Voter Enrollment: ಇನ್ನು ವರ್ಷಕ್ಕೆ 4 ಸಲ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ?

By Kannadaprabha NewsFirst Published Dec 13, 2021, 8:21 AM IST
Highlights

*ಕೇಂದ್ರ ಸರ್ಕಾರದ ಸಿದ್ಧತೆ, ಸಂಸದೀಯ ಸಮಿತಿಗೆ ಮಾಹಿತಿ
*ಜ.1, ಏ.1, ಜು.1, ಅ.1ಕ್ಕೆ ಪ್ರತಿ ಸಲದ ಕಟಾಫ್‌ ದಿನಾಂಕ
*ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್‌ 14(ಬಿ)ಕ್ಕೆ ತಿದ್ದುಪಡಿ

ನವದೆಹಲಿ (ಡಿ. 13): 18 ವರ್ಷ ತುಂಬಿದ ಹೊಸ ಮತದಾರರಿಗೆ (Voter Enrollment) ವರ್ಷಕ್ಕೆ ಒಮ್ಮೆ ಮಾತ್ರ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಇರುವ ಅವಕಾಶವನ್ನು ವರ್ಷಕ್ಕೆ ನಾಲ್ಕು ಸಲಕ್ಕೆ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ( Representation of the People Act) ತರಲು ಮಾಡಿಕೊಂಡಿರುವ ಸಿದ್ಧತೆಯ ಬಗ್ಗೆ ಕಾನೂನು ಸಚಿವಾಲಯವು ಸಂಸದೀಯ ಸಮಿತಿಗೆ (Parliamentary Committee) ಮಾಹಿತಿ ನೀಡಿದೆ. ಸದ್ಯ ಯಾವುದೇ ವರ್ಷ ನಡೆಯುವ ಚುನಾವಣೆಗೆ ಚುನಾವಣಾ ಆಯೋಗವು (Election Comission) ಮತದಾರರ ಪಟ್ಟಿಪರಿಷ್ಕರಣೆ ಮಾಡುವಾಗ ಹೊಸ ಮತದಾರರ ಸೇರ್ಪಡೆಗೆ ಜ.1ರ ಕಟ್‌-ಆಫ್‌ ದಿನಾಂಕ ನಿಗದಿಪಡಿಸಲಾಗಿದೆ. ಅಂದರೆ ಆ ವರ್ಷದ ಚುನಾವಣೆಯಲ್ಲಿ ವ್ಯಕ್ತಿಯೊಬ್ಬ ಮತದಾನ ಮಾಡಬೇಕು ಅಂದರೆ ಅವರಿಗೆ ಜ.1ಕ್ಕಿಂತ ಮೊದಲು 18 ವರ್ಷ ತುಂಬಿರಬೇಕು.

ಜ.2ಕ್ಕೆ 18 ವರ್ಷ ತುಂಬಿದರೂ ಆ ವರ್ಷವಿಡೀ ಯಾವುದೇ ಚುನಾವಣೆ ನಡೆದರೂ ಅವರು ಮತದಾನ ಮಾಡಲು ಅಥವಾ ಆ ವರ್ಷ ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ಆಗುವುದಿಲ್ಲ. ಇದರಿಂದ ದೇಶಾದ್ಯಂತ ಸಾಕಷ್ಟುಅರ್ಹ ಮತದಾರರು ಮತದಾನದ ಹಕ್ಕು ಚಲಾಯಿಸುವುದರಿಂದ ವಂಚಿತರಾಗುತ್ತಾರೆ. ಹೀಗಾಗಿ ಇನ್ನುಮುಂದೆ ಜ.1, ಏ.1, ಜು.1 ಮತ್ತು ಅ.1 ಎಂಬ ನಾಲ್ಕು ಕಟ್‌-ಆಫ್‌ ದಿನಾಂಕ ನಿಗದಿಪಡಿಸಿ, ಆ ದಿನಾಂಕದೊಳಗೆ 18 ವರ್ಷ ತುಂಬಿದರೆ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್‌ 14(ಬಿ)ಕ್ಕೆ ತಿದ್ದುಪಡಿ

ಇದಕ್ಕಾಗಿ ಕೇಂದ್ರ ಸರ್ಕಾರವು ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್‌ 14(ಬಿ)ಕ್ಕೆ ತಿದ್ದುಪಡಿ ತರಲಿದೆ. ಈ ತಿದ್ದುಪಡಿ ತರಬೇಕೆಂದು ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಸರ್ಕಾರಕ್ಕೆ ಬಹುಕಾಲದಿಂದ ಮನವಿ ಮಾಡುತ್ತಿತ್ತು. ಇದೀಗ ಕಾನೂನು ಸಚಿವಾಲಯವು ಕರಡು ಸಿದ್ಧಪಡಿಸುತ್ತಿದ್ದು, ಅದಕ್ಕಾಗಿ ಕ್ಯಾಬಿನೆಟ್‌ ನೋಟ್‌ (Cabinet Note) ತಯಾರಿಸಿದೆ. ಅದರಲ್ಲಿ ನಾಲ್ಕು ಕಟ್‌-ಆಫ್‌ (Cut Off) ದಿನಾಂಕ ನಿಗದಿಪಡಿಸುವುದರ ಜೊತೆಗೆ ಇನ್ನೂ ಕೆಲ ಪ್ರಮುಖ ಚುನಾವಣಾ ಸುಧಾರಣೆಗಳ ಪ್ರಸ್ತಾವನೆಯೂ ಇದೆ ಎಂದು ತಿಳಿಸಲಾಗಿದೆ.

ಫಲಿತಾಂಶಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ

ನ್ಯಾಯಾಲಯದ(Court) ಅನುಮತಿ ಇಲ್ಲದೆ ವಿಧಾನ ಪರಿಷತ್ತಿನ(Vidhan Parishat Election) ಬೆಂಗಳೂರು(Bengaluru) ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯ ಫಲಿತಾಂಶ(Result) ಪ್ರಕಟಿಸಬಾರದು ಎಂದು ಹೈಕೋರ್ಟ್‌(High Court) ಏಕ ಸದಸ್ಯ ನ್ಯಾಯಪೀಠ ಗುರುವಾರಷ್ಟೇ ಹೊರಡಿಸಿದ ಮಧ್ಯಂತರ ಆದೇಶ ಪ್ರಶ್ನಿಸಿ ಚುನಾವಣಾ ಆಯೋಗ ಮೇಲ್ಮನವಿ ಸಲ್ಲಿಸಿದೆ. ಶುಕ್ರವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಚುನಾವಣಾ ಆಯೋಗದ (Election Commission) ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು ಹಾಜರಾಗಿ, ತುರ್ತು ಇರುವುದರಿಂದ ಮೇಲ್ಮನವಿಯನ್ನು(Appeal) ಇಂದೇ (ಶುಕ್ರವಾರ) ವಿಚಾರಣೆಗೆ ಪರಿಗಣಿಸುವಂತೆ ಕೋರಿದರು.

ಇದನ್ನೂ ಓದಿ: Bank Deposit Insurance: ಬ್ಯಾಂಕ್‌ಗಳು ನಷ್ಟಕ್ಕೆ ಒಳಗಾದರೂ ಠೇವಣಿ ಹಣ ಸುರಕ್ಷಿತ: ಮೋದಿ

ಅದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ಪೀಠ, ಏಕಸದಸ್ಯ ನ್ಯಾಯಪೀಠದ ಆದೇಶದಿಂದ ಚುನಾವಣೆಗೆ ಅಡ್ಡಿ ಆಗಿಲ್ಲ. ನಿಗದಿಯಂತೆ ಚುನಾವಣೆ ನಡೆದಿದೆ. ಮತ ಎಣಿಕೆ ಡಿ.14ರಂದು ನಡೆಯಲಿದೆ. ಆದ್ದರಿಂದ ಇನ್ನೂ ಸಮಯವಿದ್ದು, ಡಿ.13ರಂದು ಮೇಲ್ಮನವಿಯ ವಿಚಾರಣೆ ನಡೆಸುವುದಾಗಿ ತಿಳಿಸಿತು.

ವಿಧಾನ ಪರಿಷತ್ತಿನ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಕಲ್ಪಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶ ಪ್ರಶ್ನಿಸಿ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಗುರುವಾರ (ಡಿ.9) ವಿಚಾರಣೆ ನಡೆಸಿತ್ತು. ಜತೆಗೆ, ನಾಮನಿರ್ದೇಶಿತ ಸದಸ್ಯರಿಗೆ ಮತದಾನಕ್ಕೆ(Vote) ಅವಕಾಶ ಮಾಡಿಕೊಟ್ಟಏಕಸದಸ್ಯ ನ್ಯಾಯಪೀಠ, ನ್ಯಾಯಾಲಯದ ಅನುಮತಿ ಇಲ್ಲದೆ ಫಲಿತಾಂಶ ಪ್ರಕಟಿಸಬಾರದು ಎಂದು ಮಧ್ಯಂತರ ಆದೇಶ ನೀಡಿತ್ತು.

ಇದನ್ನೂ ಓದಿ: Karnataka Legislature Session: 10 ದಿನ ವಿಧಾನಮಂಡಳ ಚಳಿಗಾಲ ಅಧಿವೇಶನ: ಕುಂದಾನಗರಿಯಲ್ಲಿ ಸಕಲ ಸಿದ್ಧತೆ!

click me!