1993 ಮುಂಬೈ ಬಾಂಬ್ ಬ್ಲಾಸ್ಟ್ ಕೇಸ್ ಆರೋಪಿಯಿಂದ ಉದ್ಧವ್ ಠಾಕ್ರೆ ಅಘಾಡಿ ಪಕ್ಷದ ಪರ ಪ್ರಚಾರ

By Anusha KbFirst Published May 9, 2024, 3:54 PM IST
Highlights

ಮಹಾರಾಷ್ಟ್ರದಲ್ಲಿ 1993 ಬಾಂಬೆ ಬ್ಲಾಸ್ ಪ್ರಕರಣದ ಆರೋಪಿ ಇಬ್ರಾಹಿಂ ಮೂಸಾ ಪಕ್ಷವೊಂದರ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮುಂಬೈ: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಈಗಾಗಲೇ ಮುಗಿದಿದ್ದು, ಇನ್ನು 4 ಹಂತಗಳಲ್ಲಿ ಚುನಾವಣೆ ನಡೆಯಬೇಕಿದೆ. ಚುನಾವಣೆ ಆಗದೇ ಇರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರದಲ್ಲಿ 1993 ಬಾಂಬೆ ಬ್ಲಾಸ್ ಪ್ರಕರಣದ ಆರೋಪಿ ಇಬ್ರಾಹಿಂ ಮೂಸಾ ಪಕ್ಷವೊಂದರ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

1993 ಬಾಂಬೆ ಬ್ಲಾಸ್ಟ್ ಪ್ರಕರಣದ ಆರೋಪಿ ಇಬ್ರಾಹಿಂ ಮೂಸಾ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(MVA)ಪಕ್ಷದ ಅಭ್ಯರ್ಥಿ ಅಮೊಲ್ ಕಿರ್ತಿಕರ್ ಪರ ಮುಂಬೈನಲ್ಲಿ ಬುಧವಾರ ಪ್ರಚಾರ ಮಾಡಿದ್ದಾರೆ.  ಅಮೊಲ್ ಕಿರ್ತಿಕರ್ ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಿಂದ ಮಹಾ ವಿಕಾಸ್ ಅಘಾಡಿ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಮೂಸಾ ಅವರು ಕಿರ್ತಿಕರ್ ಪರ ಪ್ರಚಾರ ಮಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

1993 ಮುಂಬೈ ಬಾಂಬ್ ಬ್ಲಾಸ್ಟ್ ಕೇಸ್ ಆರೋಪಿಯಿಂದ ಉದ್ಧವ್ ಠಾಕ್ರೆ ಅಘಾಡಿ ಪಕ್ಷದ ಪರ ಪ್ರಚಾರ

ಈ ವಿಚಾರ ಈಗ ಮಹಾ ವಿಕಾಸ್ ಅಘಾಡಿ ಪಕ್ಷಕ್ಕೆ ಬಿಸಿತುಪ್ಪದಂತಾಗಿದೆ. ಇದೇ ಕ್ಷೇತದಲ್ಲಿ ಕಣದಲ್ಲಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಕೂಡ ಮೂಸಾ ಮಹಾ ವಿಕಾಸ್ ಅಘಾಡಿ ಪಕ್ಷದ ಪರ ಪ್ರಚಾರ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಧೇರಿ ಪಶ್ಚಿಮದಲ್ಲಿ ಮೂಸಾ ಅಮೊಲ್ ಕಿರ್ತಿಕರ್ ಪರ ಪ್ರಚಾರ ಮಾಡಿದ್ದು, ಈ ಬಗ್ಗೆ ಬಿಜೆಪಿ ಶಾಸಕ ಅಮೀತ್ ಸತಂ ಪ್ರತಿಕ್ರಿಯಿಸಿದ್ದು, 'ನಿನ್ನೆ ಸಂಜೆ ಅಂಧೇರಿ ಪಶ್ಚಿಮದಲ್ಲಿ 1993ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಬಾಬಾ ಮೂಸಾ ಮುಂಬೈ ವಾಯುವ್ಯ ಕ್ಷೇತ್ರದ ಎಂವಿಎಯ ಅಭ್ಯರ್ಥಿ, ಅಮೋಲ್ ಕಿರ್ತಿಕರ್‌ ಅವರನ್ನು ಬೆಂಬಲಿಸಿ ಫೀಲ್ಡಿಗಿಳಿದ್ದಾರೆ. ಈ ಮೂಲಕ ಇದು ಕೇವಲ ರಾಷ್ಟ್ರೀಯವಾದಿಗಳು ಹಾಗೂ ತುಕ್ಡೇ ತುಕ್ಡೇ ಗ್ಯಾಂಗ್ ನಡುವಣ ಸ್ಪರ್ಧೆ ಅಲ್ಲ, ಇದು ಇಂಡಿಯಾ ಪಾಕಿಸ್ತಾನ ನಡುವಣ ಸ್ಪರ್ಧೆ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗುತ್ತಿದೆ. ಮುಂಬೈನಲ್ಲಿ ಹತ್ಯೆಕೋರರ ಜೊತೆ ಕಾಂಗ್ರೆಸ್‌ ಕೈ ಇದೆ. ಮುಂಬೈ ಜನರನ್ನು ಸುಡಲು ಬಯಸುವಂತಹ ಈ ಟಾರ್ಚ್‌ನ್ನು ಪ್ರತಿಯೊಬ್ಬರು ಗುರುತಿಸಬೇಕು' ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

ಮೂಸಾ ಆಲಿಯಾಸ್ ಬಾಬಾ ಚೌಹಾಣ್ 1993ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ದೋಷಿಯಾಗಿದ್ದು, ಸರಣಿ ಸ್ಫೋಟಕ್ಕೂ ಮೊದಲು ಸಂಜಯ್ ದತ್‌ ಮನೆಗೆ ಶಸ್ತ್ರಾಸ್ತ್ರಗಳ ಸಾಗಿಸಿದ ಆರೋಪವಿದೆ. ಪ್ರಾಸಿಕ್ಯೂಷನ್ ಪ್ರಕಾರ,  1993 ಜನವರಿ 15 ರಂದು ಈ ಇಬ್ರಾಹಿಂ ಮೂಸಾ, ಗ್ಯಾಂಗ್‌ಸ್ಟಾರ್ ಅಬು ಸಲೇಂ ಹಾಗೂ ಇತರರು ಸಂಜಯ್ ದತ್ ಮನೆಗೆ ಹೋಗಿ ನಾಳೆ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುವುದು ಎಂದು ಮಾಹಿತಿ ನೀಡಿದ್ದರು. 

ರಾಮೇಶ್ವರಂ ಕೆಫೆ ಸ್ಫೋಟದ ಮತ್ತೊಂದು ಎಕ್ಸ್​ಕ್ಲೂಸಿವ್​: ಶಂಕಿತ ಉಗ್ರರ ಟ್ರಾವೆಲ್ ಹಿಸ್ಟರಿ ಹೇಗಿತ್ತು ಗೊತ್ತಾ.!?

ನಂತರ ಶಸ್ತ್ರಾಸ್ತ್ರಗಳನ್ನು ಅಲ್ಲಿಂದ ತೆಗೆಯಲಾಗಿತ್ತು. ಆದರೆ ಎಕೆ-47 ರೈಫಲ್ ಒಂದು ಮಾತ್ರ ಸಂಜಯ್ ದತ್ ಮನೆಯಲ್ಲಿ ಸಿಕ್ಕಿತ್ತು, ಇದರಿಂದ ಸಂಜಯ್‌ದತ್‌ ಈ ಪ್ರಕರಣದಲ್ಲಿ ಆರೋಪಿಯಾಗಿ ಜೈಲುವಾಸವನ್ನು ಅನುಭವಿಸಿದ್ದರು, ಇತ್ತ ಈ ಸೀರಿಯಲ್ ಬ್ಲಾಸ್‌ನಲ್ಲಿ 257 ಜನ ಮೃತಪಟ್ಟು 700 ಅಧಿಕ ಮಂದಿ ಗಾಯಗೊಂಡಿದ್ದರು. 

ಬಿಜೆಪಿ, ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಈ ಮೂರು ಪಕ್ಷಗಳ ನೇತೃತ್ವದ ಮಹಾಯುತಿಯೂ ಮುಂಬೈ ವಾಯುವ್ಯದಿಂದ ರವೀಂದ್ರ ವೈಕರ್ ಅವರನ್ನು ಕಣಕ್ಕಿಳಿಸಿದೆ ಹಾಗೂ ಇತ್ತ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಪಕ್ಷವೂ ಅಮೋಲ್ ಕಿರ್ತಿಕರ್ ಅವರನ್ನು ಕಣಕ್ಕಿಳಿಸಿದ್ದು, ಈ ಕ್ಷೇತ್ರದಲ್ಲಿ ಇತ್ತಂಡಗಳ ಮಧ್ಯೆ ನೇರಾ ಹಣಾಹಣಿ ಇದೆ. 

ಪೂರ್ವ ಜೋಗೇಶ್ವರಿ, ದಿಂಡೋಶಿ, ಗೋರೆಗಾಂವ್, ವೆರ್ಸೊವಾ, ಅಂಧೇರಿ ಪೂರ್ವ ಅಂಧೇರಿ ಪಶ್ಚಿಮ ಪ್ರದೇಶಗಳು ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.  ಈ ಮೊದಲು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆಯ ಆತ್ಮೀಯನಾಗಿದ್ದ ರವೀಂದ್ರ ವೈಕರ್ ಮಾರ್ಚ್‌ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನೆಯನ್ನು ಸೇರಿಕೊಂಡಿದ್ದರು. 4 ಬಾರಿ ಬೃಹನ್ ಮುಂಬೈ ಪಾಲಿಕೆಯ ಸ್ಥಾಯಿ ಸಮಿತಿಯ ಮುಖ್ಯಸ್ಥರಾಗಿದ್ದರು. ಇದರ ಜೊತೆಗೆ ಅವಿಭಜಿತ ಶಿವಸೇನೆ ಪಕ್ಷದಿಂದ ಜೋಗೇಶ್ವರಿ ಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧಿಸಿ ಶಾಸಕರೂ ಆಗಿದ್ದರು.  ಈ ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಮೇ 20 ರಂದು 5ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ಕಾರ್ಯ ಜೂನ್ 4 ರಂದು ನಡೆಯಲಿದೆ. 

click me!