ಮಾಲಂಬಿ ಗ್ರಾಮದ ಪಳಂಗೋಟು ಪ್ರಕಾಶ್ ಮತ್ತು ಜಯ ದಂಪತಿಯ ಏಕೈಕ ಪುತ್ರನಾದ ದಿವಿನ್, 10 ವರ್ಷಗಳ ಹಿಂದೆ ಭಾರತೀಯ ಭೂ ಸೇನೆಗೆ ಸೇರಿದ್ದರು. ಇತ್ತೀಚೆಗೆ ನಿಶ್ಚಿತಾರ್ಥ ಕೂಡ ನೆರವೇರಿತು. 2025 ರ ಫೆಬ್ರವರಿಯಲ್ಲಿ ದಿವಿನ್ ವಿವಾಹ ನಿಶ್ಚಯವಾಗಿತ್ತು. ಆದರೆ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಕೊನೆಯುಸಿರೆಳೆದಿದ್ದಾರೆ.
ದಿವಿನ್ ಮರಾಠ ರೆಜಿಮೆಂಟ್ನಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು. ಬುಧವಾರ ಬೆಳಗ್ಗಿನ ಜಾವ ಸೇನೆಯ ಮರಾಠ ರೆಜಿಮೆಂಟಿಗೆ ಸೇರಿದ ವಾಹನದಲ್ಲಿ ಯೋಧ ದಿವಿನ್ ಸೇರಿದಂತೆ 10 ಮಂದಿ ಯೋಧರು ಎಂದಿನಂತೆ ಪೆಟ್ರೊಲಿಂಗ್ಗೆ ತೆರಳುತ್ತಿದ್ದಾಗ ವಾಹನ ಜಮ್ಮು ಕಾಶ್ಮೀರದ ಪೂಂಚ್ ಬಳಿ ಪ್ರಪಾತಕ್ಕೆ ಉರುಳಿತ್ತು. ಈ ದುರಂತದಲ್ಲಿ ಕರ್ನಾಟಕದ ಮೂವರು ಯೋಧರು ಸೇರಿದಂತೆ ಐವರು ಮೃತಪಟ್ಟಿದ್ದರು. ದಿವಿನ್ ಸೇರಿದಂತೆ 5 ಮಂದಿ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಉದಮಪುರದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.