
ಅಲಿಗಢ: ರೇಬಿಸ್ ಸೋಂಕಿಗೊಳಗಾದ ನಾಯಿ ಕಚ್ಚಿ 3 ವರ್ಷದ ಕಂದ ಸಾವನ್ನಪ್ಪಿದ ಮನಕಲುಕುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ನಾಯಿ ಕಚ್ಚಿ 45 ದಿನದ ನಂತರ ಮಗು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ನಾಯಿ ಇನ್ನೂ 10 ಮಕ್ಕಳ ಮೇಲೆಯೂ ದಾಳಿ ಮಾಡಿದೆ. ಅವರೂ ಕೂಡ ಇಲ್ಲಿಯವರೆಗೆ ಈ ನಾಯಿ ಕಚ್ಚಿರುವುದಕ್ಕೆ ಚಿಕಿತ್ಸೆ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂತ್ರಸ್ತ ಮಗುವನ್ನು ಅಂಶು ಎಂದು ಗುರುತಿಸಲಾಗಿದೆ. ರೇಬಿಸ್ನಿಂದಾಗಿ ಈ ಮಗು ತನ್ನ ಗ್ರಾಮದ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಚರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ನಾಥ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಗುವಿನ ಕುಟುಂಬವು ಅವರ ಸಾವಿಗೆ ಕೆಲವು ದಿನಗಳ ಮೊದಲು, ಮುಂದುವರಿದ ರೇಬೀಸ್ನ ಸಂಕೇತವಾದ ಹೈಡ್ರೋಫೋಬಿಯಾ ಎಂದರೆ ನೀರಿನ ಭಯ ದಂತಹ ವಿಚಿತ್ರ ಲಕ್ಷಣಗಳನ್ನು ಮಗು ತೋರಿಸಲು ಪ್ರಾರಂಭಿಸಿತು ಎಂದು ಹೇಳಿದ್ದಾರೆ. ಮಗುವಿನ ಸಾವಿನ ನಂತರ ಸುಮಾರು 10 ಮಕ್ಕಳ ಮೇಲೆ ಅದೇ ಹುಚ್ಚು ನಾಯಿ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ. ಇದರ ನಂತರ, ಆರೋಗ್ಯ ಅಧಿಕಾರಿಗಳ ತಂಡ ಶುಕ್ರವಾರ ಗ್ರಾಮಕ್ಕೆ ಧಾವಿಸಿ ತಪಾಸಣೆ ನಡೆಸಿದೆ.
ಅತ್ಯಂತ ಕಳವಳಕಾರಿ ವಿಚಾರವೊಂದರಲ್ಲಿ, ವೈದ್ಯಕೀಯ ತಂಡವು 2 ರಿಂದ 12 ವರ್ಷ ವಯಸ್ಸಿನ ಇತರ ಹತ್ತು ಮಕ್ಕಳಲ್ಲಿ ಯಾರೂ ಕೂಡ ಈ ರೇಬಿಸ್ ನಾಯಿಯಿಂದ ದಾಳಿಗೊಳಗಾದ ನಂತರ ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲಿಲ್ಲ ಎಂದು ಕಂಡು ಹಿಡಿದಿದೆ. ನಾವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ರೇಬೀಸ್ ವಿರೋಧಿ ಲಸಿಕೆಗಳಂತಹ ಎಲ್ಲಾ ತಡೆಗಟ್ಟುವ ಕ್ರಮಗಳಿಗಾಗಿ ಚಾಲನೆ ನೀಡಿದ್ದೇವೆ ಎಂದು ಅಲಿಘರ್ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ (ಸಿಎಮ್ಒ) ಡಾ. ನೀರಜ್ ತ್ಯಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ 3 ವರ್ಷದ ಮಗು ಅನ್ಶು ಸಾವಿಗೆ ರೇಬೀಸ್ ಕಾರಣ ಎಂಬುದನ್ನು ಖಚಿತವಾಗಿ ದೃಢೀಕರಿಸಲು ಸಾಧ್ಯವಿಲ್ಲ ಎಂದು ಸಿಎಂಒ ಹೇಳಿದೆ.
ಮೊದಲನೆಯದಾಗಿ, ಘಟನೆಯ ನಂತರ ಈ ರೇಬಿಸ್ ಸೋಂಕಿಗೊಳಗಾದ ನಾಯಿಯನ್ನು ಕೊಲ್ಲಲಾಗಿದೆ. ಹೀಗಾಗಿ ನಾವು ನಾಯಿಯ ಮೇಲೆ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಅದೇ ರೀತಿ, ನಾವು ಸತ್ತ ಮಗುವನ್ನು ಸಾಯುವ ಮೊದಲು ಪರೀಕ್ಷಿಸಲು ಮತ್ತು ಯಾವುದೇ ರೋಗನಿರ್ಣಯವನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ, ಎಂದು ಅವರು ವಿವರಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸಹ ಈ ರೋಗವನ್ನು ನಿಭಾಯಿಸಲು ಸಾಕಷ್ಟು ರೇಬೀಸ್ ಲಸಿಕೆಗಳು ಲಭ್ಯವಿದೆ ಎಂದು ಅವರು ಸಾರ್ವಜನಿಕರಿಗೆ ಇದೇ ವೇಳೆ ಭರವಸೆ ನೀಡಿದ್ದಾರೆ.
ಗೋಡೆ ಕುಸಿದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದವ ಸಾವು
ನವದೆಹಲಿ: 5 ಅಂತಸ್ಥಿನ ಕಟ್ಟಡದ ಗೋಡೆಯೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ ಒಬ್ಬರು ಸಾವನ್ನಪ್ಪಿ ಮೂವರು ಗಾಯಗೊಂಡಂತಹ ಆಘಾತಕಾರಿ ಘಟನೆ ದೆಹಲಿಯ ಚಂದೇರ್ ವಿಹಾರ್ನಲ್ಲಿ ನಡೆದಿದೆ. ಈ ಘಟನೆಯ ದೃಶ್ಯಾವಳಿ ಈಗ ಅಲ್ಲಿನ ಸಿಸಿ ಕ್ಯಾಮರಾವೊಂದರಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಶುಕ್ರವಾರ ದೆಹಲಿಯಲ್ಲಿ ಅತೀ ಅಪರೂಪದ ಧೂಳಿನ ಸುಂಟರಗಾಳಿ ಸಂಭವಿಸಿತ್ತು. ಇದೇ ಸಮಯದಲ್ಲಿ ನಡೆದ ಘಟನೆ ಇದಾಗಿದ್ದು, ಇದರ ವೀಡಿಯೋ ಈಗ ವೈರಲ್ ಆಗುತ್ತಿದೆ. ಜನಸಂದಣಿಯ ರಸ್ತೆಯ ಮೇಲೆ ಐದಂತಸ್ಥಿನ ಕಟ್ಟಡದ ಗೋಡೆಯೊಂದು ಇದ್ದಕ್ಕಿದ್ದಂತೆ ಬಿದ್ದಿದ್ದು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದವರ ಪಾಲಿಗೆ ಯಮಸ್ವರೂಪಿಯಾಗಿದೆ. ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಂದರ್ ವಿಹಾರ್ನ ಬೀದಿಯಲ್ಲಿ ಜನ ಎಂದಿನಂತೆ ನಡೆದು ಹೋಗುತ್ತಿದ್ದಾಗ ಕಟ್ಟಡದ ಒಂದು ಭಾಗವು ಮೇಲಿನಿಂದ ಕುಸಿದು ಬಿದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ