ಕೆ.ಸಿ.ಜನರಲ್‌ ಆಸ್ಪತ್ರೆಗೆ ಸಚಿವ ಅಶ್ವತ್ಥನಾರಾಯಣ ಭೇಟಿ

By Kannadaprabha NewsFirst Published Sep 27, 2022, 10:03 AM IST
Highlights
  • ಕೆ.ಸಿ.ಜನರಲ್‌ ಆಸ್ಪತ್ರೆಗೆ ಸಚಿವ ಅಶ್ವತ್ಥನಾರಾಯಣ ಭೇಟಿ
  • ಜಯದೇವ ಹೃದ್ರೋಗ ಸಂಸ್ಥೆಯ 50 ಹಾಸಿಗೆಗಳ ತುರ್ತು ಉಪಘಟಕ ಪರಿಶೀಲನೆ

ಬೆಂಗಳೂರು (ಸೆ.27) : ಮಲ್ಲೇಶ್ವರಂನ ಕೆ.ಸಿ ಜನರಲ್‌ ಆಸ್ಪತ್ರೆಯಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಜಯದೇವ ಹೃದ್ರೋಗ ಸಂಸ್ಥೆಯ 50 ಹಾಸಿಗೆಗಳ ತುರ್ತು ಉಪಘಟಕ ಮತ್ತು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ 50 ಹಾಸಿಗೆಗಳ ತುರ್ತು ನಿಗಾ ಘಟಕವನ್ನು ಸ್ಥಳೀಯ ಶಾಸಕರೂ ಆಗಿರುವ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೋಮವಾರ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಈ ಎರಡೂ ಆಸ್ಪತ್ರೆಗಳನ್ನು ಅಕ್ಟೋಬರ್‌ 4ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸುವ ಸಾಧ್ಯತೆಯಿದೆ. ಜಯದೇವ ಹೃದ್ರೋಗ ಆಸ್ಪತ್ರೆಯ ಉಪಘಟಕದಿಂದ ಬೆಂಗಳೂರು ಉತ್ತರ ಭಾಗದ ಜನರಿಗೆ ಸುಗಮವಾಗಿ ಮತ್ತು ಸುಲಭವಾಗಿ ಹೃದಯ ಚಿಕಿತ್ಸೆ ದೊರೆಯಲಿದೆ. ಇದಕ್ಕಾಗಿ 15 ಕೋಟಿ ರು. ವಿನಿಯೋಗಿಸಲಾಗಿದೆ ಎಂದರು.

ಕೊರೋನಾ ಸಂದರ್ಭದಲ್ಲಿ ಸರ್ಕಾರವು ನೀಡಿದ್ದ ಹಣದಲ್ಲಿ ಉಳಿಕೆ ಹಣವನ್ನು ಇದಕ್ಕೆ ಬಳಸಿಕೊಳ್ಳಲಾಗಿದೆ. ಉಪಕರಣಗಳಿಗೆ ಆಗುವ ವೆಚ್ಚವನ್ನು ಜಯದೇವ ಹೃದ್ರೋಗ ಸಂಸ್ಥೆಯೇ ಭರಿಸಿದೆ. ಈ ಉಪಘಟಕವನ್ನು ಆ ಸಂಸ್ಥೆಯೇ ನಿರ್ವಹಿಸಲಿದೆ. ಈ ಉಪಘಟಕದಲ್ಲಿ ಕ್ಯಾತ್‌ ಲ್ಯಾಬ್‌ ಸೇರಿದಂತೆ ಹೃದ್ರೋಗಕ್ಕೆ ಸಂಬಂಧಿಸಿದ ಎಲ್ಲಾ ಚಿಕಿತ್ಸೆಗಳಿಗೆ ಅನುಕೂಲವಿದೆ ಎಂದು ಹೇಳಿದರು. ಎಳೆಯ ಮಕ್ಕಳಿಗೆ ಕಂಡುಬರುವ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೂ ಇನ್ನು ಮುಂದೆ ಕೆ.ಸಿ. ಜನರಲ… ಆಸ್ಪತ್ರೆಯ ಆವರಣದಲ್ಲೇ ಅತ್ಯುತ್ತಮ ಚಿಕಿತ್ಸೆ ಸಿಗಲಿದೆ ಎಂದು ಸಚಿವರು ಮಾಹಿತಿ ನೀಡಿದರು. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ ಎನ್‌. ಮಂಜುನಾಥ್‌, ಕೆ.ಸಿ.ಜನರಲ್‌ ಆಸ್ಪತ್ರೆಯ ಅಧೀಕ್ಷಕಿ ಡಾ.ಇಂದಿರಾ, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ದೀಪಕ್‌ ಮತ್ತಿತರರಿದ್ದರು.

ಖಾಸಗಿಗೆ ಟ್ರಸ್ಟ್‌: ಸಿಎಂ ಬೊಮ್ಮಾಯಿ ಭೇಟಿಯಾದ ಅಶ್ವತ್ಥ್‌, ಸರ್ಕಾರದ ಉತ್ತರಕ್ಕೆ ಪಟ್ಟು ಹಿಡಿದ ಜೆಡಿಎಸ್‌

click me!