ಸುದೀಪ್ ನಟನೆಯ ‘ಬಿಲ್ಲ ರಂಗ ಭಾಷಾ’ಕ್ಕೆ ಬೆಂಗಳೂರಿನಲ್ಲಿ 3 ಬೃಹತ್ ಸೆಟ್ಗಳು ರೆಡಿಯಾಗುತ್ತಿದೆ. ಶೀಘ್ರ ಇದೇ ಸೆಟ್ಟಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಈ ಆ್ಯಕ್ಷನ್ ಅಡ್ವೆಂಚರ್ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.
ಇದೊಂದು ಬಹುದೊಡ್ಡ ಪ್ರಾಜೆಕ್ಟ್. ಇಲ್ಲಿ ಹಾಲಿವುಡ್ ಸಿನಿಮಾಗಳ ಥರ ಒಂದು ವಿಶ್ವವನ್ನೇ ಕಟ್ಟಿಕೊಡಲು ಹೊರಟಿದ್ದೇವೆ. ಈ ಸಿನಿಮಾದ ಕಥೆಗೆ ನಾನು ಬಾಲ್ಯದಲ್ಲಿ ಓದುತ್ತಿದ್ದ ಚಂದಮಾಮ, ಬಾಲಮಿತ್ರ ಕಥೆಗಳೇ ಸ್ಫೂರ್ತಿ. ಕಾಲೇಜು ಓದುತ್ತಿದ್ದಾಗಲೇ ಈ ಸಿನಿಮಾದ ಕಥೆ ಬರೆದಿಟ್ಟಿದ್ದೆ.
ರಂಗಿತರಂಗ ಸಿನಿಮಾ ಬಳಿಕ ಸ್ಕ್ರಿಪ್ಟ್ ಡೆವಲಪ್ ಮಾಡಿದೆ. ತೆರೆಮೇಲೆ ತರಲು ದೊಡ್ಡ ಬಜೆಟ್ ಬೇಕಿದ್ದರಿಂದ ಈ ಸಿನಿಮಾ ಜೀವತಳೆಯಲು ಇಷ್ಟು ಕಾಲ ಕಾಯಬೇಕಾಯಿತು ಎಂದಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾದಲ್ಲಿ ಆ್ಯಕ್ಷನ್ ಸೀನ್ಗಳೇ ಇರಲಿಲ್ಲ. ಆದರೆ ಇದು ಔಟ್ ಆ್ಯಂಡ್ ಔಟ್ ಸುದೀಪ್ ಸಿನಿಮಾ. ಅವರಿಗಾಗಿಯೇ ಬರೆದ ಸ್ಕ್ರಿಪ್ಟ್. ಹೀಗಾಗಿ ಈ ಸಿನಿಮಾದಲ್ಲಿ ಸುದೀಪ್ ಫ್ಯಾನ್ಗಳಿಗೆ ಬೇಸರವಾಗುವ ಪ್ರಶ್ನೆಯೇ ಇಲ್ಲ.
ಈ ಸಿನಿಮಾದಲ್ಲಿ ನನ್ನ ಹಿಂದಿನ ಚಿತ್ರಗಳಂತೆ ತುಳುನಾಡು, ದೈವದಂಥಾ ಸನ್ನಿವೇಶಗಳಿರುವುದಿಲ್ಲ. ಆದರೆ ಭಾರತೀಯ ಹಿನ್ನೆಲೆಯಲ್ಲೇ ಸಿನಿಮಾ ಕಾಣಿಸಿಕೊಳ್ಳಲಿದೆ ಎಂದು ಅನೂಪ್ ಹೇಳಿದ್ದಾರೆ.