Dwarakish Death ಚಾರ್ಲಿ ಚಾಪ್ಲಿನ್ ಹುಟ್ಟಿದ ದಿನವೇ ಮರೆಯಾದ ದ್ವಾರಕೀಶ್ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ

First Published Apr 16, 2024, 1:24 PM IST

ಸ್ಯಾಂಡಲ್‌ವುಡ್‌ ಹಿರಿಯ ನಟ,  ನಿರ್ದೇಶಕ ಹಾಗೂ ನಿರ್ಮಾಪಕ  ದ್ವಾರಕೀಶ್ ಅವರು ನಿಧನರಾಗಿದ್ದಾರೆ. ಮೂವರು ಹೆಂಡತಿಯರು, 6 ಮಕ್ಕಳನ್ನು ಹೊಂದಿದ್ದ ದ್ವಾರಕೀಶ್ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ದ್ವಾರಕೀಶ್ ಬಗ್ಗೆ ಗೊತ್ತಿಲ್ಲದ ಸಂಗತಿಗಳು ಇಲ್ಲಿವೆ.

ಚಲನಚಿತ್ರ ವಿಶ್ವ ಕಂಡ ಮಹಾನ್ ನಟ, ಹಾಸ್ಯ ಚಕ್ರವರ್ತಿ, ನಿರ್ದೇಶಕ, ನಿರ್ಮಾಪಕ ಮತ್ತು ಸಂಭಾಷಣೆಕಾರ, ಬ್ರಿಟಿಷ್ ಹಾಸ್ಯನಟ ಚಾರ್ಲಿ ಚಾಪ್ಲಿನ್  135ನೇ ಹುಟ್ಟುಹಬ್ಬದ  ಸವಿನೆನಪಿನ ದಿನವೇ ದ್ವಾರಕೀಶ್ ಅವರು ನಿಧನ ಹೊಂದಿದ್ದಾರೆ. ವಾಸ್ತವದಲ್ಲಿ  ದ್ವಾರಕೀಶ್  ಕೂಡ ಕನ್ನಡ ಚಿತ್ರರಂಗದಲ್ಲಿ ಕೇವಲ ನಿರ್ಮಾಪಕ, ನಿರ್ದೇಶಕ, ನಟನಾಗಿ ಮಾತ್ರವಲ್ಲ ಹಾಸ್ಯನಟನಾಗಿ ಕೂಡ ಮಿಂಚಿದ್ದರು. ವಿಪರ್ಯಾಸವೆಂದರೆ ಪತ್ನಿ ಅಂಬುಜಾ ಸಾವಿನ ದಿನದಂದೇ ನಿಧನರಾಗಿದ್ದಾರೆ. ಪತ್ನಿ ಅಂಬುಜಾ ಕೂಡ 2021ರ ಏಪ್ರಿಲ್​ 16 ರಂದು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು.

ದ್ವಾರಕೀಶ್ 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ್ದು, ಬಂಗ್ಲೆ ಶಾಮರಾವ್ ದ್ವಾರಕಾನಾಥ್ ಎಂಬುದು ದ್ವಾರಕೀಶ್ ಅವರ ನಿಜನಾಮ.  ಕನ್ನಡದ ಅದ್ವಿತೀಯ ನಿರ್ದೇಶಕ ದಿವಂಗತ ಹುಣಸೂರು ಕೃಷ್ಣಮೂರ್ತಿ ಅವರ ತಂಗಿಯ ಮಗ. ಹೀಗಾಗಿ ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದರು.

ಮದ್ರಾಸ್ ನ ಟಿ ನಗರದಲ್ಲಿ ದ್ವಾರಕೀಶ್ ಮನೆ ಹೊಂದಿದ್ದರು. ಅದು ಅತ್ಯಂತ ವಿಶಾಲವಾದ ದೊಡ್ಡ ಬಂಗಲೆಯಾಗಿತ್ತು. ಮನೆಯ ಮುಂದೆ ಕಾರುಗಳು ನಿಲ್ಲುವುದಕ್ಕೆ ಎಕರೆಗಟ್ಟಲೆ ಜಾಗ, ರಜನಿಕಾಂತ್, ಶ್ರೀದೇವಿ, ವಿಷ್ಣುವರ್ಧನ್, ಜಯಚಿತ್ರ, ಜಯಸುಧಾ, ಡಿಸ್ಕೋ ಶಾಂತಿ, ವಿಜಯಾನಂದ್ ಅಷ್ಟೇ ಏಕೆ ಅಮಿತಾಬ್ ಬಚ್ಚನ್ ಕೂಡ ಬರುತ್ತಿದ್ದರು. ಅದು ಸದಾ ಕಾಲವೂ ಚಟುವಟಿಕೆಯ ಬೀಡಾಗಿತ್ತು.

1969ರಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ‘ಮೇಯರ್ ಮುತ್ತಣ್ಣ’ ಚಿತ್ರಕ್ಕೆ ಬಂಡವಾಳ ಹಾಕುವ ಮೂಲಕ  ಸ್ವತಂತ್ರ ನಿರ್ಮಾಪಕರಾದರು. ಅನಂತರ  ಕನ್ನಡ ಚಿತ್ರರಂಗದಲ್ಲಿ ಮಾಡಿದ ಕೆಲಸಗಳೆಲ್ಲವೂ ಇತಿಹಾಸ. ಡಾ. ರಾಜ್‌ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಂತಹ ಮೇರು ನಟರೊಂದಿಗೆ ಪರದೆ ಹಂಚಿಕೊಂಡು ಹಾಸ್ಯಭರಿತ ನಟನೆಯ ಮೂಲಕ ನೋಡುಗರ ಮನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

1972ರಲ್ಲಿ ಬಿಡುಗಡೆಯಾದ ನಾಗರಹಾವು ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದ ವಿಷ್ಣುವರ್ಧನ್,  ದ್ವಾರಕೀಶ್ ಕಣ್ಣಿಗೆ ಬಿದ್ದನಂತರ ವಿಷ್ಣುವರ್ಧನ್ ಮತ್ತು ದ್ವಾರಕೀಶ್  ಜೋಡಿ ಒಂದರ ಹಿಂದೆ ಒಂದಂತೆ ಅನೇಕ ಹಿಟ್‌ ಚಿತ್ರಗಳನ್ನು ನೀಡಿತ್ತು.  ಕಳ್ಳ-ಕುಳ್ಳ ಹಾಸ್ಯಭರಿತ ಸಾಹಸವುಳ್ಳ ಸರಣಿಯ ಚಿತ್ರಗಳನ್ನು ಮಾಡುತ್ತಾ, ಕನ್ನಡ ಚಿತ್ರರಂಗದ ಕಳ್ಳ-ಕುಳ್ಳ ಜೋಡಿ ಎಂದೇ ಪ್ರಸಿದ್ಧವಾಗಿತ್ತು. 

1978ರಲ್ಲಿ ದ್ವಾರಕೀಶ್ ಸಿಂಗಪೂರಿನಲ್ಲಿ ರಾಜಾ ಕುಳ್ಳ ಚಿತ್ರ ಮಾಡಿದ್ದರು.  ಧೈರ್ಯ ತೋರಿ ಕನ್ನಡ ಚಿತ್ರರಂಗದಲ್ಲಿ ಪ್ರಪ್ರಥಮವಾಗಿ ಈ ಚಿತ್ರವನ್ನು ಸಿಂಗಾಪುರದಲ್ಲಿ ಚಿತ್ರೀಕರಣ ಮಾಡಿ ಯಶಸ್ವಿಯಾದರು. ವಿದೇಶದಲ್ಲಿ ಕನ್ನಡ ಚಲನಚಿತ್ರವನ್ನು ಚಿತ್ರೀಕರಿಸಿದ ಮೊದಲ ಸಿನೆಮಾವಾಗಿದ್ದು, ಮೊದಲ ನಿರ್ಮಾಪಕರು ಎನಿಸಿಕೊಂಡರು.  ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೊಂದು ಮೈಲಿಗಲ್ಲಾಗಿದೆ.

ಕಿಶೋರ್ ಕುಮಾರ್ ಅವರನ್ನು ಕನ್ನಡ ಚಲನಚಿತ್ರೋದ್ಯಮಕ್ಕೆ ಕರೆತಂದವರೂ ದ್ವಾರಕೀಶ್ ಅವರೇ. ಕಿಶೋರ್ ಕುಮಾರ್ ಅವರು ಹಾಡಿದ ಆಡು ಆಟ ಆಡು ಹಾಡು ಅತ್ಯಂತ ಜನಪ್ರಿಯವಾಯಿತು. ಆಪ್ತಮಿತ್ರ ಚಿತ್ರವಂತೂ ಬೆಂಗಳೂರಿನ ಸಂತೋಷ್ ಮತ್ತು ಮೈಸೂರಿನ ರಣಜಿತ್‌ನಲ್ಲಿ ಚಿತ್ರಮಂದಿರಗಳಲ್ಲಿ ಪ್ರತಿ ದಿನ ನಾಲ್ಕು ಪ್ರದರ್ಶನಗಳೊಂದಿಗೆ ಒಂದು ವರ್ಷ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದ ಮೊದಲ ಕನ್ನಡ ಚಲನಚಿತ್ರವಾಗಿದೆ.
 

1985ರ ಬಳಿಕ ನೀ ತಂದ ಕಾಣಿಕೆ, ಆಫ್ರಿಕಾದಲ್ಲಿ ಶೀಲ ಇನ್ನಿತರ ಚಿತ್ರಗಳು ನೆಲಕಚ್ಚಿ ಮೈ ತುಂಬಾ ಸಾಲ ಮಾಡಿಕೊಂಡರು ದ್ವಾರಕೀಶ್. ಆನಂತರ ಅವರು 18 ವರ್ಷಗಳ ಕಾಲ ಅಜ್ಞಾತವಾಸದಲ್ಲಿಯೇ ಇದ್ದರು. ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲು ಚಂದನವನದ ಹಿರಿಯ ನಿರ್ಮಾಪಕ ತನ್ನ ಪ್ರೀತಿಯ ಬಂಗ್ಲೆಯನ್ನು ಮಾರಿದ್ದರು. 52 ವರ್ಷಗಳಲ್ಲಿ 52 ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ದ್ವಾರಕೀಶ್ ಅವರದ್ದು. ಸುದೀರ್ಘ ಅವಧಿಯಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ದ್ವಾರಕೀಶ್ ಈ ಇಳಿ ವಯಸ್ಸಿನಲ್ಲಿ ಮನೆಯನ್ನು ಕಳೆದುಕೊಂಡು ಕಂಗಾಲಾಗಿದ್ದಾರಂತೆ.

ಕನ್ನಡ ಪ್ರೇಕ್ಷಕರು ಎಂದೂ ಮರೆಯದ ದ್ವಾರಕೀಶ್ ಅವರ ಬೆಸ್ಟ್ ಸಿನಿಮಾಗಳೆಂದರೆ ಮಮತೆಯ ಬಂಧನ, ಮೇಯರ್ ಮುತ್ತಣ್ಣ, ಕುಲ್ಲಾ ಏಜೆಂಟ್ 000, ಕೌಬಾಯ್ ಕುಲ್ಲಾ, ಭಾಗ್ಯವಂತರು, ಕಿಟ್ಟು ಪುಟ್ಟು, ಸಿಂಗಾಪುರದಲ್ಲಿ ರಾಜ ಕುಳ್ಳ, ಪ್ರೀತಿ ಮಾಡು ತಮಾಷೆ ನೋಡು, ಕುಳ್ಳ ಕುಳ್ಳಿ, ಮಂಕು ತಿಮ್ಮ, ಗುರು ಶಿಷ್ಯರು, ಮನೆ ಮನೆ ಕಥೆ, ಪ್ರೇಮದ ಕಾದಂಬರಿ, ಪೆದ್ದ ಗೆದ್ದ, ಅದೃಷ್ಟವಂತ, ನ್ಯಾಯ ಎಲ್ಲಿದೆ, ಗೆದ್ದ ಮಗ, ಆನಂದ ಭೈರವಿ, ಅದುತಾ ವರಿಸು, ಪ್ರಚಂಡ ಕುಳ್ಳ, ಪೊಲೀಸ್ ಪಾಪಣ್ಣ, ಇಂದಿನ ರಾಮಾಯಣ, ಆಪ್ತಮಿತ್ರ,  ಚೌಕ. ದ್ವಾರಕೀಶ್‌ ಕೊನೆಯದಾಗಿ ಚೌಕ ಸಿನಿಮಾದಲ್ಲಿ ನಟಿಸಿದ್ದರು.
 

ಕನ್ನಡ ಪ್ರೇಕ್ಷಕರು ಎಂದೂ ಮರೆಯದ ದ್ವಾರಕೀಶ್ ಅವರ ಬೆಸ್ಟ್ ಸಿನಿಮಾಗಳೆಂದರೆ ಮಮತೆಯ ಬಂಧನ, ಮೇಯರ್ ಮುತ್ತಣ್ಣ, ಕುಲ್ಲಾ ಏಜೆಂಟ್ 000, ಕೌಬಾಯ್ ಕುಲ್ಲಾ, ಭಾಗ್ಯವಂತರು, ಕಿಟ್ಟು ಪುಟ್ಟು, ಸಿಂಗಾಪುರದಲ್ಲಿ ರಾಜ ಕುಳ್ಳ, ಪ್ರೀತಿ ಮಾಡು ತಮಾಷೆ ನೋಡು, ಕುಳ್ಳ ಕುಳ್ಳಿ, ಮಂಕು ತಿಮ್ಮ, ಗುರು ಶಿಷ್ಯರು, ಮನೆ ಮನೆ ಕಥೆ, ಪ್ರೇಮದ ಕಾದಂಬರಿ, ಪೆದ್ದ ಗೆದ್ದ, ಅದೃಷ್ಟವಂತ, ನ್ಯಾಯ ಎಲ್ಲಿದೆ, ಗೆದ್ದ ಮಗ, ಆನಂದ ಭೈರವಿ, ಅದುತಾ ವರಿಸು, ಪ್ರಚಂಡ ಕುಳ್ಳ, ಪೊಲೀಸ್ ಪಾಪಣ್ಣ, ಇಂದಿನ ರಾಮಾಯಣ, ಆಪ್ತಮಿತ್ರ,  ಚೌಕ. ದ್ವಾರಕೀಶ್‌ ಕೊನೆಯದಾಗಿ ಚೌಕ ಸಿನಿಮಾದಲ್ಲಿ ನಟಿಸಿದ್ದರು.

ಏಪ್ರಿಲ್ 26, 1967 ರಂದು ದ್ವಾರಕೀಶ್  ತಮ್ಮ ಸಂಬಂಧಿಯೇ ಆದ ಅಂಬುಜಾ ಅವರನ್ನು ಮದುವೆಯಾಗಿದ್ದು, ಅವರಿಗೆ ಮೂವರು ಪತ್ನಿಯರು. ಒಟ್ಟು 6 ಮಕ್ಕಳು.  4 ಗಂಡು ಮಕ್ಕಳು. ಮೊದಲನೇ ಮಗ ತಂದೆಯೊಂದಿಗೆ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರೆ, ಉಳಿದವರು ಒಂದೆರಡು ಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿ ಈಗ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ  ಇದೇ ದಿನ ಅವರ ಮೊದಲನೇ ಪತ್ನಿ ಅಂಬುಜ  ಅಗಲಿದ್ದರು.

click me!