶ 399

ಕರ್ನಾಟಕ 98

ಈ ಪೈಕಿ ಮಹಾರಾಷ್ಟ್ರದಲ್ಲಿ ಅತ್ಯಧಿಕ 4,128 ಮಂದಿ ಸಾವಿಗೀಡಾಗಿದ್ದಾರೆ. ಗುಜರಾತ್‌ನಲ್ಲಿ 1,505, ದೆಹಲಿಯಲ್ಲಿ 1,400, ಪಶ್ಚಿಮ ಬಂಗಾಳದಲ್ಲಿ 485, ತಮಿಳುನಾಡಿನಲ್ಲಿ 479, ಮಧ್ಯ ಪ್ರದೇಶದಲ್ಲಿ 465, ಉತ್ತರ ಪ್ರದೇಶದಲ್ಲಿ 399, ಕರ್ನಾಟಕದಲ್ಲಿ 88 ಮಂದಿ ಸಾವಿಗೀಡಾಗಿದ್ದಾರೆ. ಸಾವಿಗೀಡಾದವದವಲ್ಲಿ ಶೇ.70ರಷ್ಟುಮಂದಿ ಈಗಾಗಲೇ ಬೇರೆ ಬೇರೆ ರೀತಿಯ ಕಾಯಿಲೆಯಿಂದ ಬಳಲುತ್ತಿರುವವರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದಿಲ್ಲಿ ಆರೋಗ್ಯ ಸಚಿವಗೆ ಜ್ವರ: ಆಸ್ಪತ್ರೆಗೆ ದಾಖಲು, ಕೊರೋನಾ ವೈರಸ್‌ ಇಲ್ಲ!

ರಾಜ್ಯದಲ್ಲಿ ಕೊರೋನಾ ಬಂದು 100ನೇ ದಿನ, 98 ಸಾವು

ಬೆಂಗಳೂರು: ಕರ್ನಾಟಕಕ್ಕೆ ಕೊರೋನಾ ಕಾಲಿಟ್ಟು ಮಂಗಳವಾರ 100 ದಿನವಾಗಿದ್ದು ಈವರೆಗೆ ಒಟ್ಟು 98 ಮಂದಿ ಸಾವನ್ನಪ್ಪಿದ್ದಾರೆ. ಮಂಗಳವಾರ ಒಟ್ಟು 7 ಮಂದಿ ಬಲಿಯಾಗಿದ್ದು 317 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇದೀಗ 7530ಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ವಿವರ ಪುಟ 6

ರಾಜ್ಯದಲ್ಲಿ ಸೋಂಕಿಗೆ ಮೊದಲ ಪೊಲೀಸ್‌ ಬಲಿ

ಕೊರೋನಾ ಸೋಂಕು ರಾಜ್ಯದಲ್ಲಿ ಇದೀಗ ಕೊರೋನಾ ವಾರಿಯರ್ಸ್‌ ಆಗಿರುವ ಪೊಲೀಸರನ್ನು ಬಲಿಪಡೆಯಲು ಆರಂಭಿಸಿದೆ. ಕರ್ನಾಟಕದಲ್ಲಿ ಸೋಂಕಿಗೆ ಮೊದಲ ಪೊಲೀಸ್‌ ಕಾನ್ಸ್‌ಟೇಬಲ್‌ ಮೃತಪಟ್ಟಿದ್ದಾರೆ. 4 ತಿಂಗಳಲ್ಲಿ ನಿವೃತ್ತರಾಗಬೇಕಿದ್ದ ಬೆಂಗಳೂರು ವಿವಿ ಪುರಂ ಪೊಲೀಸ್‌ ಠಾಣೆಯ 59 ವರ್ಷದ ಎಎಸ್‌ಐ ಬಲಿಯಾಗಿದ್ದಾರೆ. ವಿವರ ಪುಟ 7

ವಿಕಾಸಸೌಧಕ್ಕೂ ಕೊರೋನಾ ಎಂಟ್ರಿ

ರಾಜ್ಯ ಸರ್ಕಾರದ ಶಕ್ತಿಕೇಂದ್ರವಾಗಿರುವ ವಿಕಾಸಸೌಧಕ್ಕೂ ಕೊರೋನಾ ಪ್ರವೇಶ ಪಡೆದಿದೆ. ವಿಕಾಸಸೌಧದ ಮೊದಲ ಮಹಡಿಯಲ್ಲಿರುವ ಆಹಾರ ಇಲಾಖೆಯ ಮಹಿಳಾ ನೌಕರೆಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ 5 ಕಚೇರಿಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

click me!