ರಾಮಲಿಂಗಾ ರೆಡ್ಡಿ 4 ಸಾಲಿನ ರಾಜೀನಾಮೆ ಪತ್ರದಲ್ಲಿ ಇಷ್ಟೊಂದು ದೋಷ? ಜೈ ಕನ್ನಡಾಂಬೆ- ಜಾಲತಾಣದಲ್ಲಿ ಟ್ರೋಲ್​

Published : Jun 06, 2026, 12:53 PM IST

ಜಲಸಂಪನ್ಮೂಲ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದರು. ಆದರೆ, ಅವರ ನಾಲ್ಕು ಸಾಲಿನ ರಾಜೀನಾಮೆ ಪತ್ರದಲ್ಲಿದ್ದ ಮೂರು ಕಾಗುಣಿತ ದೋಷಗಳನ್ನು ನೆಟ್ಟಿಗರು ಪತ್ತೆ ಹಚ್ಚಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

PREV
16
ರಾಮಲಿಂಗಾ ರೆಡ್ಡಿ ರಾಜೀನಾಮೆ

ಉಪ ಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್​ ಅವರ ಮುಖ್ಯಮಂತ್ರಿಯ ಕನಸು ನನಸಾಯ್ತು ಎನ್ನುವಷ್ಟರಲ್ಲಿಯೇ ರಾಜ್ಯ ರಾಜಕೀಯದಲ್ಲಿ ಅಲ್ಲೋ ಕಲ್ಲೋಲವೇ ಸೃಷ್ಟಿಯಾಗುತ್ತಿದೆ. ಜಲಸಂಪನ್ಮೂಲ ಖಾತೆಯಿಂದ ತೀವ್ರ ಅಸಮಾಧಾನಗೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ ನಿನ್ನೆ ರಾಜೀನಾಮೆ ಪತ್ರಕ್ಕೆ ಅಧಿಕೃತವಾಗಿ ಸಹಿ ಮಾಡಿದರು. ಇದರ ನಡುವೆ ರಾಮಲಿಂಗಾ ರೆಡ್ಡಿ ಮನ ಒಲಿಕೆ ಪ್ರಯತ್ನಗಳು ವಿಫಲಗೊಂಡಿದ್ದವು.

26
ಯಶಸ್ವಿಯಾಯಿತಾ ಸಂಧಾನ?

ಆದರೆ, ಇಂದು, ರಾಮಲಿಂಗಾ ರೆಡ್ಡಿ ಅವರ ಮನವೊಲಿಸಲು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನಡೆಸಿದ ಯತ್ನ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಯ ನಡುವೆ ರಾಮಲಿಂಗಾ ರೆಡ್ಡಿಯವರು ತಮ್ಮ ರಾಜೀನಾಮೆಯನ್ನು ಹಿಂಪಡೆಯುವ ಸಾಧ್ಯತೆಗಳಿವೆ ಎಂದು ಸದ್ಯ ಬಂದಿರುವ ವರದಿಗಳು ಹೇಳುತ್ತಿವೆ.

36
ಕೊಡುತ್ತಾರೋ, ಬಿಡುತ್ತಾರೋ

ಅವರು ರಾಜೀನಾಮೆ ಹಿಂದಕ್ಕೆ ಪಡೆಯುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಆದರೆ, ಅವರ ರಾಜೀನಾಮೆ ಪತ್ರ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​ಗೆ ಒಳಗಾಗಿದೆ. ನಾಲ್ಕು ಸಾಲುಗಳ ರಾಜೀನಾಮೆ ಪತ್ರದಲ್ಲಿ ಮೂರು ಕಾಗುಣಿತ ದೋಷಗಳನ್ನು ನೆಟ್ಟಿಗರು ಕಂಡು ಹಿಡಿದಿದ್ದಾರೆ. ಒಂದು ರಾಜೀನಾಮೆ  ಪತ್ರವನ್ನು ಕೊಡುವಾಗ ಅದನ್ನು ಹಲವಾರು ಅಧಿಕಾರಿಗಳು, ನೌಕರರು ನೋಡಿರುತ್ತಾರೆ. ದೋಷಗಳನ್ನು ಸರಿಪಡಿಸಿರುತ್ತಾರೆ. ಇದರ ಹೊರತಾಗಿಯೂ ಇಷ್ಟು ದೋಷಗಳು ಇವೆ ಎನ್ನುವುದರ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

46
ಕಾಗುಣಿತ ದೋಷಗಳು

ಸತೀಶ್​ ನಾಯ್ಕ ಭದ್ರಾವತಿ ಎನ್ನುವವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ರಾಜೀನಾಮೆ ಪತ್ರವನ್ನು ಶೇರ್​ ಮಾಡಿದ್ದು, ಅದರಲ್ಲಿನ ಕಾಗುಣಿತ ದೋಷವನ್ನು ಎತ್ತಿ ತೋರಿಸಿದ್ದಾರೆ. ಹೇರಿಕೆ ಎಂದು ಅನ್ಯ ಭಾಷೆಗಳ ವಿರುದ್ಧ ಹೋರಾಡುವ ನಮ್ಮ ಕನ್ನಡಪರ ಹೋರಾಟಗಾರರಿಗೆ, ಆಡಳಿತ ಸರ್ಕಾರದವರ ಈ ತಪ್ಪುಗಳು ಏಕೆ ಕಾಣಿಸುವುದಿಲ್ಲ, ಕಂಡರೂ ತೆಪ್ಪಗಿರುವರಾ, ಅಥವ ಅವರ ಕನ್ನಡ ಭಾಷೆಯ ಕುರಿತಾಗಿನ ಅಸಡ್ಡೆಗೆ ಉದಾಸೀನತೆಯೇ ಅವರ ಕ್ರಮವಾ? ಇದರ ವಿರುದ್ಧವಾಗಿ ಕನ್ನಡಪರ ನಿರ್ದೇಶಕರು ಮತ್ತು ಕರವೇ ಹೋರಾಟಗಾರರು ಏಕೆ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ಪ್ರಶ್ನಿಸುತ್ತಲೇ ಈ ಪೋಸ್ಟ್​ ಅನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ.

56
ಎಷ್ಟೊಂದು ದೋಷಗಳು!

ರಾಜೀನಾಮೆ ಪತ್ರದಲ್ಲಿ ಎಷ್ಟೊಂದು ದೋಷಗಳಿವೆಯಪ್ಪಾ! ಎಂದು ಶೀರ್ಷಿಕೆ ಕೊಟ್ಟಿರುವ ಅವರು, ದೇವರೇ, ಕರ್ನಾಟಕ ರಾಜ್ಯದಲ್ಲಿ, ಆಡಳಿತವನ್ನು ನಡೆಸುತ್ತಿರುವ ಧುರೀಣ ಸಚಿವರಿಂದ, ರಾಜ್ಯದ ಆಡಳಿತ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಪರಿಪೂರ್ಣ ರೂಪದಲ್ಲಿಯೇ ಉಳಿಸಿಕೊಡಪ್ಪಾ ಎನ್ನುತ್ತಾ ಪತ್ರದಲ್ಲಿ ಅಚ್ಚಾಗಿರುವ ಕೆಲವು ಪದಗಳನ್ನು ನೋಡಿ ಎಂದು ತಪ್ಪುಗಳ ಬಗ್ಗೆ ಬರೆದಿದ್ದಾರೆ.

ವಿರುದ್ದವಾಗಿ - ಸರಿಯಾಗಿ ಬರೆಯಬೇಕಾಗಿರುವ ಕ್ರಮ ವಿರುದ್ಧವಾಗಿ

ಸಾದ್ಯವಾಗದ - ಸರಿಯಾಗಿ ಬರೆಯಬೇಕಾಗಿರುವ ಕ್ರಮ ಸಾಧ್ಯವಾಗದ

ಮುಂದುವರಿಯುತ್ತೇನೆ - ಸರಿಯಾಗಿ ಬರೆಯಬೇಕಾಗಿರುವ ಕ್ರಮ ಮುಂದುವರೆಯುತ್ತೇನೆ... ಹೀಗೆ ಮೂರು ತಪ್ಪುಗಳನ್ನು ನಾಲ್ಕು ಸಾಲುಗಳ ಕನ್ನಡದ ರಾಜೀನಾಮೆ ಪತ್ರದಲ್ಲಿ ಎತ್ತಿ ತೋರಿಸಿದ್ದಾರೆ.

66
ಪತ್ರ ಬರೆಯುವುದು ಹೇಗೆ?

ಇದರ ಜೊತೆ ಜೊತೆಗೆನೇ ರಾಜೀನಾಮೆ ಪತ್ರವನ್ನು ಹೇಗೆ ಬರೆಯಬೇಕು, ಎಲ್ಲಿ ಯಾವ ಪದ ಸೇರಿಸಬೇಕು, ಕಾಮಾ ಎಲ್ಲಿ ಹೇಗೆ ಬಳಸಬೇಕು ಎನ್ನುವುದನ್ನು ಈ ಪೋಸ್ಟ್​ನೊಂದಿಗೆ ಫೇಸ್​ಬುಕ್​ ಬಳಕೆದಾರರು ಸ್ಪಷ್ಟವಾಗಿ ನಮೂದಿಸಿದ್ದು, ಅದರ ಲಿಂಕ್​ ಇಲ್ಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories