ಜಮೀನಿಗೆ ರಸ್ತೆ ನಿರ್ಮಿಸಲು ಲಂಚ ಕೇಳಿದ ಅಧಿಕಾರಿಗಳ ವಿರುದ್ಧ ರೈತರೊಬ್ಬರು ವಿನೂತನವಾಗಿ ಪ್ರತಿಭಟಿಸಿದ್ದಾರೆ. ತಾನು ಬೆಳೆದ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತೆಗೆದುಕೊಂಡು ಬಂದ ರೈತ ಪ್ರಸನ್ನಕುಮಾರ್ ನನ್ನ ಬಳಿ ಹಣವಿಲ್ಲ, ಬೆಳೆದ ಮೂಲಂಗಿಯನ್ನು ಅಧಿಕಾರಿಗಳಿಗೆ ಕೊಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು
ಮಧುಗಿರಿ: ಜಮೀನಿಗೆ ರಸ್ತೆ ಮಾಡಿಕೊಡಲು ಲಂಚ ಕೇಳಿದ ಅಧಿಕಾರಿಗಳಿಗೆ ರೈತನೊಬ್ಬ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡಲು ತಾಲೂಕು ಕಚೇರಿಗೆ ತಂದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಬುಧವಾರ ನಡೆದಿದೆ. ಹೀಗೆ ತಮ್ಮ ಜಮೀನಿಗೆ ದಾರಿ ಮಾಡಿಕೊಡಲು ಸತಾಯಿಸಿದ ಅಧಿಕಾರಿಗಳ ವಿರುದ್ಧ ರೈತರೊಬ್ಬರು ವಿನೂತೂನ ಪ್ರತಿಭಟನೆ ಮಾಡಿದ್ದಾರೆ.
25
ತಾಲೂಕು ಕಚೇರಿಗೆ ಮೂಲಂಗಿ ತಂದು ಪ್ರತಿಭಟನೆ
ತಮ್ಮ ದ್ವಿಚಕ್ರ ವಾಹನದಲ್ಲಿ ಮೂಲಂಗಿ ತರಕಾರಿಯನ್ನು ತೆಗೆದುಕೊಂಡು ಬಂದ ತಾಲೂಕಿನ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ತಾಲೂಕು ಕಚೇರಿಯ ಮುಂದೆ ಮೈಕ್ ಹಿಡಿದು ನನಗೆ ಲಂಚ ನೀಡಲು ಹಣವಿಲ್ಲ, ಬದಲಿಗೆ ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ ಬನ್ನಿ ಎಂದು ಕೂಗಿದ್ದಾರೆ. ತನ್ನ ಜಮೀನಿಗೆ ರಸ್ತೆ ಇಲ್ಲದ ಕಾರಣ ರಸ್ತೆ ಮಾಡಿಕೊಡಲು 2 ವರ್ಷದ ಹಿಂದೆ ಅವರು ಅರ್ಜಿ ನೀಡಿ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ದಿನಕ್ಕೊಂದು ಕಾರಣ ಹೇಳಿ ಅವರನ್ನು ಸತಾಯಿಸಿದ್ದಾರೆ.
35
ರೈತ ಪ್ರಸನ್ನಕುಮಾರ್ ಆರೋಪವೇನು?
ನಕ್ಷೆಯಲ್ಲಿ ನನ್ನ ಜಮೀನಿಗೆ ಹೋಗಲು ರಸ್ತೆ ಇದೆ. ಆದರೆ ಆ ರಸ್ತೆ ಒತ್ತುವರಿಯಾಗಿದೆ. ಆದ್ದರಿಂದ ಜಮೀನಿಗೆ ತೆರಳಲು ಹೊಸ ದಾರಿಯನ್ನೂ ಮಾಡಿಕೊಡುವಂತೆ ಅಥವಾ ಒತ್ತುವರಿ ತೆರವು ಮಾಡುವಂತೆ ಮನವಿ ಮಾಡಿದ್ದೆ. ಹೀಗಾಗಿ ತಹಶೀಲ್ದಾರ್ ಅವರು ಸ್ಥಳೀಯ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಿದರೂ ಯಾವುದೇ ಕೆಲಸ ಆಗಿಲ್ಲ. ಅಷ್ಟೇ ಅಲ್ಲ, ಎರಡು ತಿಂಗಳ ಹಿಂದೆ ಲೋಕಾಯುಕ್ತರು ಆಗಮಿಸಿ, ತಿಂಗಳೊಳಗೆ ದಾರಿ ಮಾಡಿಕೊಡುವಂತೆ ಸೂಚಿಸಿದ್ದರು. ಆದರೂ ಈವರೆಗೆ ಯಾವ ಅಧಿಕಾರಿಯೂ ಬಂದಿಲ್ಲ.
ಸ್ಥಳೀಯ ಅಧಿಕಾರಿಗಳು ದಿನ ಒಂದೊಂದು ಕಥೆ ಹೇಳಿ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳಿಗೆ ದುಡ್ಡು ಕೊಡಲು ನನ್ನ ಬಳಿ ಹಣ ಇಲ್ಲ. ನಾನು ತರಕಾರಿ ಮಾರಿ ಬದುಕುತ್ತಿದ್ದೇನೆ. ಆದ್ದರಿಂದ ಅಧಿಕಾರಿಗಳಿಗೆ ನಾನು ಬೆಳೆದ ಮೂಲಂಗಿ ಕೊಡಲು ಆಗಮಿಸಿದ್ದೇನೆ ಎಂದು ರೈತ ಪ್ರಸನ್ನಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಏನಾದರೂ ಮಾಡಿ ನನಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ರಸ್ತೆ ನಿರ್ಮಿಸಲು ಅಧಿಕಾರಿಗಳು ಹಿಂದೇಟು ಹಾಕಿದ್ದರಿಂದ ಬೇಸತ್ತು ರೈತ ಪ್ರಸನ್ನಕುಮಾರ್ ಲೋಕಾಯುಕ್ತ ಕೋರ್ಟ್ ಮೊರೆ ಹೋಗಿದ್ದರು. ಲೋಕಾಯುಕ್ತ ಕೋರ್ಟ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಒಂದು ತಿಂಗಳಲ್ಲಿ ರಸ್ತೆ ನಿರ್ಮಿಸಿಕೊಡುವಂತೆ ಆದೇಶಿಸಿತ್ತು. ಆದರೆ 2 ವರ್ಷ ಕಳೆದರೂ ರಸ್ತೆ ಆಗಲಿಲ್ಲ ಎಂದು ರೈತ ದೂರಿದ್ದಾರೆ. ಇಲ್ಲಿನ ಆರ್ಐ ಜಯಪ್ರಕಾಶ್, ವಿಎ ಶರಣ್ ಇಬ್ಬರು ದಿನವೂ ಒಂದೊಂದು ಕತೆ ಹೇಳಿ ನನ್ನನ್ನು ಅಲೆದಾಡುವಂತೆ ಮಾಡ್ತಿದ್ದಾರೆ. ನನಗೆ ಯಾರಾದರೂ ಸಹಾಯ ಮಾಡಿ, ಇಲ್ಲದೇ ಹೋದರೆ ನಾನು ಇನ್ನೊಂದು ವಾರದಲ್ಲಿ ಇಲ್ಲೇ ಬಂದು ಸಾಯುತ್ತೇನೆ ಎಂದು ರೈತ ಬೇಜಾರು ಮಾಡಿಕೊಂಡಿದ್ದಾರೆ.