ಕೊಪ್ಪಳ ತಾಲೂಕಿನ ಇರಕಲ್ ಗಡ ಸಮೀಪ ಆಹಾರ ಮತ್ತು ನೀರಿಗಾಗಿ ಜಮೀನಿಗೆ ನುಗ್ಗಲು ಯತ್ನಿಸಿದ ಕರಡಿಯೊಂದು ವಿದ್ಯುತ್ ಸ್ಪರ್ಶದಿಂದ ದಾರುಣವಾಗಿ ಸಾವನ್ನಪ್ಪಿದೆ. ಈ ಘಟನೆಯಿಂದಾಗಿ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ: ತಾಲೂಕಿನ ಇರಕಲ್ ಗಡ ಸಮೀಪದ ಕೊಡದಾಳ ಸೀಮಾದ ರೈತರ ಜಮೀನೊಂದರಲ್ಲಿ ವಿದ್ಯುತ್ ಸ್ಪರ್ಶವಾಗಿ ಕರಡಿಯೊಂದು ದಾರುಣವಾಗಿ ಸಾವನ್ನಪ್ಪಿದ ಮನಕಲಕುವ ಘಟನೆ ಇಂದು ನಸುಕಿನಲ್ಲಿ ಜರುಗಿದೆ. ಬೇಸಿಗೆ ಹಿನ್ನೆಲೆ ಆಹಾರ ಹಾಗೂ ನೀರಿಗಾಗಿ ವನ್ಯ ಜೀವಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿದ್ದು, ಆಹಾರ ಮತ್ತು ನೀರಿಗಾಗಿ ಜಮೀನೊಂದಕ್ಕೆ ನುಗ್ಗಲು ಪ್ರಯತ್ನಿಸಿದಾಗ ಕರಡಿಯೊಂದು ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದೆ.
ಕೊಪ್ಪಳ ತಾಲೂಕಿನ ಇರಕಲ್ ಗಡ ಸಮೀಪದ ಕೊಡದಾಳ ಸೀಮಾದ ರೈತ ಭೀಮಣ್ಣ ಎನ್ನುವವರ ಜಮೀನಿಗೆ ನುಗ್ಗಲು ಪ್ರಯತ್ನಿಸಿದ ಕರಡಿ ಜಮೀನ ಬಳಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮಾರ್ ಸ್ಪರ್ಶದಿಂದ ದಾರುಣವಾಗಿ ಒದ್ದಾಡಿ ಜೀವಬಿಟ್ಟಿದೆ. ಇಂದು ಬೆಳಗ್ಗೆ ಸರಿಸುಮಾರು 4 ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಕೊಡದಾಳ ಗ್ರಾಮದ ರೈತ ಭೀಮಣ್ಣ ಇಂದು ಬೆಳಗ್ಗೆ ಜಮೀನಿಗೆ ಹೋದಾಗ ಕರಡಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯ ಅಧಿಕಾರಿ ಜಡಿಯಪ್ಪ, ಕರಡಿಯ ಪಂಚನಾಮ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಯಲಬುರ್ಗಾ ತಾಲೂಕಿನ ಗುನ್ನಾಳ ಸೀಮಾದಲ್ಲಿ ಈ ಹಿಂದೆ ಕರಡಿಯೊಂದು ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಕರಡಿ ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದ ಘಟನೆ ಮರುಕಳಿಸಿದೆ
ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸ್ಥಳೀಯರು ಹಾಗೂ ವನ್ಯಜೀವಿ ಸಂರಕ್ಷಕರು ಆರೋಪಿಸಿದ್ದಾರೆ. ಇನ್ನು ಇರಕಲ್ ಗಡ ಭಾಗದಲ್ಲಿ ಕರಡಿಗಳ ಸಂತತಿ ಹೆಚ್ಚಾಗಿದ್ದು, ಕರಡಿಗಳ ಹಾವಳಿಯೂ ಹೆಚ್ಚಾಗಿದೆ. ಇದರಿಂದ ರೈತರು, ಓಡಾಡುವ ಜನರ ಮೇಲೆ ಕರಡಿಗಳು ದಾಳಿ ಮಾಡಿದ ಘಟನೆಯೂ ನಡೆದಿದೆ.
ಹೀಗಾಗಿ ಇಲ್ಲೊಂದು ಕರಡಿ ಸಂರಕ್ಷಣ ವಲಯ ಮಾಡುವಂತೆ ಅರಣ್ಯ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಸಲ್ಲಿಸಿದರು ಕೂಡಾ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇನ್ನು ಕತ್ತಲಾದರೆ ಸಾಕು ಆಹಾರವನ್ನು ಅರಸಿ ಕರಡಿಗಳು ಹಿಂಡು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತವೆ. ಶಾಸಕ ಜನಾರ್ಧನ ರೆಡ್ಡಿ ಅವರು ಕಾಯ್ದಿಟ್ಟ ಅರಣ್ಯದಲ್ಲಿ ಕರಡಿಧಾಮ ಮಾಡುತ್ತೇವೆ ಎಂದು ಹೇಳಿದರೂ ಈವರೆಗೆ ಯಾವುದೇ ಕ್ರಮ ವಹಿಸಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕರಡಿಗಳ ಸಂರಕ್ಷಣೆ ಹಾಗೂ ರೈತರ ಬೆಳೆ ಮತ್ತು ರೈತರ ಜೀವ ಜೀವ ಉಳಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ