ಡಿ.ಕೆ.ಶಿವಕುಮಾರ್ ಭಧ್ರಕೋಟೆಯಲ್ಲಿರೋ ಒಡಿಶಾ ಶಾಸಕರಿಗೆ ಆಪರೇಷನ್ ಕಮಲ; ಬ್ಲ್ಯಾಂಕ್ ಚೆಕ್ ಸಮೇತ ಸಿಕ್ಕಿಬಿದ್ದ ಮುಖಂಡರು!

Published : Mar 15, 2026, 12:19 PM IST

ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್ ರಕ್ಷಣೆಯಲ್ಲಿ ಬಿಡದಿ ರೆಸಾರ್ಟ್‌ನಲ್ಲಿದ್ದ ಒಡಿಶಾ ಕಾಂಗ್ರೆಸ್ ಶಾಸಕರನ್ನು ಸೆಳೆಯಲು 'ಆಪರೇಷನ್ ಕಮಲ'ಕ್ಕೆ ಯತ್ನ ನಡೆದಿದೆ. ಬ್ಲ್ಯಾಂಕ್ ಚೆಕ್‌ಗಳ ಸಮೇತ ಬಂದಿದ್ದ ವ್ಯಕ್ತಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

PREV
16
ಟ್ರಬಲ್ ಶೂಟರ್ ಭಧ್ರಕೋಟೆಯಲ್ಲೇ ಆಪರೇಷನ್ ಕಮಲ

ಬೆಂಗಳೂರು ದಕ್ಷಿಣ/ರಾಮನಗರ (ಮಾ.15): ದೇಶದ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಪಾಲಿನ 'ಟ್ರಬಲ್ ಶೂಟರ್' ಎಂದೇ ಖ್ಯಾತಿ ಪಡೆದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭದ್ರಕೋಟೆಯಲ್ಲೇ ಹೈವೋಲ್ಟೇಜ್ ರಾಜಕೀಯ ಡ್ರಾಮಾ ನಡೆದಿದೆ. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಡದಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಒಡಿಶಾ ಕಾಂಗ್ರೆಸ್ ಶಾಸಕರನ್ನು ಸೆಳೆಯಲು 'ಆಪರೇಷನ್ ಕಮಲ'ಕ್ಕೆ ಯತ್ನ ನಡೆದಿದ್ದು, ಬ್ಲ್ಯಾಂಕ್ ಚೆಕ್‌ಗಳ ಸಮೇತ ಬಂದಿದ್ದ ವ್ಯಕ್ತಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

26
ಘಟನೆಯ ಹಿನ್ನೆಲೆ ಏನು?

ನಾಳೆ ಒಡಿಶಾದಲ್ಲಿ ರಾಜ್ಯಸಭಾ ಚುನಾವಣೆ ನಡೆಯಲಿದೆ. ಈ ವೇಳೆ ಶಾಸಕರ ಕುದುರೆ ವ್ಯಾಪಾರ ನಡೆಯುವ ಭೀತಿಯಿಂದಾಗಿ ಒಡಿಶಾ ಕಾಂಗ್ರೆಸ್ ಶಾಸಕರನ್ನು ಡಿ.ಕೆ. ಶಿವಕುಮಾರ್ ಅವರ ರಕ್ಷಣೆಯಲ್ಲಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ರಾಮನಗರ ಜಿಲ್ಲೆಯ ಬಿಡದಿ ಸಮೀಪದ 'ವಂಡರ್ ಲಾ' ರೆಸಾರ್ಟ್‌ನಲ್ಲಿ ಈ ಶಾಸಕರಿಗೆ ವಾಸ್ತವ್ಯ ಕಲ್ಪಿಸಲಾಗಿತ್ತು. ಆದರೆ, ಶಾಸಕರು ಬೆಂಗಳೂರಿಗೆ ಬಂದರೂ ಆಪರೇಷನ್ ಕಮಲದ ಕರಿನೆರಳು ಮಾತ್ರ ಅವರನ್ನು ಬೆನ್ನಟ್ಟಿದೆ.

36
ಬ್ಲ್ಯಾಂಕ್ ಚೆಕ್ ಹಿಡಿದು ಬಂದಿದ್ದ 'ಅತಿಥಿಗಳು'

ಒಡಿಶಾದಿಂದ ಬಂದಿದ್ದ ಮೂವರು ವ್ಯಕ್ತಿಗಳು ಶಾಸಕರು ತಂಗಿದ್ದ ಅದೇ ವಂಡರ್ ಲಾ ರೆಸಾರ್ಟ್‌ನಲ್ಲಿ ರೂಂ ಬುಕ್ ಮಾಡಿಕೊಂಡಿದ್ದರು. ಶಾಸಕರ ಜೊತೆ ಮಾತುಕತೆ ನಡೆಸಿ ಅವರನ್ನು ತಮ್ಮತ್ತ ಸೆಳೆಯಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಶಾಸಕರನ್ನು ಖರೀದಿ ಮಾಡಲು ಈ ವ್ಯಕ್ತಿಗಳು ತಮ್ಮೊಂದಿಗೆ ಸಹಿ ಮಾಡಿರುವ 'ಬ್ಲ್ಯಾಂಕ್ ಚೆಕ್'ಗಳನ್ನು (ಸಹಿ ಮಾಡಿದ ಖಾಲಿ ಚೆಕ್) ತಂದಿದ್ದರು. ಈ ಚೆಕ್‌ಗಳು ಒಡಿಶಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಗೆ ಸೇರಿದವು ಎಂದು ತಿಳಿದುಬಂದಿದೆ.

46
ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ಪತ್ತೆ

ಶಾಸಕರನ್ನು ಭೇಟಿ ಮಾಡಲು ಈ ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾಗ ಅನುಮಾನಗೊಂಡ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅವರನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಅವರ ಬಳಿ ಬ್ಲ್ಯಾಂಕ್ ಚೆಕ್‌ಗಳು ಪತ್ತೆಯಾಗಿದ್ದು, ಆಪರೇಷನ್ ಕಮಲದ ಹೂರಣ ಬಯಲಾಗಿದೆ. ತಕ್ಷಣವೇ ಕಾರ್ಯಕರ್ತರು ಆ ಮೂವರನ್ನು ಹಿಡಿದು ಕೂರಿಸಿದ್ದು, ಬಿಡದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

56
ಸ್ಥಳಕ್ಕೆ ಪೊಲೀಸರ ಭೇಟಿ:

ಮಾಹಿತಿ ಸಿಗುತ್ತಿದ್ದಂತೆಯೇ ಬಿಡದಿ ಪೊಲೀಸರು ರೆಸಾರ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರು ತಂದಿದ್ದ ಬ್ಲ್ಯಾಂಕ್ ಚೆಕ್ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಯಾರ ಪರವಾಗಿ ಬಂದಿದ್ದರು? ಇವರಿಗೆ ಹಣದ ಆಮಿಷ ಒಡ್ಡಲು ಸೂಚಿಸಿದವರು ಯಾರು? ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. 

'ಡಿ.ಕೆ. ಶಿವಕುಮಾರ್ ಅವರ ರಕ್ಷಣೆಯಲ್ಲಿದ್ದರೂ ಬಿಜೆಪಿ ಇಂತಹ ಕೆಳಮಟ್ಟದ ರಾಜಕಾರಣಕ್ಕೆ ಇಳಿದಿದೆ. ಬ್ಲ್ಯಾಂಕ್ ಚೆಕ್ ಹಿಡಿದು ಶಾಸಕರನ್ನು ಖರೀದಿ ಮಾಡಲು ಬಂದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ' ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹಣದ ಬಲ ಬಳಸುತ್ತಿದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

66
ರೆಸಾರ್ಟ್ ಸುತ್ತಮುತ್ತ ಪೊಲೀಸ್ ಭದ್ರತೆ

ನಾಳೆ ಚುನಾವಣೆ ನಡೆಯಲಿರುವ ಕಾರಣ, ಉಳಿದಿರುವ ಕೆಲವೇ ಗಂಟೆಗಳಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಶಾಸಕರ ಖರೀದಿ ನಡೆಯದಂತೆ ರೆಸಾರ್ಟ್ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಡಿ.ಕೆ. ಶಿವಕುಮಾರ್ ಅವರ ತವರಲ್ಲೇ ನಡೆದ ಈ ಆಪರೇಷನ್ ಕಮಲ ಯತ್ನ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories