ಬೆಳಗಾವಿಯಲ್ಲಿ, ಕಳ್ಳರು ತಳ್ಳುಗಾಡಿ ಬಳಸಿ ಇಂಡಿಕ್ಯಾಶ್ ಎಟಿಎಂ ಯಂತ್ರವನ್ನೇ ಕದ್ದೊಯ್ದಿದ್ದಾರೆ. ಆದರೆ, ಗ್ಯಾಸ್ ಕಟ್ಟರ್ನಿಂದಲೂ ಅದನ್ನು ತೆರೆಯಲು ವಿಫಲರಾಗಿ, ಹಣ ದೋಚಲಾಗದೆ ಯಂತ್ರವನ್ನು ರಸ್ತೆಬದಿ ಎಸೆದು ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಳಗಾವಿಯಲ್ಲಿ ನಿನ್ನೆ ರಾತ್ರಿ ವೇಳೆ 'ತಳ್ಳುಗಾಡಿ ಬಳಸಿ ಎಟಿಎಂ ಮಷಿನ್ ಹೊತ್ತೊಯ್ದ' ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ.
ಕಳ್ಳರು ಎಟಿಎಂ ಯಂತ್ರವನ್ನು ಕದ್ದು ಸುಮಾರು ಅರ್ಧ ಕಿಲೋಮೀಟರ್ ದೂರದವರೆಗೆ ಎಳೆದೊಯ್ದರೂ, ಅದನ್ನು ತೆರೆಯಲು ಸಾಧ್ಯವಾಗದೆ, ಹಣವನ್ನೂ ದೋಚಲು ವಿಫಲರಾಗಿ ಮಷಿನ್ ಅನ್ನು ರಸ್ತೆಯಲ್ಲಿಯೇ ಎಸೆದು ಪರಾರಿಯಾಗಿದ್ದಾರೆ. ಈ ಕುರಿತು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಮಾಹಿತಿ ನೀಡಿದ್ದಾರೆ.
26
ಕಳ್ಳತನದ ವಿಫಲ ಯತ್ನದ ವಿವರ
ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಇಂಡಿಕ್ಯಾಶ್ (Indicash) ಎಟಿಎಂನಲ್ಲಿ ನವೆಂಬರ್ 30ರಂದು ತಡರಾತ್ರಿ 3 ಗಂಟೆ ಸುಮಾರಿಗೆ ಈ ಕಳ್ಳತನದ ಯತ್ನ ನಡೆದಿತ್ತು.
36
ಬ್ಲ್ಯಾಕ್ ಸ್ಪ್ರೇ ಐಡಿಯಾ
ಮೂವರು ಖದೀಮರು ಎಟಿಎಂ ಕೇಂದ್ರಕ್ಕೆ ನುಗ್ಗಿ, ಶಬ್ದವಾದರೆ ಅಲಾರಾಂ ಟ್ರಿಗರ್ ಆಗದಂತೆ ಸೆನ್ಸಾರ್ಗಳ ಮೇಲೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೇಲೆ ಬ್ಲ್ಯಾಕ್ ಸ್ಪ್ರೇ ಬಳಸಿ ಮಷಿನ್ ಅನ್ನು ಬೇರ್ಪಡಿಸಿದ್ದಾರೆ.
ಯಾವುದೇ ಸಂಶಯ ಬಾರದಂತೆ, ಅವರು ಮಷಿನ್ ಅನ್ನು ತಳ್ಳುಗಾಡಿ (ಟ್ರಾಲಿಯಲ್ಲಿ) ಇಟ್ಟುಕೊಂಡು ಸುಮಾರು 200 ಮೀಟರ್ ದೂರದವರೆಗೆ ತಳ್ಳಿಕೊಂಡು ಹೋಗಿ, ನಂತರ ತಮ್ಮ ವಾಹನದಲ್ಲಿ ಅರ್ಧ ಕಿಲೋಮೀಟರ್ ದೂರದವರೆಗೆ ಕೊಂಡೊಯ್ದಿದ್ದಾರೆ. ಎಟಿಎಂ ಮಷಿನ್ನಲ್ಲಿ 1 ಲಕ್ಷ ರೂಪಾಯಿಗೂ ಅಧಿಕ ಹಣವಿತ್ತು ಎಂದು ತಿಳಿದುಬಂದಿದೆ. ಕಳ್ಳರು ಅದನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ ನಂತರ ಹಣ ಪಡೆಯಲು ಯತ್ನಿಸಿದ್ದಾರೆ.
56
ಗ್ಯಾಸ್ ಕಟ್ಟರ್ನಿಂದ ಓಪನ್ ಮಾಡಲು ಪ್ರಯತ್ನ
ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹೇಳಿಕೆಯ ಪ್ರಕಾರ, 'ಕಳ್ಳರು ಎಟಿಎಂ ಮಷಿನ್ ಅನ್ನು ಗ್ಯಾಸ್ ಕಟ್ಟರ್ನಿಂದ ಓಪನ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಎಟಿಎಂ ಬಲವಾದ ಭದ್ರತೆ ಹೊಂದಿದ್ದ ಕಾರಣ ಅದನ್ನು ತೆರೆಯಲು ಅವರಿಗೆ ಸಾಧ್ಯವಾಗಿಲ್ಲ. ಯಶಸ್ಸು ಸಿಗದ ಕಾರಣ ಕಳ್ಳರು ಕೋಪದಲ್ಲಿ ಮಷಿನ್ ಅನ್ನು ಅರ್ಧ ಕಿಲೋಮೀಟರ್ ದೂರದಲ್ಲಿ ಎಸೆದು ಪರಾರಿಯಾಗಿದ್ದಾರೆ.
66
ಕಳ್ಳರನ್ನು ಪತ್ತೆ ಹಚ್ಚಲು ವಿಶೇಷ ತಂಡ
ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳಕ ಸೆರೆಯಾಗಿದ್ದು, ಕಳ್ಳತನಕ್ಕೆ ಯತ್ನಿಸಿದ ಖದೀಮರ ಐಡಿಯಾ ಕಂಡು ಪೊಲೀಸರು ದಂಗಾಗಿದ್ದರು. ಕಳ್ಳತನದ ವಿಫಲ ಯತ್ನದ ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ತಲೆಮರೆಸಿಕೊಂಡಿರುವ ಕಳ್ಳರನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಕಮಿಷನರ್ ಭರವಸೆ ನೀಡಿದ್ದಾರೆ.