ಸಿಯಾಟಲ್ನಲ್ಲಿ ಪೊಲೀಸ್ ಅಧಿಕಾರಿಯ ವಾಹನಕ್ಕೆ ಬಲಿಯಾದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ 260 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. 2023ರಲ್ಲಿ ನಡೆದ ಈ ಅಪಘಾತ ಮತ್ತು ನಂತರ ಅಧಿಕಾರಿಯೊಬ್ಬರ ಅಮಾನವೀಯ ಹೇಳಿಕೆಗಳು ಜಾಗತಿಕ ಆಕ್ರೋಶಕ್ಕೆ ಕಾರಣವಾಗಿದ್ದವು.
ಸಿಯಾಟಲ್: 2023ರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಚಲಾಯಿಸುತ್ತಿದ್ದ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ 23 ವರ್ಷದ ಭಾರತೀಯ ವಿದ್ಯಾರ್ಥಿನಿಯ ಕುಟುಂಬಕ್ಕೆ 260 ಕೋಟಿ ರೂಪಾಯಿ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಅಮೆರಿಕಾದ ಸಿಯಾಟಲ್ನಲ್ಲಿ ಈ ಅಪಘಾತ ಘಟನೆ ನಡೆದಿತ್ತು. ಅಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವೇಗವಾಗಿ ವಾಹನ ಚಲಾಯಿಸಿ ಡಿಕ್ಕಿ ಹೊಡೆದಿದ್ದರಿಂದ ಭಾರತೀಯ ಮೂಲದ 23 ವರ್ಷದ ಪದವಿ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಈಗ ಅವರ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ಸಿಕ್ಕಿದೆ ಎಂದು ವರದಿಯಾಗಿದೆ.
26
ಪೊಲೀಸ್ ಅಧಿಕಾರಿಯ ವಾಹನ ಡಿಕ್ಕಿಯಾಗಿ ಸಂಭವಿಸಿದ್ದ ಸಾವು
ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ 29 ಮಿಲಿಯನ್ ಡಾಲರ್ ಅಂದರೆ ಸುಮಾರು 260 ಕೋಟಿ ಭಾರತೀಯ ರೂಪಾಯಿ ಪರಿಹಾರ ಸಿಕ್ಕಿದೆ ಎಂದು ವರದಿಯಾಗಿದೆ. ಜಾಹ್ನವಿ ಕಂದುಲಾ ಅವರ ಸಾವು ಆಘಾತ ಹಾಗೂ ನೋವಿನಿಂದ ಕೂಡಿತ್ತು. ಈ ಆರ್ಥಿಕ ಪರಿಹಾರವು ಕಂದುಲಾ ಅವರ ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ತರುತ್ತದೆ ಎಂದು ನಗರವು ಆಶಿಸುತ್ತದೆ ಎಂದು ನಗರದ ವಕೀಲೆ ಎರಿಕಾ ಇವಾನ್ಸ್ ಹೇಳಿದ್ದಾಗಿ ವರದಿಯಾಗಿದೆ.
2023 ರಲ್ಲಿ ರಸ್ತೆ ದಾಟುತ್ತಿದ್ದಾಗ ಸಾವಿಗೀಡಾಗಿದ್ದ ಜಾಹ್ನವಿ ಕಂದುಲಾ
2023 ರಲ್ಲಿ ರಸ್ತೆ ದಾಟುತ್ತಿದ್ದಾಗ ಜಾಹ್ನವಿ ಕಂದುಲಾ ಅವರಿಗೆ ಅಧಿಕಾರಿ ಕೆವಿನ್ ಡೇವ್ ಅವರು ಚಲಾಯಿಸುತ್ತಿದ್ದ ವಾಹನ ಡಿಕ್ಕಿ ಹೊಡೆದಿತ್ತು. ಘಟನೆ ನಡೆಯುವ ವೇಳೆ ಅವರು 119 kph ವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ಕಂದುಲಾ 100 ಅಡಿಗಳಷ್ಟು ದೂರ ಹೋಗಿ ಬಿದ್ದಿದ್ದರು ಪರಿಣಾಮ ಗಂಭೀರ ಗಾಯಗೊಂಡು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಜಾಹ್ನವಿ ಕಂದುಲಾ ಅವರು ಸಿಯಾಟಲ್ನ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಮಾಹಿತಿ ವ್ಯವಸ್ಥೆಗಳಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು.
ಅಪಘಾತದ ನಂತರ ಮತ್ತೊಬ್ಬ ಅಧಿಕಾರಿ ಡೇನಿಯಲ್ ಆಡೆರರ್ ಮಾಡಿದ ಕಾಮೆಂಟ್ಗಳನ್ನು ತೋರಿಸುವ ಬಾಡಿ ಕ್ಯಾಮೆರಾ ವೀಡಿಯೋ ಹೊರಬಂದ ನಂತರ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅವಳು ಸತ್ತಿದ್ದಾಳೆ ಎಂದು ಅವರು ನಗುತ್ತಾ ಹೇಳಿದ್ದರು. ಕಂದುಲಾ ಅವರ ಜೀವನವು ಲಿಮಿಟೆಡ್ ಮೌಲ್ಯ ಹೊಂದಿದೆ ಮತ್ತು ನಗರವು ಕೇವಲ ಒಂದು ಚೆಕ್ ಬರೆಯಬೇಕು ಎಂದು ಅವರು ಹೇಳಿದ್ದರು. ಹಲವಾರು ಸೆಕೆಂಡ್ಗಳ ಕಾಲ ನಡೆದ ಅವರ ಸಂಭಾಷಣೆ ಪೊಲೀಸ್ ಇಲಾಖೆಯಲ್ಲೇ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಆ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ಬಾಡಿ ಕ್ಯಾಮ್ ದೃಶ್ಯಾವಳಿ ವೈರಲ್ ಆಗಿದ್ದರಿಂದ ಭಾರತದ ರಾಜತಾಂತ್ರಿಕರು ಪ್ರಕರಣದ ತನಿಖೆ ಕೋರಿದರು. ನಂತರ ನಗರದ ನಾಗರಿಕ ಕಾವಲು ಸಂಸ್ಥೆಯು ಯೂನಿಯನ್ ನಾಯಕರಾಗಿದ್ದ ಅಧಿಕಾರಿ ಡೇನಿಯಲ್ ಆಡೆರರ್ ಅವರ ಹೇಳಿಕೆಗಳು ಇಲಾಖೆಯ ಖ್ಯಾತಿಗೆ ಧಕ್ಕೆ ತಂದಿವೆ ಮತ್ತು ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸಿವೆ ಎಂದು ಕಂಡುಕೊಂಡಿತ್ತು ನಂತರ ಆಡೆರರ್ ಅವರನ್ನು ವಜಾಗೊಳಿಸಲಾಯಿತು.
ಅಲ್ಲದೇ ಆರೋಪಿ ಅಧಿಕಾರಿ ಕೆವಿನ್ ಡೇವ್ ಅವರನ್ನು ಪೊಲೀಸ್ ಇಲಾಖೆ ವಜಾಗೊಳಿ $5,000 ಡಾಲರ್ ದಂಡ ವಿಧಿಸಿತು. ಆದರೆ ಕಿಂಗ್ ಕೌಂಟಿ ಪ್ರಾಸಿಕ್ಯೂಟರ್ಗಳು ಅವರ ವಿರುದ್ಧದ ಅಪರಾಧ ಆರೋಪಗಳನ್ನು ದಾಖಲಿಸಲು ನಿರಾಕರಿಸಿದರು , ಅವರು ಕಂದುಲಾಗೆ ಡಿಕ್ಕಿ ಹೊಡೆದಾಗ ಅವರು ಉದ್ದೇಶಪೂರ್ವಕವಾಗಿ ಸುರಕ್ಷತೆಯನ್ನು ನಿರ್ಲಕ್ಷಿಸಿದ್ದಾರೆಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ