ಸಚಿವ ಸಂಪುಟ ಪುನಾರಚನೆ ಚರ್ಚೆಯ ನಡುವೆ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿರುವ ಸುರೇಶ್, ನಾಯಕತ್ವ ಬದಲಾವಣೆ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದು, ತಮ್ಮ ಸಹೋದರ ಸಿಎಂ ಆಗಬೇಕೆಂಬ ಆಸೆಯನ್ನು ಪುನರುಚ್ಚರಿಸಿದ್ದಾರೆ.
ಸಚಿವ ಸಂಪುಟ ಪುನಾರಚನೆ ಚರ್ಚೆ ಬೆನ್ನಲ್ಲೇ ಡಿಕೆ ಬ್ರದರ್ಸ್ ಅಖಾಡಕ್ಕಿಳಿದಿದ್ದಾರೆ. ಶನಿವಾರವೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ಇಂದು ಮಾಜಿ ಸಂಸದ ಡಿಕೆ ಸುರೇಶ್ ಸಹ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದಾರೆ.
25
ಡಿಕೆ ಸುರೇಶ್
ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಸುರೇಶ್, ನಮ್ಮ ಅಣ್ಣ ಸಿಎಂ ಆಗಬೇಕೆಂದು ನಾನು ಹಲವು ಬಾರಿ ಹೇಳಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನವೇ ಎಲ್ಲವೂ ಅಂತಿಮ. ಸಿಎಂ, ಸಚಿವ ಸಂಪುಟ ಹಾಗೂ ಡಿಕೆ ಶಿವಕುಮಾರ್ ಗೆ ಇರಬಹುದು ಎಲ್ಲರಿಗೂ ಹೈಕಮಾಂಡ್ ತೀರ್ಮಾನವೇ ಮುಖ್ಯ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಎಂದು ಕಾದು ನೋಡೋಣ ಎಂದು ಹೇಳಿದರು.
35
ನಾಯಕತ್ವ ಬದಲಾವಣೆ
ಸಂಪುಟ ಪುನಾರಚನೆ ಆದರೆ ನಾಯಕತ್ವ ಬದಲಾವಣೆ ಆಗಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಏನೇ ಇದ್ದರೂ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಬೇಕೇ ಹೊರತು ಬೇರೆ ಯಾರು ಅಲ್ಲ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆ ಆಗಲ್ಲ ಎಂಬ ಮಾತಿಗೆ ತಿರುಗೇಟು ನೀಡಿದರು.
ನನಗೆ ಬೇರೆ ಕೆಲಸ ಇದೆ ಅದಕ್ಕಾಗಿ ನಾಳೆ ದೆಹಲಿಗೆ ಹೋಗ್ತಿದ್ದೇನೆ. ನಾನು ದೆಹಲಿಗೆ ಆಗಾಗ ಹೋಗುತ್ತಿರುತ್ತೇನೆ. ದೆಹಲಿಗೆ ಹೋದಾಗ ಪಕ್ಷದ ಮುಖಂಡರ ಭೇಟಿಗೆ ಅವಕಾಶ ಸಿಕ್ಕಿದ್ರೆ ಭೇಟಿ ಮಾಡುತ್ತೇನೆ ಎಂದು ಡಿಕೆ ಸುರೇಶ್ ತಿಳಿಸಿದರು.
ಮುಂದುವರಿದು ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆಯೂ ಮಾತನಾಡಿದ ಮಾಜಿ ಸಂಸದರು, ಎಲೆಕ್ಷನ್ಗೂ ಮುನ್ನವೇ 10 ಸಾವಿರ ರೂಪಾಯಿ ಹಾಕಿದ್ದು, ಜನರು ತೀರ್ಪು ನೀಡಿದ್ದಾರೆ. ಚುನಾವಣೆಯಲ್ಲಿ ಸೋಲು ಮತ್ತು ಗೆಲುವು ಇದ್ದೇ ಇರುತ್ತೆ. ಪಕ್ಷಕ್ಕೆ ಸೋಲು-ಗೆಲುವು ಹೊಸದಲ್ಲ ಎಂದು ಹೇಳಿದರು.
ಸಚಿವ ಪರಮೇಶ್ವರ್ ಹೇಳಿಕೆ ವಿಚಾರ ಗೊತ್ತಿಲ್ಲ. ಸಂಪುಟ ಪುನಾರಚನೆ ಸಿಎಂ ಸರ್ವಾಧಿಕಾರ. ಶಿವಕುಮಾರ್ ಸಲಹೆ ಕೇಳಿದ್ರೆ ಕೊಡ್ತಾರೆ. ಸಿಎಂ ಇದ್ದಾರೆ ನೋಡ್ಕೋತಾರೆ. ಹೈಕಮಾಂಡ್ ಹೇಳಿದನ್ನ ಶಿವಕುಮಾರ್ ಕೇಳ್ತಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೆಂಬ ಆಸೆ ಡಿಕೆ ಶಿವಕುಮಾರ್ ಅವರಿಗಿಲ್ಲ. ಹೈಕಮಾಂಡ್ ಏನು ಹೇಳ್ತಾರೋ? ಅದನ್ನು ಶಿವಕುಮಾರ್ ಕೇಳುತ್ತಾರೆ ಎಂದರು.