‘ಸೀತಾರಾಮ್ ಬಿನೋಯ್ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ ಪೊಲೀಸ್ ಪಾತ್ರಗಳು ಹೆಚ್ಚೆಚ್ಚು ಬರುತ್ತಿವೆ. ಪೊಲೀಸ್ ಪಾತ್ರಕ್ಕೆ ಬ್ರಾಂಡ್ ಆಗ್ತಿರೋ ಬಗ್ಗೆ ಬೇಸರ ಇಲ್ಲ.
ಶಂಕರ್ ನಾಗ್, ದೇವರಾಜ್ ಹಾದಿಯಲ್ಲಿ ಹೋಗೋದಕ್ಕೆ ಹೆಮ್ಮೆ ಇದೆ’ ಎಂದರು ವಿಜಯ ರಾಘವೇಂದ್ರ. ಡಿ ಜಿ ಉಮೇಶ್ ಗೌಡ ನಿರ್ದೇಶನದ ‘ಓ ಮನಸೇ’ ಚಿತ್ರದ ಟೀಸರ್ ಬಿಡುಗಡೆ ವೇಳೆ ಮಾತನಾಡಿದ ವಿಜಯ ರಾಘವೇಂದ್ರ, ‘ಈ ಚಿತ್ರದಲ್ಲೂ ಪೊಲೀಸ್ ಆಫೀಸರ್ ಪಾತ್ರ. ಆದರೆ ಭಾವನಾತ್ಮಕತೆ ಹೆಚ್ಚಿದೆ’ ಎಂದರು.
ನಟ ಧರ್ಮಕೀರ್ತಿ ರಾಜ್, ‘ಈ ಚಿತ್ರದ ಒಂದು ಹಾಡು ಬಹಳ ಬಹಳ ಇಷ್ಟಆಗಿತ್ತು. ಆದ್ರೆ ನನ್ನ ದುರಾದೃಷ್ಟಕ್ಕೆ ಅದು ವಿಜಯ ರಾಘವೇಂದ್ರ ಅವರ ಪಾತ್ರದ್ದು.
ನಿರ್ದೇಶಕರಲ್ಲಿ ಪರಿ ಪರಿಯಾಗಿ ಬೇಡ್ಕೊಂಡೆ, ಅದೊಂದು ಹಾಡು ನನಗೆ ಬಿಟ್ಟುಬಿಡಿ ಅಂತ. ಹಾಗೆ ಮಾಡಿದ್ರೆ ಕಥೆಯನ್ನೇ ಬದಲಿಸಬೇಕಾಗುತ್ತೆ ಅಂದ್ರು. ಈ ಸಿನಿಮಾಕ್ಕೆ ಮೊದಲ ಚೆಕ್ ಪಡೆದ ಮೇಲೆ ಹೆಚ್ಚೆಚ್ಚು ಆಫರ್ಗಳು ಬರತೊಡಗಿದವು’ ಎಂದರು.
ನಾಯಕಿ ಸಂಚಿತಾ ಪಡುಕೋಣೆ, ‘ಒಂದೊಳ್ಳೆ ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದೆ. ನನ್ನ ಪ್ರತಿಭೆ ಗುರುತಿಸೋ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ’ ಎಂದರು.
ನಿರ್ದೇಶಕ ಉಮೇಶ್, ನಿರ್ಮಾಪಕರಾದ ಯುವರಾಜ್ (YuvaRaj), ವೆಂಕಟೇಶ್, ಭೈರೇಗೌಡ, ಸು.ಕಾ ರಾಮು, ಧನಂಜಯ ಮೊದಲಾದವರಿದ್ದರು.