Published : Mar 27, 2025, 11:23 AM ISTUpdated : Mar 27, 2025, 11:33 AM IST
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ನೇಮಕಾತಿ ವಿವಾದಕ್ಕೆ ಕಾರಣವಾಗಿದೆ. ಮಾಜಿ ರೌಡಿಶೀಟರ್ಗೆ ಸ್ಥಾನ ನೀಡಲು ಸಚಿವರ ಶಿಫಾರಸ್ಸು, ಗ್ರಾಮಸ್ಥರ ವಿರೋಧ ವ್ಯಕ್ತವಾಗಿದೆ. ರೌಡಿಶೀಟರ್ಗೆ ಸ್ಥಾನ ಕಲ್ಪಿಸಿಕೊಡಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆಂಬ ಆರೋಪದ ಬೆನ್ನಲ್ಲೇ ದೇಗುಲಕ್ಕೆ ಪ್ರಮುಖವಾಗಿರುವ ಮಲೆಕುಡಿಯ ಜನಾಂಗವನ್ನು ನಿರ್ಲಕ್ಷಿಸಿರುವ ಆರೋಪ ಕೂಡ ಇದೆ.
ದಕ್ಷಿಣ ಭಾರತದ ನಾಗಾರಾಧನೆಯ ಪುಣ್ಯ ಕ್ಷೇತ್ರ, ರಾಜ್ಯದ ಶ್ರೀಮಂತ ದೇವಾಲಯದಲ್ಲಿ ಒಂದಾದ ಪ್ರಸಿದ್ದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈಗ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಕ್ಕೆ ಕಳೆದೆರಡು ತಿಂಗಳಿಂದ ಭಾರೀ ರಾಜಕೀಯ ನಡೆದಿದ್ದು, ವಿವಾದಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿಯಲ್ಲಿ ಮಾಜಿ ರೌಡಿಶೀಟರ್ಗೆ ಸ್ಥಾನ ಕಲ್ಪಿಸಿಕೊಡಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್ (Dinesh Gundu Rao) ಮುಂದಾಗಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿದ್ದು ಅದಕ್ಕೆ ಸಂಬಂಧಿಸಿದಂತೆ ಫೋಟೋವೊಂದು ವೈರಲ್ ಆಗಿದೆ.
37
ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸಚಿವ ದಿನೇಶ್ ಗುಂಡೂರಾವ್ ಓರ್ವ ಮಾಜಿ ರೌಡಿಶೀಟರ್ ಹಾಗೂ ದೇವಸ್ಥಾನಕ್ಕೆ ಈ ಹಿಂದೆ ದ್ರೋಹ ಬಗೆದು ಜೈಲಿನಲ್ಲಿದ್ದ ಗ್ರಾಮ ಪಂಚಾಯತಿ ಸದಸ್ಯ ಕಾಂಗ್ರೆಸ್ ಹರೀಶ್ ಇಂಜಾಡಿ ಎಂಬಾತನ ಹೆಸರನ್ನು ಶಿಫಾರಸು ಮಾಡಿರುವುದು ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಮಾತ್ರವಲ್ಲ ಹರೀಶ್ ನೇರವಾಗಿ ಅಧ್ಯಕ್ಷ ಸ್ಥಾನದ ಮೇಲೆಯೇ ಕಣ್ಣಿಟ್ಟಿದ್ದಾನೆ.
ಈ ವಿವಾದ ನಡೆಯಲು ಪ್ರಮುಖ ಕಾರಣವಿದೆ. ಈ ಕಾಂಗ್ರೆಸ್ನ ಹರೀಶ್ ಇಂಜಾಡಿ ಓರ್ವ ಮಾಜಿ ರೌಡಿಶೀಟರ್ ಆಗಿದ್ದು, ದೇವಸ್ಥಾನದ ಆವರಣದಲ್ಲಿ ಈತನ ಒಡೆತನದಲ್ಲಿ ಪೂಜಾ ಪರಿಕರಗಳ ಅಂಗಡಿಗಳಿವೆ. ದೇವಸ್ಥಾನದ ಹಣ್ಣುಕಾಯಿ ಮಳಿಗೆಗಳ ಟೆಂಡರ್ನಲ್ಲಿ ಈ ಹಿಂದೆ ನಕಲಿ ಚೆಕ್ ನೀಡಿ ಈತ ದೇವಸ್ಥಾನಕ್ಕೆ ವಂಚನೆ ಮಾಡಿದ್ದ, ಈ ಬಗ್ಗೆ ಆಡಳಿತ ಮಂಡಳಿ ನೀಡಿದ ದೂರಿನ ಅನ್ವಯ ಹರೀಶ್ ಜೈಲಿಗೂ ಹೋಗಿ ಬಂದಿದ್ದ. ಮಾತ್ರವಲ್ಲ ಹರೀಶ್ ಇಂಜಾಡಿ ವಿರುದ್ಧ ಮರಳು ಮಾಫಿಯಾ, ಮರ ಕಳ್ಳ ಸಾಗಣೆಯಲ್ಲಿ ತೊಡಗಿರುವ ಆರೋಪವೂ ಇದೆ.
57
ಗ್ರಾಮ ಪಂಚಾಯತಿ ಸದಸ್ಯನಾಗಿರುವ ಈತ ಈಗ ಸದಸ್ಯ ಸ್ಥಾನ ನೀಡಲೇಬೇಕೆಂದು ಅಂತ ಪಟ್ಟು ಹಿಡಿದು ಒಳ ರಾಜಕೀಯ ಮಾಡಿದ್ದಾನೆ. ತಾನು ಕ್ರಾಂಗ್ರೆಸ್ ಮುಖಂಡ ಅಂತ ಹೇಳಿಕೊಂಡು ಮಾಜಿ ಸಚಿವರೊಬ್ಬರ ಮೂಲಕ ಶಿಫಾರಸು ಪಟ್ಟಿಯಲ್ಲಿ ತನ್ನ ಹೆಸರು ಬರುವಂತೆ ಮಾಡಿದ್ದಾನೆ. ಹೀಗಾಗಿ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ ಸಹಿಯುಳ್ಳ ಪತ್ರವೊಂದರಲ್ಲಿ ಈತನ ಹೆಸರಿದ್ದು, ಗ್ರಾಮಸ್ಥರು ಇದನ್ನು ನೋಡಿ ಕೆರಳಿದ್ದಾರೆ.
ಇದೀಗ ಈತನಿಗೆ ಸ್ಥಾನ ನೀಡಬಾರದು, ಇಂತಹ ಸದಸ್ಯ ನಮಗೆ ಬೇಡ ಅಂತ ಗ್ರಾಮಸ್ಥರು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಶ್ರೀಮಂತ ದೇಗುಲದ ಬೊಕ್ಕಸ ಹಾಗೂ ಇಲ್ಲಿನ ಪ್ರತಿಷ್ಠೆಗಾಗಿ ಈ ಲಾಭಿ ನಡೆದಿದೆ. ಕ್ರಿಮಿನಲ್ ಹಿನ್ನೆಲೆಯಿರುವ ಈ ಪವಿತ್ರ ದೇಗುಲದ ಆಡಳಿತ ಮಂಡಳಿಯಲ್ಲಿ ಇರದಂತೆ ನೋಡಿಕೊಳ್ಳುವುದು ಎಚ್ಚರ ವಹಿಸುವುದು ಸರ್ಕಾರ ಹಾಗೂ ಇಲಾಖೆಗಳ ಜವಾಬ್ದಾರಿ ಕೂಡ ಹೌದು.
77
ದೇಗುಲದ ಇತಿಹಾಸದ ಪ್ರಕಾರ ಇಲ್ಲಿನ ಆದಿವಾಸಿ ಮಲೆಕುಡಿಯ ಜನಾಂಗದವರಿಗೆ ಪ್ರಾಮಖ್ಯ ಹೆಚ್ಚು. ಇದಕ್ಕೆ ತನ್ನದೇ ಆದ ಹಿನ್ನೆಲೆ ಇದೆ. ಕುಕ್ಕೆಯಲ್ಲಿನ ರಥೋತ್ಸವಗಳಲ್ಲಿ ಮಲೆಕುಡಿಯ ಜನಾಂಗದವರೇ ಮುಖ್ಯ, ಇದು ಆ ದೇಗುಲದ ಪರಂಪರೆ. ಹೀಗಾಗಿ ಪ್ರತಿ ಬಾರಿ ಒಂದು ಸದಸ್ಯ ಸ್ಥಾನವನ್ನು ಮಲೆಕುಡಿಯ ಜನಾಂಗಕ್ಕೆ ಮೀಸಲಿಡಲಾಗಿದೆ. ಈ ಬಾರಿ ಸಚಿವರು ಮಲೆಕುಡಿಯ ಜನಾಂಗವನ್ನು ಬಿಟ್ಟು ಬೇರೆಯವರಿಗೆಲ್ಲ ಶಿಫಾರಸ್ಸು ಮಾಡಿದ್ದಾರೆಂದು ಮಲೆಕುಡಿಯ ಜನಾಂಗ ಕೆರಳಿದೆ. ಇಷ್ಟೇ ಅಲ್ಲ ದೇಗುಲಕ್ಕೆ ಸಂಬಂಧಿಸಿದ ಕುಟುಂಬಳಿಗೂ ಇಲ್ಲಿ ಪ್ರಮುಖ ಸ್ಥಾನವಿದೆ. ಇದೀಗ ರಾಜಕೀಯ ಎಂಟ್ರಿಯಾಗಿರುವುದು ದೇಗುಲಕ್ಕೆ ಕಳಂಕವಾಗದಿದ್ದರೆ ಅಷ್ಟೇ ಸಾಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ