ಕಲರ್ಸ್ ಕನ್ನಡದಲ್ಲಿ ಹೊಸ ಸೀರಿಯಲ್: ರಂಜಿಸಲು ಬರ್ತಿದ್ದಾರೆ ಕನ್ನಡತಿ ಅಮ್ಮಮ್ಮ!

First Published Sep 23, 2023, 3:16 PM IST

ಬಿಗ್ ಬಾಸ್ ಇನ್ನೇನು ಆರಂಭವಾಗುತ್ತೆ ಎನ್ನುವಾಗಲೇ ಸೀರಿಯಲ್ ಗಳು ಮುಗಿಯುತ್ತೆ ಎನ್ನುವ ಸುದ್ದಿ ಸದ್ದು ಕೇಳಿ ಬಂದಿತ್ತು. ಇದೀಗ ಕಲರ್ಸ್ ಕನ್ನಡ ಹೊಸ ಸೀರಿಯಲ್ ಲಾಂಚ್ ಮಾಡಿದೆ. ತುಂಬು ಕುಟುಂಬದ ಬೃಂದಾವನ ಎನ್ನುವ ಕಥೆ ಇದಾಗಿದೆ. 
 

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸದ್ಯ ಸೀರಿಯಲ್ ಗಳ ಹಬ್ಬ. ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ನಡೆಯುತ್ತಿದೆ. ಈ ಶುಭ ಸಂದರ್ಭದಲ್ಲಿ ಚಾನೆಲ್ ರಾಮ್ಜೀ ನಿರ್ಮಾಣದ ಹೊಸ ಸೀರಿಯಲ್ ಬೃಂದಾವನ ಲಾಂಚ್ ಮಾಡಿದೆ. 
 

36 ಜನರನ್ನೊಳಗೊಂಡ, ದ್ವೇಷ ಇಲ್ಲದೇ, ಕೇವಲ ಪ್ರೀತಿ ಮಾತ್ರ ಇರುವ ಒಂದು ದೊಡ್ಡ ಕುಟುಂಬದ (joint family) ಸ್ಟೋರಿ ಇದು. ರಾಮ್ ಜೀ ಯವರ ಈ ಹೊಸ ಸೀರಿಯಲ್ ಪ್ರೊಮೋ ಇದೀಗ ರಿಲೀಸ್ ಆಗಿದ್ದು, ಪ್ರೋಮೋ ಜನರಿಗೆ ಸಖತ್ ಇಷ್ಟವಾಗಿದೆ. 
 

ಕನ್ನಡತಿ ಸೀರಿಯಲ್ ಮೂಲಕ ಮನೆ ಮನ ಗೆದ್ದಿದ್ದ ಅಮ್ಮಮ್ಮ ಖ್ಯಾತಿಯ ಚಿತ್ಕಲಾ ಬಿರಾದರ್ (Chithkala Biradar) ಈ ಸೀರಿಯಲ್ ಮೂಲಕ ಮತ್ತೆ ಜನರನ್ನು ರಂಜಿಸೋಕೆ ಬರ್ತಿದ್ದಾರೆ. ಹೌದು, ಮರಳಿ‌ ಮತ್ತೆ ಅದೇ ಗೂಡಿಗೆ ಬಂದು ಸೇರಿದೆ !! ಈ ಸಾರಿ ನಿಜವಾಗಿಯೂ ಅಮ್ಮಮ್ಮನಾಗಿ ( ಅಜ್ಜಿಯಾಗಿ). ಮತ್ತೊಂದು ಹೊಸ ಪ್ರಯಾಣದ ಚಾಲನೆಯಾಯ್ತು. ಮತ್ತೊಮ್ಮೆ ನಿಮ್ಮ ಹರಕೆ, ಹಾರೈಕೆ ಎರಡೂ ಬೇಕಾಗಿದೆ. ಬೃಂದಾವನ' ಹೊಸ ಕನಸು ಹೊತ್ತು ಬಂದಿದೆ. ಅದು ನನಸಾಗಿ ನಿಮ್ಮೆಲ್ಲರ ಮನಸ್ಸು ಸೊರೆಗೊಂಡರಷ್ಟೇ ಸಾಕು ಎಂದು ಚಿತ್ಕಲಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 
 

ಬಿಗ್ ಬಾಸ್ ಸದ್ಯದಲ್ಲೇ ಆರಂಭವಾಗಲಿದ್ದು, ಮೂರು ಸೀರಿಯಲ್ಸ್ ತಮ್ಮ ಜರ್ನಿ ಕೊನೆಗೊಳಿಸಲಿವೆ ಎನ್ನುವ ಮಾತುಗಳು ಇದುವರೆಗೆ ಕೇಳಿ ಬಂದಿತ್ತು. ಆದರೆ ಇದೀಗ ಬಿಗ್ ಬಾಸ್ ಆರಂಭವಾಗುವ ಹೊತ್ತಲ್ಲೇ ಮತ್ತೊಂದು ಹೊಸ ಸೀರಿಯಲ್ ಲಾಂಚ್ ಆಗಿರೋದು ಕುತೂಹಲ ಮೂಡಿಸಿದೆ. 
 

ಪ್ರೀತಿಯೇ ಮೂಲಾಧಾರವಾಗಿರುವ ಈ ಮನೆಯ ಜನರ ಬಹು ದೊಡ್ಡ ಕನಸು ಮನೆ ಮಗನಿಗೆ ಹುಡುಗಿ ಹುಡುಕೋದು. ಆದರೆ ಹುಡುಗಿ ಹುಡುಕೋಕೆ ಜಾತಕದ ಮೂವತ್ತಾರು ಗಣ ಕೂಡೋದು ಮುಖ್ಯ ಅಲ್ಲ, ಮನೆಯ ಮೂವತ್ತಾರು ಜನ ಒಪ್ಪಿದವಳಷ್ಟೇ ಈ ಮನೆ ಸೊಸೆ ಎಂದು ಹೇಳುತ್ತಾ ಬಂದಿರುವ ಇದು ಅತಿದೊಡ್ಡ ಕುಟುಂಬದ ಅಪರೂಪದ ಕತೆ, ಬೃಂದಾವನ. 
 

ಸದ್ಯ ಈ ಪ್ರೋಮೋ (Serial promo) ಭಾರಿ ಸದ್ದು ಮಾಡುತ್ತಿದೆ. ಗೀತಾ, ರಾಮಾಚಾರಿ, ಮಂಗಳ ಗೌರಿ ಮದುವೆ, ಪುಟ್ಟ ಗೌರಿ ಮದುವೆ ಮೊದಲಾದ ಅತ್ಯುತ್ತಮ ಸೀರಿಯಲ್ ಗಳ ಮೂಲಕ ವಿಭಿನ್ನ ಕಥೆ ನೀಡಿದ ರಾಮ್ ಜೀ ಯವರ ನಿರ್ದೇಶನದ ಈ ವಿಭಿನ್ನ ಕಥೆಯ ಬೃಂದಾವನ ಪ್ರೋಮೋಗೆ ಯೋಗರಾಜ್ ಭಟ್ ವಾಯ್ಸ್ ನೀಡಿದ್ದಾರೆ. 
 

ಸೀರಿಯಲ್ ಪ್ರೋಮೋವನ್ನು ಜನರು ಮೆಚ್ಚಿಕೊಂಡಿದ್ದು, ಪ್ರೊಮೊ ಮಾತ್ರ ಯಾವ ಸಿನಿಮಾ ಟೀಸರ್ ಗೂ ಕಡಿಮೆ ಇಲ್ಲ ಎಂದು ಹೇಳಿದ್ದಾರೆ. ಈ ಸೀರಿಯಲ್ ಮೂಲಕ ಮತ್ತೆ ಅಮ್ಮಮ್ಮನನ್ನು ನೋಡಿ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇನ್ನು ಈ ಸೀರಿಯಲ್ ನಲ್ಲಿ ಕನ್ನಡ ಕೋಗಿಲೆ ಮತ್ತು ಬಿಗ್ ಬಾಸ್ ಕನ್ನಡದ ಸ್ಪರ್ಧಿಯಾಗಿದ್ದ ವಿಶ್ವನಾಥ್ ಹಾವೇರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಾ ಇದ್ದಾರೆ. 
 

click me!